ಕುಂದಾಪುರ: ಕಸ್ತೂರಿ ರಂಗನ್ ವರದಿಯ ಬಗ್ಗೆ ಮತ್ತೆ ಸಾಕಷ್ಟು ಜಿಜ್ಞಾಸೆಗಳು ಹುಟ್ಟಿಕೊಳ್ಳುತ್ತಿದೆ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಕೇಂದ್ರಕ್ಕೆ ಜನವಸತಿ ಪ್ರದೇಶವನ್ನು ವರದಿಯಿಂದ ಹೊರಗಿಡುವಂತೆ ಪ್ರಸ್ತಾವನೆಯನ್ನು ಈಗಾಗಲೇ ಕಳುಹಿಸಿಕೊಡಲಾಗಿದ್ದು, ನಮ್ಮ ಆಕ್ಷೇಪಣೆಯನ್ನು ಪುನಃ ಮನವರಿಕೆ ಮಾಡಲಾಗುವುದು. ಅಲ್ಲದೇ ಸಿ.ಆರ್.ಜೆಡ್ ವಿಚಾರದಲ್ಲಿ ಕೇರಳ, ಗೋವಾ ಮಾದರಿಯಂತೆ ರಿಯಾಯತಿ ನೀಡಲು ಮನವಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಉಡುಪಿ ಜಲ್ಲಾಡಳಿತ ಹಾಗೂ, ಜಿ.ಪಂ. ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಜನ ಸಂಪರ್ಕ ಸಭೆ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮರಳಿನ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಗೊಂದಲಗಳಿದ್ದು, ಇವುಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಏಕರೂಪದ ಮರಳು ನೀತಿಯ ಬಗ್ಗೆ ಜಿಲ್ಲಾ ಮಟ್ಟದಲ್ಲಿ ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸುವ ಕೆಲಸ ಆಗಿದೆ. ಶೀಘ್ರ ಜಿಲ್ಲೆಯಲ್ಲಿ ಏಕರೂಪದ ಮರಳಿ ನೀತಿ ಅನುಷ್ಠಾನಗೊಳ್ಳಲಿದೆ. ಮನೆ ನಿವೇಶನಗಳನ್ನು ನೀಡುವ ಸಲುವಾಗಿ ತಾಲೂಕಿನ 40 ಕಡೆಗಳಲ್ಲಿ ಸ್ಥಳ ಗುರುತಿಸುವ ಕಾರ್ಯ ಆಗಿದೆ. ಮಂಜೂರಾತಿ ನಂತರ ನಿವೇಶನಗಳನ್ನು ಆರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. 94ಸಿ ಕಾಯ್ದೆಯಡಿ ಹಕ್ಕುಪತ್ರಕ್ಕೆ ವಿಧಿಸಿರುವ ಶುಲ್ಕದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಶೀಘ್ರ ಸುತ್ತೋಲೆ ಬರಲಿದೆ. ಸರ್ಕಾರ ನಿವೇಶನಗಳನ್ನು ಈ ಹಿಂದೆ ಪಡೆದುಕೊಂಡವರು ಅಲ್ಲಿ ವಾಸ್ತವ್ಯ ಇಲ್ಲದೇ ಬೇರೆಯವರು ಅಲ್ಲಿ ವಾಸ್ತವ್ಯ ಇದ್ದರೆ ಅವರಿಗೆ ಮಂಜೂರಾತಿ ನೀಡುವ ಅವಕಾಶಗಳು ಇವೆ. 94ಸಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ ತನಕ ಅವಕಾಶವಿದೆ ಎಂದರು.
ಈ ಸಂದರ್ಭದಲ್ಲಿ ಶರಶ್ಚಂದ್ರ ಹೆಗ್ಡೆ ಅವರು, ಹೊಸ ಗ್ರಾಮ ಪಂಚಾಯತ್ ರಚನೆಯಾಗಿ 9 ತಿಂಗಳಾಯಿತು. ಚುನಾವಣೆ ನಡೆದು 4 ತಿಂಗಳಾದರೂ ನೂತನ ಪಂಚಾಯತ್ಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ, ಪಂಚತಂತ್ರಕ್ಕೆ ಅಳವಡಿಕೆಯಾಗಲಿ, ಪೀಠೋಪಕರಣ ನೀಡುವುದಾಗಲಿ ಆಗಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಸಚಿವರು, ಕಟ್ಟಡಕ್ಕೆ 20ಲಕ್ಷ ಅನುದಾನ ಮತ್ತು ಅಗತ್ಯ ಪೀಠೋಪಕರಣಕ್ಕೆ 10 ಲಕ್ಷ ಅನುದಾನ ಒದಗಿಸುವ ಬಗ್ಗೆ ಪ್ರಸ್ತಾಪಗಳನ್ನು ಆರ್ಥಿಕ ಇಲಾಖೆಗೆ ಸಲ್ಲಿಕೆಯಾಗಿದೆ. ಮಂಜೂರಾತಿ ಆಗಿಲಿದೆ ಎಂದರು.
ವಾರಾಹಿ ನೀರನ್ನು ಕುಡಿಯುವ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲವೇ ಎನ್ನುವ ಶರತ್ಚಂದ್ರ ಹೆಗ್ಡೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಕುಂದಾಪುರ ಪುರಸಭೆಗೆ ವಾರಾಹಿ ನೀರಿನ ಬಳಕೆ ಆಗುತ್ತಿದೆ. ಬ್ರಹ್ಮಾವರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅವಕಾಶ ಪಡೆದಿದೆ. ಸಾಲಿಗ್ರಾಮ ಪಟ್ಟಣ ಪಂಚಾಯತ್ಗೂ ಕುಡಿಯುವ ನೀರಿನ ಯೋಜನೆ ಶೀಘ್ರ ಅನುಷ್ಠಾನ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಆರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆ ಅಡಿಯಲ್ಲಿ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ, ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್, ಪುರಸಭೆ ಅಧ್ಯಕ್ಷೆ ಕಲಾವತಿ, ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಕನಗವಲ್ಲಿ, ಜಿ.ಪಂ.ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಜಿ.ಪಂ.ಸದಸ್ಯರಾದ ಗಣಪತಿ ಟಿ.ಶ್ರೀಯಾನ್, ಮಮತಾ ಆರ್.ಶೆಟ್ಟಿ, ತಾ.ಪಂ.ಸದಸ್ಯ ಮಂಜಯ್ಯ ಶೆಟ್ಟಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.
ತಹಶೀಲ್ದಾರ್ ಗಾಯತ್ರಿ ನಾಯಕ್ ಸ್ವಾಗತಿಸಿ, ಅಕ್ಷರ ದಾಸೋಹದ ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
[quote bgcolor=”#ffffff” bcolor=”#03b700″]ಪುರಸಭೆ ಬಗ್ಗೆ ಮಲತಾಯಿ ಧೋರಣೆ ಯಾಕೆ?
ಮರಳುಗಾರಿಕೆಯ ವಿಚಾರದ ಗೊಂದಲಗಳ ಬಗ್ಗೆ ಕಳೆದ ಮೂರು ಸಭೆಗಳಲ್ಲಿ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ಬರುತಿಲ್ಲ. ಪುರಸಭೆಯ ವ್ಯಾಪ್ತಿಯ 5 ಕಡೆಗಳಲ್ಲಿ ಅನಧಿಕೃತ ಮರಳು ಧಕ್ಕೆಗಳಿವೆ. ಒಂದೆಡೆ ಪರವಾನಿಗೆ ಪಡೆದು ಮತ್ತೊಂದು ಕಡೆಯಲ್ಲಿ ಮರಳುಗಾರಿಕೆ ಮಾಡಲಾಗುತ್ತಿದೆ. ಇಂಥಹ ಅಕ್ರಮ ಮರಳುಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಗುತ್ತಿದೆ ಎಂದು ತಮ್ಮ ಆಕ್ರೋಶವನ್ನು ಪುರಸಭಾ ಸದಸ್ಯ ರಾಜೇಶ ಕಾವೇರಿ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯ ಶ್ರೀಧರ್ ಶೇರಿಗಾರ್ ಧ್ವನಿಗೂಡಿಸಿದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಮರಳುಗಾರಿಕೆಗೆ ಪುರಸಭೆಯ ಪರವಾನಿಗೆ ಅಗತ್ಯವಿಲ್ಲ ಎಂದರು. ಈ ಉತ್ತರಕ್ಕೆ ಸಿಡಿಮಿಡಿಗೊಂಡ ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ ಅವರು, ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಬೇಕು ಎನ್ನುತ್ತಲೇ ಬರುವಾಗ ಸ್ಥಳೀಯ ನೈಸರ್ಗಿಕ ಸಂಪನ್ಮೂಲದ ವಿಚಾರದಲ್ಲಿ ಸ್ಥಳೀಯಾಡಳಿತದ ನಿರಪೇಕ್ಷಣಾ ಪತ್ರ ಅನಗತ್ಯ ಎನ್ನುವುದು ಸರಿಯಲ್ಲ ಎಂದರು.
ಇದಕ್ಕೆ ಉತ್ತರಿಸಿದ ಸಚಿವರ ತಕ್ಷಣ ಕಂದಾಯ ಇಲಾಖೆ, ಸ್ಥಳೀಯಾಡಳಿತ ಮತ್ತು ಗಣಿಮತ್ತು ಭೂವಿಜ್ಞಾನ ಇಲಾಖೆಯವರು ಮರಳುಗಾರಿಕೆ ಪರವಾನಿಗೆ ಪಡೆದಲ್ಲಿಯೇ ನಡೆಯುತ್ತಿದೆಯೇ ಎಂದು ಪತ್ತೆ ಹಚ್ಚಿ, ಪರವಾನಿಗೆ ಪಡೆದ ಸರ್ವೇನಂಬರ್ನಲ್ಲಿ ಬಿಟ್ಟು ಬೇರೆ ಕಡೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಿ ಎಂದರು.[/quote]
[box type=”custom” bg=”#ffffff” radius=”5″ border=”#1e73be”]ಮರಳು ದರ ನಿಯಂತ್ರಣಕ್ಕೆ ಬರಲಿ
ಉಪ್ಪು ನೀರು ಮರಳು ಬಳಸಿ ಕಟ್ಟಡ ಮಾಡುವುದು ಈ ತನಕ ಕರಾವಳಿ ಜಿಲ್ಲೆಯಲ್ಲಿ ಕಡಿಮೆ ಇತ್ತು. ಈಗಿನ ಮರಳು ನೀತಿಯಿಂದ ಸಿಹಿ ನೀರು ಮರಳುಗಾರಿಕೆ ನಿಷೇಧಿಸಲಾಗಿದೆ. ಹಾಗಾಗಿ ಉಪ್ಪುನೀರು ಮರಳಿನಲ್ಲಿಯೇ ಕಟ್ಟಡ ಕಟ್ಟಬೇಕಾಗಿದೆ. ಅಲ್ಲದೇ ಒಂದು ಯೂನಿಟ್ ಮರಳಿಗೆ 3-4 ಸಾವಿರ ಆಗಿದೆ. ಬಸವ ವಸತಿ, ಇಂದಿರಾ ಅವಾಜ್ ಮನೆ ನಿರ್ಮಾಣ ಮಾಡಬೇಕಾದರೆ 30-40 ಸಾವಿರ ರೂಪಾಯಿ ಮರಳು ಬೇಕಾಗುತ್ತದೆ. ಇಲ್ಲಿನ ಮರಳು ಅಂತರ್ಜಿಲ್ಲೆಗಳಿಗೆ ಸರಬರಾಜು ಆಗುತ್ತಿದ್ದು, ಸ್ಥಳೀಯ ಬೇಡಿಕೆ ಹಾಗೆಯೇ ಉಳಿದುಕೊಳ್ಳುತ್ತಿದೆ. ಸ್ಥಳೀಯ ಬೇಡಿಕೆಗೆ ವಿಶೇಷ ಒತ್ತು ನೀಡಬೇಕು ಎಂದು ರೈತ ಸಂಘದ ವಿಕಾಸ್ ಹೆಗ್ಡೆ ಅಭಿಪ್ರಾಯ ಪಟ್ಟರು.[/box]
[box type=”custom” bg=”#ffffff” radius=”6″ border=”#8224e3″]ಗ್ರಾ.ಪಂ.ಗೂ ಅಧಿಕಾರ ನೀಡಿ
ಅಪಾಯಕಾರಿ ಗಣಿಗಳನ್ನು ನಿಷೇಧಿಸಲು ಗ್ರಾಮ ಪಂಚಾಯತ್ಗಳಿಗೆ ಅಧಿಕಾರ ಇರುವಾಗ ಮರಳುಗಾರಿಕೆಗೆ ಪರವಾನಿಗೆ ನೀಡುವಲ್ಲಿ ಗ್ರಾಮ ಪಂಚಾಯತ್ ನಿರಪೇಕ್ಷಣಾ ಪತ್ರ ಅಗತ್ಯ. ಅಂಥಹ ಅಧಿಕಾರವನ್ನು ಗ್ರಾಮ ಪಂಚಾಯತ್ಗೆ ನೀಡಿ ನಾವು ಸಿಸಿ ಕ್ಯಾಮರ ಅಳವಡಿಸಿ ವ್ಯವಸ್ಥಿತವಾಗಿ ನಡೆಸುತ್ತೇವೆ. ಇದರಿಂದ ಸರಕಾರಕ್ಕೂ ಸಮರ್ಪಕವಾಗಿ ರಾಜಧನ ಪಾವತಿಯಾಗುತ್ತದೆ. ಪಂಚಾಯತ್ಗೂ ಶೇ.೫೦ ಸಿಗುವುದರಿಂದ ಪಂಚಾಯತ್ ಅಭಿವೃದ್ಧಿ ಕಾರ್ಯಕ್ಕೂ ಸಹಕಾರಿ ಆಗುತ್ತದೆ ಎಂದು ಪಂಚಾಯತ್ ಒಕ್ಕೂಟದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸಲಹೆಯಿತ್ತರು.[/box]