ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಕ್ಕಳ ಹದಿಹರೆಯದ ಆರಂಭ ಹಂತದಲ್ಲಿ ಆಗುವ ಬದಲಾವಣೆಗಳು ಅವರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಆನ್ಲೈನ್ ಆಟ, ಜಾಲತಾಣ ಜುಗಾರಿ ಮೊದಲಾದವುಗಳು ಮಕ್ಕಳಲ್ಲಿ ವ್ಯಸನಗಳಾಗಿ ಬೆಳೆಯುತ್ತಿರುವುದು ಈಚಿನ ದಿನಗಳ ವಿದ್ಯಮಾನ ಎಂದು ಉಡುಪಿಯ ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವಿಜ್ಞಾನಿ ನಾಗರಾಜ ಮೂರ್ತಿ ಹೇಳಿದರು.
ತ್ರಾಸಿಯ ಡಾನ್ ಬಾಸ್ಕೊ ಸೀನಿಯರ್ ಸೆಕೆಂಡರಿ ಶಾಲೆಯ ಸ್ವಾಸ್ಥ್ಯ ವಿಭಾಗದ ಕ್ಲಬ್ ಆಫ್ ಲೈಫ್ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಆಟಗಳ ಅವಧಿ ನಿರ್ವಹಣೆ ಮೂಲಕ ಸ್ವನಿಯಂತ್ರಣ ಸಾಧಿಸಿ, ಆನ್ಲೈನ್ ವೇದಿಕೆಗಳಿಗೆ ಬಲಿಯಾಗುವುದನ್ನು ತಡೆಗಟ್ಟುವ ವಿವಿಧ ವಿಧಾನಗಳನ್ನು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲ ಫಾ. ಮ್ಯಾಕ್ಸಿಮ್ ಡಿಸೋಜ, ಕೋವಿಡ್-19 ಕುಸಿತದ ಬಳಿಕ ಭೌತಿಕ ತರಗತಿಗಳ ಆರಂಭದೊಂದಿಗೆ ಮಕ್ಕಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಅವುಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮಾನಸಿಕ ಆರೋಗ್ಯ ಪರಿಣತರು ಮುಂದಿನ ವರ್ಷಗಳಲ್ಲಿ ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚಲಿವೆ ಎನ್ನುತ್ತಿದ್ದಾರೆ. ಮಾನಸಿಕ ಆರೋಗ್ಯ ಹೊರತಾಗಿ ಆರೋಗ್ಯ ಇರದು. ಅದರ ಮಹತ್ವವನ್ನು ಪರಿಗಣಿಸಿ ಅಕ್ಟೋಬರ್ ಹತ್ತನ್ನು ’ಮಾನಸಿಕ ಆರೋಗ್ಯ ದಿನ’ವಾಗಿ ಆಚರಿಸಲಾಗುತ್ತಿದೆ. ವಿಶ್ವ ಮಾನಸಿಕ ಆರೋಗ್ಯ ಒಕ್ಕೂಟ ಮತ್ತು ವಿಶ್ವ ಅರೋಗ್ಯ ಸಂಸ್ಥೆ ಈ ಮಾಸವನ್ನು ಮಾನಸಿಕ ಆರೋಗ್ಯ ಅರಿವು ಮಾಸ ಎಂದು ಪರಿಗಣಿಸಿ ಹಲವು ಪೂರಕ ಕಾರ್ಯಕ್ರಮಗಳನ್ನು ನಡೆಸುತ್ತವೆ. ಒಕ್ಕೂಟವು ಈ ವರ್ಷ ‘ಅಸಮಾನತೆಯ ಜಗತ್ತಿನಲ್ಲಿ ಮಾನಸಿಕ ಆರೋಗ್ಯ’ ಎಂಬ ಧ್ಯೇಯದೊಂದಿಗೆ ‘ಎಲ್ಲರಿಗೂ ಮಾನಸಿಕ ಆರೋಗ್ಯ; ಅದನ್ನು ಸಾಧಿಸೋಣ’ಎಂಬ ಘೋಷವಾಕ್ಯ ಸ್ವೀಕರಿಸಿದೆ ಎಂದು ಹೇಳಿದರು.
ದಿನಾಚರಣೆಯ ಅಂಗವಾಗಿ ಕ್ಲಬ್ ಆಫ್ ಲೈಫ್ ಸದಸ್ಯರು ಚಟುವಟಿಕೆಗಳ ಹಾಗೂ ಭಿತ್ತಿಚಿತ್ರಗಳ ಮೂಲಕ ಮಾನಸಿಕ ಆರೋಗ್ಯ ಕುರಿತು ಅರಿವು ಮೂಡಿಸಿದರು. ಬೋಧಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.