ಅಪಘಾತವಾದಾಗ ನಾಗರಿಕರು ಜವಾಬ್ದಾರಿಯಿಂದ ವರ್ತಿಸಬೇಕು: ಎಎಸ್ಪಿ ಸಂತೋಷ್ ಕುಮಾರ್
ಕುಂದಾಪುರ: ವಿದ್ಯಾರ್ಥಿಗಳು ತಿಳಿದೋ ತಿಳಿಯದೆಯೋ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಭವಿಷ್ಯದಲ್ಲಿ ಅವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ಅರಿತು ಎಚ್ಚರ ವಹಿಸುವುದು ಅತೀ ಅಗತ್ಯ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್ ಹೇಳಿದರು.
ಅವರು ಉಡುಪಿ ಜಿಲ್ಲಾ ಪೊಲೀಸ್ ಹಾಗೂ ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಮಂಗಳೂರಿನ ರೆಡ್ ಎಫ್.ಎಮ್ 93.5, ಇಲ್ಲಿನ ಹೋಟೆಲ್ ಪಾರಿಜಾತದ ಪ್ರಾಯೋಜಕತ್ವದೊಂದಿಗೆ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಆಯೋಜಿಸಿದ ರೆಡ್ ಸುರಕ್ಷಾ ಅಭಿಯಾನ ಸೀಸನ್-2 ಉಡುಪಿ ಜಿಲ್ಲಾ ಮಟ್ಟದ ಅಂತರ್ಕಾಲೇಜು ಕಿರು ಪ್ರಹಸನ ಸ್ವರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಪಘಾತ ಸಂಭವಿಸಿದಾಗ ಅಪಘಾತಕ್ಕೀಡಾದವರನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಈ ಸಂದರ್ಭದಲ್ಲಿ ನಾಗರೀಕರು ಜವಾಬ್ದಾರಿಯುತವಾಗಿ ವರ್ತಿಸಿ ಪೊಲೀಸರೊಂದಿಗೆ ಸ್ಪಂದಿಸುವುದರಿಂದ ಅಮೂಲ್ಯ ಜೀವವನ್ನು ಉಳಿಸಬಹುದು ಎಂದವರು ಸಲಹೆಯಿತ್ತರು.
ಉಡುಪಿ ಜಿಲ್ಲೆಯ 28 ಕಾಲೇಜುಗಳು ಸ್ವರ್ಧೆಯಲ್ಲಿ ಭಾಗವಹಿಸಿದ್ದು ಆ ಪೈಕಿ ಕಾರ್ಕಳದ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಬಹುಮಾನ, ಕೋಟ ಪಡುಕೆರೆ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಹಾಗೂ ಬಾಕ್ಸೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದುಕೊಂಡರು.
[quote bgcolor=”#ffffff”]ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಉಡುಪಿ ಜಿಲ್ಲಾ ಎಸ್ಪಿ ಕೆ. ಅಣ್ಣಾಮಲೈ, ನಾವೆಲ್ಲರೂ ಸೇರಿ ಅಪರಾಧ ತಡೆಗೆ ಚಿಂತನೆ ನಡೆಸಿ ಒಗ್ಗಟ್ಟಾಗಿ ಮುಂದುವರೆಯಬೇಕು. ವಿದ್ಯಾರ್ಥಿಗಳು ಕಾನೂನು ಮತ್ತು ಅಪರಾಧಗಳ ಬಗ್ಗೆ ತಮ್ಮದೇ ಆದ ಆಲೋಚನೆಗಳನ್ನು ಕಿರು ನಾಟಕಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಕರ್ನಾಟಕದಲ್ಲಿ ಎಂಬತ್ತು ಸಾವಿರ ಪೊಲೀಸರಿದ್ದಾರೆ. ಆರೂವರೆ ಕೋಟಿ ಜನಸಂಖ್ಯೆ ಇದ್ದಾರೆ. ಸರಾಸರಿ ೮೫೦ಕ್ಕೆ ಓರ್ವ ಪೊಲೀಸ್ ಎನ್ನುವ ಸ್ಥಿತಿ ಇದೆ. ಜನ, ಇಲಾಖೆ ಹಾಗೂ ಮಾಧ್ಯಮಗಳು ಜೊತೆಯಾಗಿ ಸಾಗಿದರೆ ರಾಜ್ಯದಲ್ಲಿ ಯಾವುದೇ ಅಪರಾಧಗಳು ನಡೆಯಲು ಸಾಧ್ಯವಿಲ್ಲ ಎಂದರು.[/quote]
ಉದ್ಘಾಟನಾ ಹಾಗೂ ಸಮಾರೋಪ ಕಾರ್ಯಕ್ರಮದಲ್ಲಿ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಕುಂದಾಪುರ ಪುರಸಭೆ ಉಪಾಧ್ಯಕ್ಷ ನಾಗರಾಜ ಕಾಮಧೇನು, ಪಾರಿಜಾತ ಹೊಟೇಲ್ ಆಡಳಿತ ನಿರ್ದೇಶಕ ಗಣೇಶ್ ಭಟ್, ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಬ್ರಮಣ್ಯ ಜೋಷಿ, ನಟಿ ರಕ್ಷಾ ಶೆಣೈ, ತುಳು ಚಿತ್ರ ನಟಿ ದಿವ್ಯಾಶ್ರೀ, ಯುವ ನಿರ್ದೇಶಕ ರಕ್ಷಿತ್ ಕುಳಾಯಿ, ಅನ್ವಿತಾ ಸಾಗರ್ ರೆಡ್ ಎಫ್.ಎಂ. 93.5 ಇದರ ಮಂಗಳೂರು ವಿಭಾಗ ಮುಖ್ಯಸ್ಥ ಶೋಭಿತ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಪ್ರವೀಣ ಟಿ., ಕುಂದಾಪುರ ರೋಟರಿ ಕ್ಲಬ್ ಕಾರ್ಯದರ್ಶಿ ಸಂತೋಷ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.
ರೋಟರಿ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆರ್.ಜೆ. ಪ್ರಸನ್ನ ಸ್ವಾಗತಿಸಿ, ಆರ್.ಜೆ. ಅನುರಾಗ್, ಆರ್.ಜೆ. ನಯನಾ ಕಾರ್ಯಕ್ರಮ ನಿರ್ವಹಿಸಿ, ಪೊಲೀಸ್ ಇಲಾಖೆಯ ಶಿವಾನಂದ ವಂದಿಸಿದರು.