ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಉಪನ್ಯಾಸಕ ವರ್ಗದವರಿಗೆ ಆಯೋಜಿಸಿದ್ದ ಎರಡು ದಿನಗಳ ಆನ್ಲೈನ್ ಹಾಗೂ ಆಫ್ಲೈನ್ ಸ್ಟೂಡೆಂಟ್ ಮೆಂಟರಿಂಗ್ ಕಾರ್ಯಗಾರ ನಡೆಯಿತು.
ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ಸಂಯೋಜಕಿ ಡಾ. ಆಡ್ರೇ ಪಿಂಟೋ ಮಾತನಾಡಿ, ಪ್ರತಿಯೊಬ್ಬ ಶಿಕ್ಷಕನು ತನ್ನ ನೆಲೆಯಲ್ಲಿ ಮಾದರಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು, ಸ್ಟೂಡೆಂಟ್ ಮೆಂಟರ್ ಆದ ಶಿಕ್ಷಕನು ತನ್ನ ಎಲ್ಲಾ ವೈಯಕ್ತಿಕ ಸಮಸ್ಯೆಗಳನ್ನು ಬದಿಗೊತ್ತಿ ವಿದ್ಯಾರ್ಥಿಗಳ ತೊಂದರೆಗಳನ್ನು ಪರಿಹರಿಸಬೇಕು. ವಿದ್ಯಾರ್ಥಿಯಲ್ಲಿರುವ ಋಣಾತ್ಮಕ ಗುಣಗಳನ್ನು ಹೆಚ್ಚು ಚರ್ಚಿಸದೆ, ಧನಾತ್ಮಕ ಗುಣಗಳನ್ನು ಮುನ್ನಲೆಗೆ ತರುವಂತೆ ನೋಡಿಕೊಳ್ಳಬೇಕು. ಒಬ್ಬ ವ್ಯಕ್ತಿಯು ಸೀಸದ ಪೆನ್ಸಿಲ್ನಂತೆ ಕಾರ್ಯನಿರ್ವಹಿಸಬೇಕು, ಪೆನ್ಸಿಲ್ನ ಮೌಲ್ಯ ಅದರ ಒಳಗೆ ಅಡಗಿದೆ. ಪ್ರತಿ ಭಾರಿ ನಾವು ಪೆನ್ಸಿಲ್ನ್ನು ಮೊನಚು ಮಾಡಿದಾಗ ಅದರ ಉಪಯೋಗತೆ ಜಾಸ್ತಿಯಾಗುವಂತೆ, ನಮ್ಮನ್ನು ನಾವು ಪ್ರತಿ ಹಂತದಲ್ಲೂ ಹೊಸತನಕ್ಕೆ ಒಗ್ಗಿಕೊಂಡು ಪರಿಷ್ಕರಣೆ ಮಾಡಿಕೊಳ್ಳಬೇಕು ಎಂದರು. ಅಲ್ಲದೆ ಪೆನ್ಸಿಲ್ನಿಂದ ಬರೆದದನ್ನು ಸುಲಭವಾಗಿ ಅಳಿಸಲು ಸಾದ್ಯವಾಗುವಂತೆ ನಮ್ಮ ವ್ಯಕ್ತಿತ್ವವು ಎಲ್ಲಾ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತಿರಬೇಕು, ಸ್ಟೂಡೆಂಟ್ ಮೆಂಟರ್ ಹಿನ್ನಲೆಯಲ್ಲಿ ಶಿಕ್ಷಕರು ಮಾಡಿಕೊಳ್ಳಬೇಕಾದ ತಯಾರಿಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್, ಸ್ಟೂಡೆಂಟ್ ಮೆಂಟರಿಂಗ್ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ತಂದು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ಎಂದು ತಿಳಿಸಿದರು. ಎರಡು ದಿನದ ಕಾರ್ಯಗಾರದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯ 160ಕ್ಕೂ ಅಧಿಕ ಉಪನ್ಯಾಸಕರು ಪಾಲ್ಗೊಂಡಿದ್ದರು.
ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆಂತರಿಕ ಗುಣಮಟ್ಟ ಭರವಸೆ ಕೋಶ ಕಾರ್ಯನಿರ್ವಾಹಕ ಸದಸ್ಯರಾದ ಅಶೋಕ ಕೆ.ಜಿ, ಅಖಿಲೇಶ್, ಸಾಗರ್, ಶ್ರುತಿ ಹಾಗೂ ಪ್ರಜ್ಞಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಿ. ಎಫ್. ಎನ್. ಡಿ ಉಪನ್ಯಾಸಕಿ ಶಿಖಾ ನಿರೂಪಿಸಿದರು.