ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗ ತಮ್ಮ ಕವನಗಳಲ್ಲಿ ಸಮಾಜದ ಕೊಳೆ ತೊಲಗಿಸಿ ನವಸಮಾಜ ನಿರ್ಮಿಸುವ ಕನಸು ಬಿತ್ತಿದ್ದರು. ಹೊಸನಾಡು ಕಟ್ಟಲು ಮುಂದಾಗುವಂತೆ ಯುವಜನರಿಗೆ ಕರೆ ನೀಡಿದ್ದರು. ಅವರ ಜನ್ಮಭೂಮಿಯಾದ ಮೊಗೇರಿಯ ಯುವಜನರು ಅವರ ಆಶಯವನ್ನು ಮೈಗೂಡಿಸಿಕೊಂಡು ಕನಿಷ್ಠ ಹೊಸ ಮೊಗೇರಿ ಕಟ್ಟುವ ಕಾಯಕದಲ್ಲಿ ತೊಡಗಬೇಕು ಎಂದು ಹಿರಿಯ ಪತ್ರಕರ್ತ, ಬೆಂಗಳೂರಿನ ಮಾಧ್ಯಮ ಭಾರತಿಯ ಸಂಚಾಲಕ ಮೊಗೇರಿ ಜಯರಾಮ ಅಡಿಗ ಹೇಳಿದರು.
ಮೊಗೇರಿಯ ಗೋಪಾಲಕೃಷ್ಣ ಅಡಿಗ ಯುವ ಅಭಿಮಾನಿ ಬಳಗವು ಸಿರಿಮೊಗೇರಿ ಸಮಷ್ಟಿ ವೇದಿಕೆ ಮತ್ತು ಓಂ ಕಲಾಬಳಗದ ಸಹಕಾರದೊಂದಿಗೆ ಈಚೆಗೆ ನಡೆಸಿದ್ದ ಎಂಟು ದಿನಗಳ ನೃತ್ಯ ವೈವಿಧ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇದಕ್ಕೆ ಮೊದಲು ಶಂಕರನಾರಾಯಣ ದೇವಸ್ಥಾನದ ಆವರಣದಲ್ಲಿ ಯುವ ಕಲಾಸಕ್ತರಿಗಾಗಿ ಯಕ್ಷಗಾನ, ಜಾನಪದ ನೃತ್ಯ ಮತ್ತು ಸೆಮಿ ಕ್ಲಾಸಿಕಲ್ ಡಾನ್ಸ್ ತರಬೇತಿ ನಡೆದಿತ್ತು. ಯಕ್ಷಗಾನ ಕಲಾವಿದ ಪ್ರಶಾಂತ ಮಯ್ಯ, ನೃತ್ಯ ನಿರ್ದೇಶಕಿ ಸರಿತಾ ಹೆಮ್ಮಾಡಿ ತರಬೇತಿ ನೀಡಿದ್ದರು.
ಗೀತಾ ಹೊಸ್ಮನೆ ಸ್ವಾಗತಿಸಿದರು. ಲಕ್ಷ್ಮಣ ದೊಮ್ನಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಗಾಣಿಗ ವಂದಿಸಿದರು. ಶಿಕ್ಷಣಾರ್ಥಿಗಳಾದ ಸಂಪ್ರೀತಿ, ಪ್ರಜ್ವಲ್, ಸುಷ್ಮಿತಾ, ಪವಿತ್ರಾ, ಪೋಷಕರಾದ ವಿದ್ಯಾಶ್ರೀ ಚಂದ್ರಶೇಖರ ಅಡಿಗ, ರಮೇಶ ಗಾಣಿಗ ಮೊಗೇರಿ, ಉದಯ ಗಾಣಿಗ ಮೊಗೇರಿ ಅನುಭವ ಹಂಚಿಕೊಂಡರು. ಶಂಕರನಾರಾಯಣ ಭಂಡಾರ್ಕಾರ್, ಮುಖ್ಯೋಪಾಧ್ಯಾಯ ಶೇಖರ ಪೂಜಾರಿ, ಅಭಿಮಾನಿ ಬಳಗದ ಅಧ್ಯಕ್ಷ, ಯುವ ಕವಿ ಶೇಖರ ದೇವಾಡಿಗ, ಮುಂಬೈ ಮಿತ್ರ ಮಂಡಳಿಯ ಸದಸ್ಯ ಚಂದ್ರ ದೇವಾಡಿಗ ಹೊಸ್ಮನೆ, ಥೈಲ್ಯಾಂಡ್ನ ಉದ್ಯಮಿ ಭರತ್ ಟಿ. ದೊಮ್ನಡಿ, ಹೆಮ್ಮಾಡಿಯ ಡಾನ್ಸ್ ಅಕಾಡೆಮಿ ನಿರ್ದೇಶಕ ದೀಪಕ್ ಇದ್ದರು. ಶಿಬಿರಾರ್ಥಿಗಳು ನೃತ್ಯ ಪ್ರದರ್ಶಿಸಿದರು.