ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದಲ್ಲಿ ಅ.07ರಿಂದ ಆರಂಭಗೊಂಡ ನವರಾತ್ರಿ ಉತ್ಸವ ಒಂಭತ್ತು ದಿನಗಳ ಕಾಲ ದೇವಳದ ಪ್ರಧಾನ ಅರ್ಚಕ ಹಾಗೂ ತಂತ್ರಿ ಡಾ. ಕೆ. ರಾಮಚಂದ್ರ ಅಡಿಗ ನೇತೃತ್ವದಲ್ಲಿ ಸರಳವಾಗಿ ಆಚರಿಸಲಾಯಿತು.

ಗುರುವಾರ ಮಹಾನವಮಿಯಂದು ಮಧ್ಯಾಹ್ನ ಶತಚಂಡಿಕಾ ಯಾಗ, ರಾತ್ರಿ ೮ಕ್ಕೆ ಪುಷ್ಪರಥೋತ್ಸವ ಜರುಗಿತು. ಈ ಬಾರಿ ಕೋವಿಡ್ ಮಾರ್ಗಸೂಚಿಯಂತೆ ಗುರುವಾರ ಸಂಜೆ ಆರರ ನಂತರ ಭಕ್ತಾದಿಗಳಿಗೆ ದೇವಳದ ಪ್ರವೇಶ ನಿರ್ಭಂದಿಸಲಾಗಿತ್ತು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ದೇವಳದ ಆಡಳಿತ ಮಂಡಳಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಅರ್ಚಕರು, ಕ್ಷೇತ್ರ ಪುರೋಹಿತರು, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಮಾತ್ರ ರಥೋತ್ಸವದಲ್ಲಿ ಭಾಗಿಯಾದರು.

ಆಯುಧ ಪೂಜೆ: ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ದೇವರ ಆಯುಧಗಳನ್ನಿಡುವ ಉಗ್ರಾಣದಲ್ಲಿ ಆಯುಧ ಪೂಜೆ, ಶ್ರೀ ಶಾರದಾ ಪೂಜೆ ಹಾಗೂ ಅನ್ನಪ್ರಸಾದ (ಅಡುಗೆಮನೆ)ಯಲ್ಲಿ ವಿಶೇಷವಾಗಿ ಪಲ್ಲಪೂಜೆ ನಡೆಯಿತು. ಹಾಗೂ ಹೊಸ್ತು ಆಚರಿಸಲಾಯಿತು. ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್. ಪಿ. ಬಿ. ಮಹೇಶ್, ಸಹಾಯಕ ಇಒ ಗೋವಿಂದ ನಾಯ್ಕ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸದಸ್ಯರಾದ ಜಯಾನಂದ ಹೋಬಳಿದಾರ್, ಬೆಳ್ವೆ ಗಣೇಶ ಕಿಣಿ, ಡಾ. ಅತುಲ್ಕುಮಾರ್ ಶೆಟ್ಟಿ, ಶೇಖರ ಪೂಜಾರಿ, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ರತ್ನಾ ರಮೇಶ್ ಇದ್ದರು. ಸಂಜೆ ಶ್ರೀ ಮೂಕಾಂಬಿಕಾ ಅಮ್ಮನವರ ವೈಭವದ ವಿಜಯೋತ್ಸವ ನಡೆಯಿತು.
ಕೊಲ್ಲೂರು ಶ್ರೀ ಮೂಕಾಂಬಿಕೆ ಸಾನಿಧ್ಯದಲ್ಲಿ ವೈಭವದ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ದೇವಳದ ಸ್ವರ್ಣಮುಖಿ ವೇದಿಕೆಯಲ್ಲಿ ಹತ್ತು ದಿನಗಳ ಪರ್ಯಂತ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವರ್ಷವೂ ರದ್ದುಗೊಂಡಿರುವುದರಿಂದ ಸಾಂಸ್ಕೃತಿಕ ಮನರಂಜನೆ ವೈಭವವಿಲ್ಲದೇ ನವರಾತ್ರಿ ಕಳೆಗುಂದಿತ್ತು.
► ವಿಜಯದಶಮಿ: ಕೊಲ್ಲೂರಿನಲ್ಲಿ ಮಕ್ಕಳಿಗೆ ವಿದ್ಯಾರಂಭ, ನವಾನ್ನಪ್ರಾಶನ – https://kundapraa.com/?p=53606 .
► ಕೊಲ್ಲೂರು: ಮಹಾನವರಾತ್ರಿ ಮಹೋತ್ಸವಕ್ಕೆ ಚಾಲನೆ – https://kundapraa.com/?p=53328 .