ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ವಿಶ್ವಕರ್ಮ ಸಮಾಜ ಯುವಕ ದಳ, ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘ, ಶ್ರೀದೇವಿ ಮಹಿಳಾ ಮಂಡಳಿ ಕೋಟೇಶ್ವರ ಇವರ ಆಶ್ರಯದಲ್ಲಿ, ಪುರೋಹಿತ್ ರೋಹಿತಾಕ್ಷ ಆಚಾರ್ಯರ ಪ್ರಧಾನ ಆಚಾರ್ಯತ್ವದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವವು ಕೋಟೇಶ್ವರ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಅಧ್ಯಾಪಕ ಪಡುವರಿ ನಾಗೇಶ್ ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮುದಾಯವರು ಸಾಮಾಜಿಕವಾಗಿ ಎಲ್ಲಾ ವರ್ಗದ ಜನರಲ್ಲಿ ಗುರುತಿಸಿಕೊಳ್ಳಲು ನಾವು ಮಾಡುವ ಪಂಚ ಕಸುಬುಗಳೇ ಕಾರಣ. ಆದರೆ ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಪ್ರಬುದ್ಧತೆಗೆ ಬರುವಲ್ಲಿ ಹಿಂದೆ ಉಳಿಯಲು ನಮ್ಮಲ್ಲಿನ ಶಿಕ್ಷಣ ಹಾಗೂ ಸಂಘಟನೆಯ ಕೊರತೆಯೇ ಮೂಲ ಕಾರಣವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಜೀವನ ಸಂಸ್ಕಾರದ ಜೊತೆಗೆ ಬದುಕುವ ಶಿಕ್ಷಣ ನೀಡಬೇಕಾಗಿದೆ ಎಂದರು.
ಪುರೋಹಿತ್ ರೋಹಿತಾಕ್ಷ ಆಚಾರ್ಯ ಶುಭಾಶಂಸನೆಗೈದು, ಭಗವಂತನ ಆರಾಧನೆ ಅಷ್ಟು ಸುಲಭವಲ್ಲ, ಅದಕ್ಕೂ ಯೋಗ ಹಾಗೂ ಋಣಾನುಬಂಧ ಸಂಬಂಧಗಳು ಬೇಕು. ಭಗವಂತ ಸರ್ವ ವ್ಯಾಪಿ, ಪ್ರತ್ಯಕ್ಷವಾಗಿ ಕಾಣುವ ದೇವರಲ್ಲ. ಈ ಜಗತ್ತಿನ ಸೃಷ್ಟಿ ,ಸ್ಥಿತಿ, ಲಯಗಳನ್ನು ಮಾಡಿದಂತಹ ಭಗವಂತನ ದಿನವೇ ಶ್ರೀ ವಿಶ್ವಕರ್ಮ ಯಜ್ಞ ಮಹೋತ್ಸವ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಜತ ಶಿಲ್ಪಿ ಸಾಂತಾವರ ಕೇಶವ ಆಚಾರ್ಯ ಅವರನ್ನು ಗುರುತಿಸಿ ಸಮ್ಮಾನಿಸಲಾಯಿತು ಹಾಗೂ ಯುವ ಪ್ರತಿಭೆ ಪ್ರೀತಮ್ ಆಚಾರ್ಯ ಹೊದ್ರಾಳಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶ್ರೀ ವಿಶ್ವಕರ್ಮ ಸಮಾಜ ಯುವಕ ದಳದ ಅಧ್ಯಕ್ಷ ಸುರೇಶ್ ಆಚಾರ್ಯ ಸಾಂತಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೊಂಕಣ ರೈಲ್ವೆ ಅಸಿಸ್ಟೆಂಟ್ ಲೋಕೋ ಪೈಲೆಟ್ ಉಮೇಶ್ ಆಚಾರ್ಯ ಸಾಂತಾವರ, ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘದ ಅಧ್ಯಕ್ಷ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ಶ್ರೀ ವಿಶ್ವಕರ್ಮ ಸಮಾಜ ಯುವಕ ದಳದ ಗೌರವಾಧ್ಯಕ್ಷ ಸತೀಶ್ ಆಚಾರ್ಯ ಹೊದ್ರಾಳಿ, ಶ್ರೀದೇವಿ ಮಹಿಳಾ ಮಂಡಳಿ ಕೋಟೇಶ್ವರ ಇದರ ಅಧ್ಯಕ್ಷೆ ಲಕ್ಷ್ಮೀ ಗೋಪಾಲ ಆಚಾರ್ಯ ತೆಕ್ಕಟ್ಟೆ, ಶ್ರೀ ವಿಶ್ವಕರ್ಮ ಸಮಾಜ ಯುವಕ ದಳದ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಅರಸರಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮಂಗಳೂರು ಮಹಾಲಸಾ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಚಿತ್ರಕಲಾ ವಿದ್ಯಾರ್ಥಿ ಪ್ರೀತಮ್ ಆಚಾರ್ಯ ಹೊದ್ರಾಳಿ ಅವರ ಕುಂಚದಲ್ಲಿ ಮೂಡಿಬಂದ ಆಕರ್ಷಕ ಶ್ರೀ ವಿಶ್ವಕರ್ಮ ದೇವರ ಚಿತ್ತಾರದ ಕ್ಯಾನ್ವಾಸ್ನ್ನು ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಯುವಕ ಸೇವಾ ಸಂಘದ ಅಧ್ಯಕ್ಷ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ ಅವರಿಗೆ ಹಸ್ತಾಂತರಿಸಿದರು.
ಕೋಶಾಧಿಕಾರಿ ಗಣೇಶ್ ಆಚಾರ್ಯ ಕುಂಬ್ರಿ ಸ್ವಾಗತಿಸಿ, ಗೌರವಾಧ್ಯಕ್ಷ ಸತೀಶ್ ಆಚಾರ್ಯ ಹೊದ್ರಾಳಿ ಪ್ರಸ್ತಾವನೆಗೈದು, ಸತೀಶ್ ಆಚಾರ್ಯ, ಮಂಜುನಾಥ ಆಚಾರ್ಯ ಅರಸರಬೆಟ್ಟು, ದಿನೇಶ್ ಆಚಾರ್ಯ ಸಾಂತಾವರ ಸಹಕರಿಸಿ, ಕಲಾವಿದ ಜೀವಿ ವೆಂಕಟೇಶ್ ಆಚಾರ್ಯ ನಿರೂಪಿಸಿ, ವಂದಿಸಿದರು.