ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಗುಡುಗು ಸಹಿತ ಮಳೆ ಭತ್ತ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ವಾರದ ಮೊದಲು ಅಚಾನಕ್ ಉಂಟಾಗಿದ್ದ ಬಿರುಗಾಳಿ ಅಬ್ಬರಕ್ಕೆ ತಲ್ಲಣಗೊಂಡಿದ್ದ ರೈತರು ಇದೀಗ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಫಸಲು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.
ಉತ್ತಮ ಮುಂಗಾರು ಹಿನ್ನಲೆಯಲ್ಲಿ ಈ ಭಾರಿ ಉತ್ತಮ ಫಸಲಿದೆ. ಕರಾವಳಿಯಲ್ಲಿ ಕಟಾವಿಗೆ ರೈತರು ಅಣಿಯಾಗುತ್ತಿರುವಾಗಲೇ ಮಳೆ ಆರಂಭಗೊಡಿದೆ. ಮಲೆನಾಡು ಪ್ರಾಂತ್ಯದಲ್ಲಿಯೂ ರೈತರು ಮನೆಯಂಗಳ ಸಜ್ಚುಗೊಳಿಸುವ ತಯಾರಿಯಲ್ಲಿದ್ದಾರೆ.
14 ಸಾವಿರ ಹೆಕ್ಟೇರ್ ಭತ್ತ ಕೃಷಿ:
ಕುಂದಾಪುರ ತಾಲೂಕಿನಲ್ಲಿ 202-21ನೇ ಸಾಲಿನಲ್ಲಿ 14 ಸಾವಿರ ಹೆಕ್ಟೇರ್ ಭತ್ತ ಕೃಷಿಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 500 ಹೆಕ್ಟೇರ್ ಹೆಚ್ಚುವರಿ ಮುಂಘಾರು ಕೃಷಿ ಆಗಿದೆ. ವರಾಹಿ ನೀರಿನ ಲಭ್ಯತೆ ಹಿನ್ನಲೆಯಲ್ಲಿ ಮಲೆನಡು, ನಡುಬಯಲು ಭಾಗದಲ್ಲಿಯೂ ಹಡಿಲು ಬಿದ್ದ ಭೂಮಿಯಲ್ಲೂ ಭತ್ತ ಚಿಗುರಿದೆ. ಹದವಾದ ಮಳೇಯ ದೆಸೆಯಿಂದ ಸಸಿಗಳು ದಷ್ಟಪುಷ್ಟವಾಗಿ ಬೆಳೆದು ನಿಂತಿದ್ದು ತೆನೆಯ ಗೊಂಚಲು ಸಮೃದ್ದತೆಯಿಂದ ಕೂಡಿದೆ.
ಬೆಳೆದು ನಿಂತ ಪೈರು ಮಳೆ ನೀರಿನ ಹೊಡೆತಕ್ಕೆ ಸಿಲುಕುವ ಆತಂಕ ರೈತರದ್ದಾಗಿದೆ. ಗದ್ದೆಯಲ್ಲಿ ಭಾರಿ ನೀರು ನಿಲುಗಡೆಯಾಗಿರುವುದರಿಂದ ಹುಲ್ಲಿನ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಕಳವಳ ರೈತರಲ್ಲಿ ಮನೆಮಾಡಿದೆ ಸಸಿಗಳು ಒಣಗಿ ತೆನೆ ಬಲಿತು ಹಾಲು ಉಕ್ಕಿಸುವ ಹಂತ ತಲುಪಿದ್ದರೂ ತೆನೆಯನ್ನು ಅಂಗಳಕ್ಕೆ ತಲುಪಿಸುವಲ್ಲಿ ರೈತರಿಗೆ ಅಸಾಧ್ಯವಾಗಿರುವ ಪರಿಸ್ಥಿತಿ ಎದುರಾಗಿದೆ.
ಭತ್ತದ ಸಸಿ ಅಡ್ಡ ಬೀಳಲು ಪ್ರಾರಂಭ:
ಗಾಳಿ ಸಹಿತ ಮಳೆಯಿಂಧಾಗಿ ಹಲವೆಡೆ ಭತ್ತದ ಸಸಿಗಳು ಅಡ್ಡ ಬೀಳಲು ಆರಂಭಗೊಂಡಿದೆ. ಕರಾವಳಿಯ ತೆಕ್ಕಟ್ಟೆ ಕೊಮೆ ಭಾಗದಲ್ಲಿ ಅಪಾಯ ಎದುರಾಗಿದೆ. ನವರಾತ್ರಿ ಆರಂಭದಲ್ಲೇ ಇಲ್ಲಿನ ರೈತರು ಕಟಾವಿಗೆ ಸಿದ್ದಗೊಂಡಿದ್ದರೂ ಮಳೆಯಿಂದಾಗಿ ಗದ್ದೆಗಿಳಿಯದಂತಾಗಿದೆ. ಭತ್ತ ಕಟಾವಿಗೆ ಆಗಮಿಸಿರುವ ತಮಿಳುನಾಡು ಮೂಲದ ಯಂತ್ರಗಳು ವಿಶ್ರಾಂತಿಯಲ್ಲಿದೆ.
