ಕುಂದಾಪ್ರ ಡಾಟ್ ಕಾಂ ವರದಿ
ಗಂಗೊಳ್ಳಿ : ಬೆಳೆಯುತ್ತಿರುವ ಪಟ್ಟಣ ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಇರುವ ಏಕೈಕ ಅಂಚೆ ಕಛೇರಿಯು ಸಮಸ್ಯೆಗಳ ಆಗರವಾಗಿದ್ದು, ಇಲಾಖೆಯ ಅಸಮರ್ಪಕ ಸೇವೆಯಿಂದ ಜನರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಗಂಗೊಳ್ಳಿಯು ಸುಮಾರು ಒಂದು ಸಾವಿರ ಎಕ್ರೆ ವಿಸ್ತೀರ್ಣದ ಮೀನುಗಾರಿಕಾ ಬಂದರು ಪ್ರದೇಶವಾಗಿದ್ದು, ಸುಮಾರು 25 ಸಾವಿರಕ್ಕೂ ಮಿಕ್ಕಿ ಜನರು ವಾಸಿಸುತ್ತಿದ್ದಾರೆ. ಎರಡು ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಸುಮಾರು 10ಕ್ಕೂ ಮಿಕ್ಕಿ ಸಹಕಾರಿ, ಸೌಹಾರ್ದ ಸಂಘಗಳು ಕಾರ್ಯನಿರ್ವಹಿಸುತ್ತಿದೆ ಅಲ್ಲದೆ ಸುಮಾರು 10ಕ್ಕೂ ಮಿಕ್ಕಿ ಶಾಲಾ ಕಾಲೇಜುಗಳು ಗಂಗೊಳ್ಳಿಯಲ್ಲಿ ಮಕ್ಕಳ ವಿದ್ಯಾರ್ಜನೆಯಲ್ಲಿ ತೊಡಗಿಕೊಂಡಿದೆ. ಮೀನುಗಾರಿಕಾ ಚಟುವಟಿಕೆಗಳಿಂದ ಸದಾ ಬ್ಯೂಸಿಯಾಗಿರುವ ಗಂಗೊಳ್ಳಿ ಗ್ರಾಮದ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಛೇರಿಯು ಗ್ರಾಹರಿಗೆ ಉತ್ತಮ ಸೇವೆ ನೀಡುವಲ್ಲಿ ವಿಫಲವಾಗಿದೆ.
ಈ ಹಿಂದೆ ಗಂಗೊಳ್ಳಿಯಲ್ಲಿ ಎರಡು ಅಂಚೆ ಕಛೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಭಾರ ಕಡಿಮೆಯಾದ ಹಿನ್ನಲೆಯಲ್ಲಿ ಬಂದರು ಅಂಚೆ ಕಛೇರಿಯನ್ನು ಮುಚ್ಚಲಾಗಿತ್ತು. ಬಳಿಕ ಗಂಗೊಳ್ಳಿಯ ಮಧ್ಯಭಾಗದಲ್ಲಿ ಬಾಡಿಗೆ ಕಟ್ಟಡದಲ್ಲಿ ಗಂಗೊಳ್ಳಿ ಅಂಚೆ ಕಛೇರಿಯು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಓರ್ವ ಅಂಚೆ ಪಾಲಕರು, ಇಬ್ಬರು ಪೋಸ್ಟ್ಮ್ಯಾನ್ ಹಾಗೂ ಓರ್ವ ಪ್ಯಾಕರ್ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಚೆ ಕಛೇರಿಯಲ್ಲಿ ಬೆಳಿಗ್ಗೆ ಅಂಚೆ ವಿತರಣೆ ಸೇರಿದಂತೆ ಇನ್ನಿತರ ಕೆಲಸವನ್ನು ನಿರ್ವಹಿಸುವುದರ ಜೊತೆಗೆ ದೂರವಾಣಿ, ವಿದ್ಯುತ್ ಬಿಲ್ಲು ಸ್ವೀಕರಿಸಬೇಕಾಗಿದೆ. ಮಧ್ಯಾಹ್ನ ೨ ಗಂಟೆ ಒಳಗೆ ಅಂಚೆ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಮುಗಿಸಬೇಕಾಗಿರುವುದರಿಂದ ಅಂಚೆ ಪಾಲಕರು ಕೆಲಸದಿಂದ ಹೈರಾಣಾಗಿದ್ದಾರೆ.
ಗಂಗೊಳ್ಳಿ ಅಂಚೆ ಕಛೇರಿಯಲ್ಲಿ ಕಾಡುತ್ತಿರುವ ಸಿಬ್ಬಂದಿ ಕೊರತೆಯಿಂದ ಜನರಿಗೆ ಸರಿಯಾದ ಸೇವೆ ದೊರೆಯುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಪ್ರತಿನಿತ್ಯ ನೂರಾರು ಮಂದಿ ಅಂಚೆ ಕಛೇರಿಯಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ದೃಶ್ಯ ಮಾಮೂಲಾಗಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಸಾಕಷ್ಟು ಹೆಚ್ಚಳವಾಗಿದೆ ಅಲ್ಲದೆ ಸಂಘ ಸಂಸ್ಥೆಗಳು, ಬ್ಯಾಂಕುಗಳ ಸಂಖ್ಯೆ ಕೂಡ ಹೆಚ್ಚಾಗಿರುವುದರಿಂದ ಸಹಕವಾಗಿಯೇ ಅಂಚೆ ಕಛೇರಿಯ ಕಾರ್ಯ ಹೆಚ್ಚಾಗಿದೆ. ಅಂಚೆ ವಿತರಣೆಯ ಜೊತೆಗೆ ಸರಕಾರದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಪಿಂಚಣಿ ಹಣವನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಪೋಸ್ಟ್ಮ್ಯಾನ್ಗಳು ಮಾಡುತ್ತಿದ್ದಾರೆ. ಗಂಗೊಳ್ಳಿ ಅಂಚೆ ಕಛೇರಿಯಲ್ಲಿ ಕಾರ್ಯಾಭಾರ ಹೆಚ್ಚಾಗಿರುವುದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಿಳಿದಿದ್ದರೂ ಹೆಚ್ಚುವರಿ ಸಿಬ್ಬಂದಿಗಳು ಗಂಗೊಳ್ಳಿಗೆ ನಿಯೋಜನೆ ಮಾಡಿಲ್ಲ. ಕಡಿಮೆ ಕಾರ್ಯಭಾರ ಇರುವ ಅಂಚೆ ಕಛೇರಿಗಳಿಗೆ ಹೆಚ್ಚು ಸಿಬ್ಬಂದಿಗಳಿದ್ದು, ಗಂಗೊಳ್ಳಿಯಲ್ಲಿ ಮಾತ್ರ ಹೆಚ್ಚುವರಿ ಸಿಬ್ಬಂದಿಗಳನ್ನು ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈಗಿರುವ ಸಿಬ್ಬಂದಿಗಳನ್ನು ದೂರಿದರೆ ಯಾವುದೇ ಪ್ರಯೋಜನವಿಲ್ಲ. ಸಿಬ್ಬಂದಿಗಳು ತಮ್ಮ ಕೈಲಾದಷ್ಟು ಕೆಲಸ ನಿರ್ವಹಿಸುತ್ತಿದ್ದು, ಇನ್ನಷ್ಟು ಸಿಬ್ಬಂದಿಗಳನ್ನು ನೇಮಕ ಮಾಡಿದರೆ ಮಾತ್ರ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ನೆಮ್ಮದಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಗಂಗೊಳ್ಳಿ ಅಂಚೆ ಕಛೇರಿಯಲ್ಲಿ ಈಗಿರುವ ಕೆಲಸದ ಒತ್ತಡ ಕಡಿಮೆ ಮಾಡಲು ಹಾಗೂ ಜನರಿಗೆ ಸರಿಯಾದ ಸೇವೆ ನೀಡಲು ಹೆಚ್ಚುವರಿ ಸಿಬ್ಬಂದಿಗಳ ಅವಶ್ಯಕತೆ ಇದೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಲ್ಲಿ ಸಾರ್ವಜನಿಕರು ಮಾಡಿಕೊಂಡ ಮನವಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಮುಂದಿನ ದಿನಗಳಲ್ಲಿ ಬೆಳೆಯುತ್ತಿರುವ ಗಂಗೊಳ್ಳಿ ಪ್ರದೇಶಕ್ಕೆ ಅಂಚೆ ಕಛೇರಿಯಲ್ಲಿ ಸಾಕಷ್ಟು ಸಿಬ್ಬಂದಿಗಳನ್ನು ನೇಮಕ ಮಾಡಿ ಕಛೇರಿಯಲ್ಲಿ ಸಮರ್ಪಕ ಸೇವೆ ನೀಡುವಲ್ಲಿ ಇಲಾಖಾಧಿಕಾರಿಗಳು ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಗಂಗೊಳ್ಳಿ ಅಂಚೆ ಕಛೇರಿಯಲ್ಲಿ ಒಬ್ಬರೇ ಅಂಚೆ ಪಾಲಕರಿಂದ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವುದು ಕಷ್ಟಸಾಧ್ಯ. ಇವರಿಗೆ ಇನ್ನೊಬ್ಬರು ಸಹಾಯಕರನ್ನು ಹಾಗೂ ಅಂಚೆ ವಿತರಣೆ ಸುವ್ಯವಸ್ಥಿತವಾಗಿ ನಡೆಯಲು ಇನ್ನಿಬ್ಬರು ಪೋಸ್ಟ್ಮ್ಯಾನ್ಗಳನ್ನು ನೇಮಕ ಮಾಡಬೇಕಿದೆ. ಈಗಿನ ಕಾರ್ಯ ಒತ್ತಡ ಕಡಿಮೆ ಮಾಡಲು ಇಲಾಖಾಧಿಕಾರಿಗಳು ಶ್ರಮಿಸಬೇಕು – ಎನ್.ನರೇಶ ಕಿಣಿ, ಉದ್ಯಮಿ, ಗಂಗೊಳ್ಳಿ.
ಗಂಗೊಳ್ಳಿ ಅಂಚೆ ಕಛೇರಿಗೆ ಸಾಕಷ್ಟು ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಈಗಾಗಲೇ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಲಾಗಿದ್ದು, ಯಾವುದೇ ಸೂಕ್ತ ಸ್ಪಂದನೆ ದೊರೆತಿಲ್ಲ. ಈಗಿನ ಕಾರ್ಯವೈಖರಿ ಜನರಲ್ಲಿ ನಿರಾಸೆ ಮೂಡಿಸಿದೆ. ನಾಗರಿಕರು ಪ್ರತಿನಿತ್ಯ ಸರದಿ ಸಾಲಿನಲ್ಲಿ ನಿಂತು ತಮ್ಮ ದೈನಂದಿನ ಕಾರ್ಯ ಮಾಡಬೇಕಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮತ್ತು ವ್ಯವಸ್ಥೆ ಸರಿಯಾಗುವ ತನಕ ಹೋರಾಟ ರೂಪಿಸಲಾಗುವುದು – ಎಚ್.ಎಸ್.ಚಿಕ್ಕಯ್ಯ ಪೂಜಾರಿ, ಅಧ್ಯಕ್ಷರು, ನಾಗರಿಕ ಹೋರಾಟ ಸಮಿತಿ ಗಂಗೊಳ್ಳಿ.