ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಸಮಿತಿ ಮತ್ತು ಕುಂದಾಪುರ ಬೈಂದೂರು ಮಹಿಳಾ ಸಮಿತಿ ಆಶ್ರಯದಲ್ಲಿ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವದಲ್ಲಿ ನಡೆದ ಭಾರತ ಸಂವಿಧಾನ ಅರ್ಪಣಾ ದಿನ ಉದ್ಘಾಟನೆ ನಡೆಯಿತು.
ಉದ್ಘಾಟಿಸಿ ಮಾತನಾಡಿದ ಕುಂದಾಪುರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೀಕರ, ಅಂಬೇಡ್ಕರ್ ಜ್ಞಾನದ ಮೇರು ಪರ್ವತವಾದರೆ, ಸಂವಿಧಾನ ಭಾರತೀಯರ ಹೃದಯ ಗ್ರಂಥವಾಗಿದೆ. ಅಂಬೇಡ್ಕರ್ ಮತ್ತು ಸಂವಿಧಾನ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಅಂಬೇಡ್ಕರ್ ಜೀವನ ಹೋರಾಟದಿಂದ ಕೂಡಿದ್ದು, ಸಂವಿಧಾನ ಓದಿ ಅರ್ಥೈಸಿಕೊಳ್ಳುವ ಮೂಲಕ ನಮ್ಮ ಹಕ್ಕು ಮತ್ತು ಕರ್ತವ್ಯ ನಿಭಾಯಿಸಲು ಸಾಧ್ಯ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಕುಂದಾಪುರ ಸಮಿತಿ ಅಧ್ಯಕ್ಷ ರಾಜು ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಕೀಲ ಮುರುಡೇಶ್ವರ ರವಿ ಕಿರಣ್ ಶ್ಯಾನುಭೋಗ್ ಪ್ರಧಾನ ಭಾಷಣ ಮಾಡಿದರು.
ಸಂವಿಧಾನ ಅರ್ಪಣಾ ದಿನದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ನಿಷ್ಠೆಯಿಂದು ಕೆಲಸ ಮಾಡಿದ ಏಳು ಜನ ಸಾಧಕರ ಸನ್ಮಾನಿಸಲಾಯಿತು. ಕುಂದಾಪುರ ಕೋವಿಡ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ನಾಗೇಶ್, ಕುಂದಾಪುರ ಅರಕ್ಷಕ ಉಪನಿರೀಕ್ಷಕ ಸದಾಶಿವ ಗವರೋಜಿ ಪರವಾಗಿ ಸನ್ಮಾನ ಸ್ವೀಕರಿಸಿದ ಅಶೋಕ್ ಖಾರ್ವಿ, ಕುಂದಾಪುರ ತಾಲೂಕ್ ಸರ್ಕಾರಿ ಆಸ್ಪತ್ರೆ ಸ್ಟಾಪ್ ನರ್ಸ್ಗಳಾದ ಶೋಭಾ ಕುಮಾರಿ, ಪ್ರಿಯಾಂಕ ಸುವರ್ಣ, ರೂಪಾ, ಕುಂದಾಪುರ ಪೌರ ಕಾರ್ಮಿಕ ಸಂಘ ಅಧ್ಯಕ್ಷ ನಾಗರಾಜ್ ಮತ್ತು ಬಳ್ಕೂರು ಆಶಾ ಕಾರ್ಯಕರ್ತೆ ಶ್ಯಾಮಲಾ ಅವರ ತಾಲೂಕು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಹಾಗೂ ಗಣ್ಯರು ಸನ್ಮಾನಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವಾಸುದೇವ ಮುದೂರು, ಕುಂದಾಪುರ ಮತ್ತು ಬೈಂದೂರು ಮಹಿಳಾ ಒಕ್ಕೂಟ ಅಧ್ಯಕ್ಷೆ ಗೀತಾ ಸುರೇಶ್ ಕುಮಾರ್ ಉಪಸ್ಥಿತರಿದ್ದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ ಗಿಳಿಯಾರ್ ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ನಿರೂಪಿಸಿದರು. ಬೈಂದೂರು ತಾಲೂಕು ಸಮಿತಿ ಸಂಚಾಲಕ ಮಂಜುನಾಥ ನಾಗೂರು ವಂದಿಸಿದರು.