ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೊರರಾಜ್ಯಗಳಿಂದ ಬಂದಿರುವವರನ್ನು ದೇವಳದ ವಿವಿಧ ಅತಿಥಿಗೃಹಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಇಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರಿರುವುದರಿಂದ ಸಾಮಾಜಿಕ ಅಂತರ ಹಾಗೂ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದರ ಬದಲಿಗೆ ವಿಶಾಲ ಪ್ರದೇಶದಲ್ಲಿರುವ ಕೊಲ್ಲೂರು ದೇವಳದ ಪ್ರೌಢಶಾಲೆಗಳಲ್ಲಿ ಕ್ವಾರಂಟೈನ್ ಮಾಡುವುದು ಉತ್ತಮ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ನರಸಿಂಹ ಹಳಗೇರಿ ಹೇಳಿದ್ದಾರೆ.
ಈ ಬಗ್ಗೆ ಮುಜರಾಯಿ ಸಚಿವರು, ಸಂಸದರು ಹಾಗೂ ಶಾಸಕರಿಗೆ ಪತ್ರ ಬರೆದಿರುವ ಅವರು, ಕೋರೋನಾ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಆದರೆ ದೇವಳದ ಅತಿಥಿಗೃಹಗಳಲ್ಲಿ ಹೆಚ್ಚಿನ ಜನರಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಮಸ್ಯೆಯಾಗುತ್ತಿದೆ. ಅಲ್ಲದೇ ದೇವಳದ ಅತಿಥಿ ಗೃಹವನ್ನು ಧೀರ್ಘಕಾಲದ ತನಕ ಕ್ವಾರಂಟೈನ್ ಕೇಂದ್ರವನ್ನಾಗಿಸುವುದರಿಂದ ಮುಂದೆ ಬರುವ ಯಾತ್ರಾರ್ಥಿಗಳಿಗೆ ಖಾಸಗಿ ಲಾಡ್ಜುಗಳ ಮಾಲಿಕರು ದಿಕ್ಕುತಪ್ಪಿಸಿ ಅಲ್ಲಿಗೆ ತೆರಳದಂತೆ ಮಾಡುವ ಸಾಧ್ಯತೆ ಇದೆ ಎಂದಿದ್ದಾರೆ.
ದೇವಳದ ಸಿಬ್ಬಂದಿಗಳನ್ನು ಆಹಾರ ವಿತರಣೆ ಸೇರಿದಂತೆ ವಿವಿಧ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಆದರೆ ಅವರಿಗೆ ಅಗತ್ಯವಾದ ಸುರಕ್ಷತಾ ಕಿಟ್ಗಳನ್ನು ಈವರೆಗೆ ನೀಡಲಾಗಿಲ್ಲ. ಆರೋಗ್ಯ ಸಿಬ್ಬಂದಿಗಳಂತೆ ಕ್ವಾರಂಟೈನ್ ಕೇಂದ್ರದಲ್ಲಿ ನೇರ ಸಂಪರ್ಕಕ್ಕೆ ಬರುವ ದೇವಳದ ಸಿಬ್ಬಂದಿಗಳಿಗೆ ಯಾವುದೇ ಸುರಕ್ಷತೆ ಇಲ್ಲವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನರಸಿಂಹ ಹಳಗೇರಿ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ:
► ಕುಂದಾಪುರ ವಿಧಾನಸಭೆ ಕ್ಷೇತ್ರದ ಕ್ವಾರಂಟೈನ್ ಮಾಹಿತಿ-ದೂರಿಗಾಗಿ ಕಂಟ್ರೋಲ್ ರೂಂ – https://kundapraa.com/?p=37760 .
► ಕುಂದಾಪುರದಲ್ಲಿ120 ಬೆಡ್ಗಳ ಕೋವಿಡ್-19 ಆಸ್ಪತ್ರೆ ಸಜ್ಜು – https://kundapraa.com/?p=37752 .
► ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ 27 ಕೊರೋನಾ ಪಾಸಿಟಿವ್ – https://kundapraa.com/?p=37743 .