ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಶಾಖೆಯಲ್ಲಿ ಜನರ ಬಳಿಗೆ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ದ.ಕ. ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಎಸ್. ರಾಜು ಪೂಜಾರಿ ಮಾತನಾಡಿ, ಜನರ ಆರ್ಥಿಕ ಅಗತ್ಯತೆಗಳಿಗೆ ಅನುಗುಣವಾಗಿ ಅವರ ಬಳಿ ಹೋಗುವುದು ಸಹಕಾರಿ ಬ್ಯಾಂಕುಗಳ ಕರ್ತವ್ಯ. ಆ ನಿಟ್ಟಿನಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರರವರ ವಿಶೇಷ ಯೋಜನೆ ಜನರ ಬಳಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಆರ್ಥಿಕ ಸಂಕಷ್ಟದ ಕಾಲದಲ್ಲಿ ಜನರಿಗೆ ಆರ್ಥಿಕ ಚೈತನ್ಯ ತುಂಬುವ ನಿಟ್ಟಿನಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಉಳಿತಾಯ ಖಾತೆ, ಠೇವಣಿ ಸಂಗ್ರಹ, ಸಾಲ ನೀಡಿಕೆ ಮುಂತಾದ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ಇದರಿಂದ ಜನರಿಗೂ ಉಪಯೋಗವಾಗುತ್ತದೆ ಮತ್ತು ಬ್ಯಾಂಕಿನ ಗೌರವವೂ ಹೆಚ್ಚಾಗಲಿದೆ. ಜನರ ಬಳಿ ತೆರಳಿ ಬ್ಯಾಂಕಿನ ಅಗತ್ಯತೆಗಳನ್ನು ತಿಳಿಸಿ, ಜನರಲ್ಲಿ ಆರ್ಥಿಕ ಶಕ್ತಿಯ ವಿಶ್ವಾಸವನ್ನು ಮೂಡಿಸಬೇಕು. ಇದನ್ನು ಆಂದೋಲನ ರೀತಿಯಲ್ಲಿ ನೆಡೆಯಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಮೊಳಹಳ್ಳಿ ಮಹೇಶ ಹೆಗ್ಡೆ ಮಾಹಿತಿ ನೀಡಿದರು. ಬ್ಯಾಂಕಿನ ಎಜಿಎಂ ಸುನೀಲ್ ಕುಮಾರ್ ಹೊಳ್ಳ ಅಭಿಯಾನದ ಬಗ್ಗೆ ವಿವರಣೆ ನೀಡಿದರು. ಮೇಲ್ವಿಚಾರಕರಾದ ಶಿವರಾಮ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ಶಾಖಾ ವ್ಯವಸ್ಥಾಪಕರಾದ ರವೀಂದ್ರ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಖೆಯ ಶಾಖಾ ವ್ಯವಸ್ಥಾಪಕರು, ನವೋದಯ ಪ್ರೇರಕರು ಉಪಸ್ಥಿತರಿದ್ದರು.