ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವ ಮಂಗಳವಾರ ವೈಭವದಿಂದ ಸಂಪನ್ನಗೊಂಡಿತು. ಶ್ರೀದೇವಿಯ ವಿಜೃಂಭಣೆಯ ಉತ್ಸವಕ್ಕೆ ಆಸುಪಾಸಿನ ಗ್ರಾಮಗಳಿಂದ ಬಂದಿದ್ದ ದೊಡ್ಡ ಸಂಖ್ಯೆಯ ಭಕ್ತರು ಸಾಕ್ಷಿಯಾದರು.
ರಥೋತ್ಸವ ಆಚರಣೆಯ ಪ್ರಮುಖ ವಿಧಿಗಳನ್ನು ಪೂರೈಸುವ ತಂತ್ರಿ ನಿತ್ಯಾನಂದ ಅಡಿಗರು ದೇವಸ್ಥಾನಕ್ಕೆ ಬರುವ ವೇಳೆ ದೇಗುಲದ ಧ್ವಜಸ್ತಂಭದ ಬಳಿಯಲ್ಲಿ ಅಶುದ್ಧವಾಯಿತು ಎನ್ನುವ ಕಾರಣಕ್ಕಾಗಿ ಮತ್ತೆ ಮನೆಗೆ ಹಿಂತಿರುಗಿ, ಸ್ನಾನಾದಿಗಳನ್ನು ಪೂರೈಸಿ ದೇವಸ್ಥಾನಕ್ಕೆ ಬಂದು ಪ್ರಾಯಶ್ಚಿತ್ತ ವಿಧಿಗಳನ್ನು ಪೂರೈಸಿದ ಬಳಿಕ, ರಥೋತ್ಸವದ ಧಾರ್ಮಿಕ ವಿಧಿಗಳನ್ನು ಪ್ರಾರಂಭಿಸಲಾಯಿತು. ಇದರಿಂದಾಗಿ ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಗಬೇಕಾಗಿದ್ದ ರಥೋತ್ಸವದ ಆರೋಹಣ 11.35ಕ್ಕೆ ಆರಂಭಗೊಂಡಿತು.
ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ 1.05ಕ್ಕೆ ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಜೋಡಿ (ಎರಡು) ಉತ್ಸವ ಮೂರ್ತಿಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಸಲಾಯಿತು.
ರಾಜ್ಯದಲ್ಲಿ ಹರಡುತ್ತಿರುವ ಕೊರನಾ ವೈರಸ್ ತಡೆಗಾಗಿ ಸರ್ಕಾರ ಉತ್ಸವ ಆಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆಯಬೇಕಾಗಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಬ್ರಹ್ಮರಥೋತ್ಸವವನ್ನು ಸರಳವಾಗಿ, ಸೀಮಿತ ಸಂಖ್ಯೆಯ ಉಪಸ್ಥಿತಿಯಲ್ಲಿ ಆರೋಹಣಾ ಹಾಗೂ ಅವರೋಹಣವನ್ನು ನಡೆಸುವಂತೆ ಜಿಲ್ಲಾಡಳಿತ ದೇವಸ್ಥಾನದ ಪ್ರಮುಖರಿಗೆ ಸೋಮವಾರವೇ ಖಡಕ್ ಸೂಚನೆ ನೀಡಿತ್ತು.
ಜಿಲ್ಲಾಡಳಿತದ ಸೂಚನೆ ಹಿನ್ನೆಲೆಯಲ್ಲಿ ಉಪ ವಿಭಾಗದ ಎಎಸ್ಪಿ ಹರಿರಾಮ್ ಶಂಕರ ಅವರು, ರಥೋತ್ಸವದ ವೇಳೆ ದೇವಸ್ಥಾನಕ್ಕೆ ಸಂಬಂಧಿಸಿದವರ ಹೊರತಾಗಿ ಸಾರ್ವಜನಿಕ ಪ್ರವೇಶ ಇರುವುದಿಲ್ಲ ಎಂದು ತಿಳಿಸಿದ್ದರು. ಹಾಗಾಗಿ, ಮಂಗಳವಾರ ಬೆಳಿಗ್ಗೆಯಿಂದಲೇ ಶಿವಮೊಗ್ಗ, ಕುಂದಾಪುರ ಹಾಗೂ ಬೈಂದೂರು ಭಾಗದಿಂದ ಬರುವ ಸಾರ್ವಜನಿಕರು ಹಾಗೂ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
‘ರಥೋತ್ಸವದ ಕಾರಣಕ್ಕಾಗಿ ರಾಜ್ಯ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ವಾಹನ ನಿಲುಗಡೆ ಹಾಗೂ ನಿರ್ಬಂಧ ಮಾಡಿರುವುದರಿಂದ ತೊಂದರೆಯಾಗುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಮಾರ್ಚ್ 10ರಂದು ಗಣಪತಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಶ್ರೀ ಕ್ಷೇತ್ರದ ವಾರ್ಷಿಕ ಉತ್ಸವಾಚರಣೆ, ಪ್ರತಿ ದಿನವೂ ವಿಶೇಷ ಕಾರ್ಯಕ್ರಮಗಳೊಂದಿಗೆ ಮುನ್ನಡೆಯಿತು. ಮಂಗಳವಾರ ಮಧ್ಯಾಹ್ನ ರಥಾರೋಹಣ ಹಾಗೂ ಸಂಜೆ 5.30ಕ್ಕೆ ರಥಾವರೋಹಣ ನಡೆಯಿತು.
ಬೆಳಿಗ್ಗೆಯೇ ನಿರ್ಧರಿತ ಮಹೂರ್ತದಲ್ಲಿ ರಥೋತ್ಸವ ಆಚರಣೆಯನ್ನು ಸರಳವಾಗಿ ಮುಗಿಸಬೇಕು ಎನ್ನುವ ಆದೇಶವಿದ್ದರೂ, ಗಂಟೆಗಟ್ಟಲೆ ತಡವಾಗಿ ರಥೋತ್ಸವ ನಡೆಸಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು, ದೇವಸ್ಥಾನದ ಪ್ರಮುಖರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಕೊಲ್ಲೂರು ದೇವಸ್ಥಾನದವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ಕುಮಾರ ಎಂ.ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕೆ.ವಿ.ಶ್ರೀಧರ ಅಡಿಗ, ವಂಡಬಳ್ಳಿ ಜಯರಾಮ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು, ಅಭಿಲಾಷ್ ಪಿ.ವಿ., ನರಸಿಂಹ ಹಳಗೇರಿ, ರಾಜೇಶ್ ಕಾರಂತ್, ಜಯಂತಿ ವಿಜಯಕೃಷ್ಣ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಚುಚ್ಚಿ ನಾರಾಯಣ ಶೆಟ್ಟಿ ಇದ್ದರು.
ಕೊರೊನಾ ಭೀತಿ ಹಾಗೂ ರಥೋತ್ಸವಕ್ಕೆ ಸಾರ್ವಜನಿಕ ಪ್ರವೇಶ ನಿರ್ಬಂಧದ ಹಿನ್ನೆಲೆಯಲ್ಲಿ ಎಎಸ್ಪಿ ಹರಿರಾಮ್ ಶಂಕರ ಅವರ ನೇತೃತ್ವದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ರಥೋತ್ಸವಕ್ಕೆ ಸಾರ್ವಜನಿಕ ಪ್ರವೇಶ ಇಲ್ಲ ಎನ್ನುವ ಮಾಹಿತಿ ತಿಳಿಯದೆ ಬೇರೆ ಬೇರೆ ಭಾಗದಿಂದ ಬಂದಿದ್ದ ಭಕ್ತರಿಗೆ ಮಾಸ್ತಿಕಟ್ಟೆಯ ಬಳಿಯಲ್ಲಿ ತಡೆ ಹಾಕಿದ್ದರಿಂದಾಗಿ ದೇವರಿಗಾಗಿ ತಂದಿದ್ದ ಕಾಯಿ, ಹಣ್ಣು, ಹೂವುಗಳನ್ನು ಅಲ್ಲಿಯೇ ಇಟ್ಟು ಅವರು ಹಿಂತಿರುಗಿದ್ದರು. ಈ ವಿಷಯ ತಿಳಿದ ದೇವಸ್ಥಾನದವರು ವಾಹನವನ್ನು ಕಳುಹಿಸಿ, ಭಕ್ತರು ತಂದಿದ್ದ ವಸ್ತುಗಳನ್ನು ದೇಗುಲಕ್ಕೆ ತಂದ ಪ್ರಸಂಗವೂ ನಡೆಯಿತು.
ಪ್ರತಿವರ್ಷದ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಬೆಳಿಗ್ಗೆಯೇ ಧಾರ್ಮಿಕ ವಿಧಿ ಆಚರಣೆಯ ಬಳಿಕ ದೇವಸ್ಥಾನ ಮುಂಭಾಗದಲ್ಲಿ ಇರುವ ಬ್ರಹ್ಮರಥದಲ್ಲಿ ದೇವರನ್ನು ಕುಳ್ಳಿರಿಸಿ ಬೀದಿ ಗಣಪತಿ ದೇವಸ್ಥಾನದವರೆಗೆ ರಥವನ್ನು ಎಳೆದು ರಥೋತ್ಸವ ನಡೆಸಲಾಗುತ್ತದೆ.
ಸಂಜೆಯ ಬಳಿಕ ಬ್ರಹ್ಮರಥದಲ್ಲಿ ದೇವರನ್ನು ಕೂರಿಸಿ ರಥಬೀದಿಯಲ್ಲಿ ಬ್ರಹ್ಮರಥವನ್ನು ಶಂಕರಾಶ್ರಮದವರೆಗೆ ಕೊಂಡೊಯ್ಯಲಾಗುತ್ತಿತ್ತು. ಜಾತ್ರೆಯ ತೇರಿನ ಈ ವೈಭವಕ್ಕೆ ದೇಶದ ವಿವಿಧ ಭಾಗಗಳಿಂದ ಬರುವ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಭೀತಿಯಿಂದಾಗಿ ರಥಬೀದಿಯಲ್ಲಿ ತೇರು ಎಳೆಯುವುದಕ್ಕೆ ನಿರ್ಬಂಧ ವಿಧಿಸಿದ್ದರಿಂದ ಸಂಜೆ ಗಣಪತಿ ದೇವಸ್ಥಾನದಿಂದಲೇ ರಥಾವರೋಹಣ ನಡೆಸಿ ಶ್ರೀದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಒಳಗೆ ಕೊಂಡೊಯ್ಯಲಾಯಿತು.