ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಕೋಟದ ಮುಖ್ಯ ಪೇಟೆಯೊಂದರ ಜ್ಯುವೆಲರ್ಗೆ ನುಗ್ಗಿ ಮಾಲೀಕನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬುಧವಾರ ಕೋಟ ಪೊಲೀಸರು ಗೋವಾದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಕರೆತಂದಿದ್ದಾರೆ.
ಗೋವಾ ಮೂಲದ ಚಂದ್ರಕಾಂತ ಬಂಧಿತ ಆರೋಪಿ. ಪ್ರಕರಣದಲ್ಲಿ ಮೂರು ಮಂದಿ ಭಾಗಿಯಾಗಿದ್ದು ಇನ್ನೋರ್ವ ಆರೋಪಿ ಪ್ರಥಮೇಶ್ ಕುರಿತು ಮಾಹಿತಿ ದೊರೆತಿದೆ ಎನ್ನಲಾಗಿದೆ ಹಾಗೂ ಮತ್ತೋರ್ವ ತಲೆ ಮರೆಸಿಕೊಂಡಿದ್ದಾನೆ.
ಪ್ರಕರಣದ ವಿವರ: ಕೋಟದ ದುರ್ಗಾ ಜ್ಯುವೆಲರ್ಗೆ ಮೇ21ರಂದು ಗ್ರಾಹಕರ ಸೋಗಿನಲ್ಲಿ ಬಂದ ಮೂರು ಮಂದಿ ಯುವಕರು ಅಂಗಡಿಯ ಬಾಗಿಲನ್ನು ಮುಚ್ಚಿ ಮಾಲೀಕ ರವಿಯವರಿಗೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದೋಚಲಾಗಿತ್ತು. ಹಲ್ಲೆ ನಡೆಯುತ್ತಿದ್ದಾಗ ರವಿಯವರು ಸಹಾಯಕ್ಕಾಗಿ ಕೂಗಿಕೊಂಡಿದ್ದು ಪಕ್ಕದ ಅಂಗಡಿಯವರು ಬಾಗಿಲು ತೆರದು ರಕ್ಷಣೆಗೆ ಮುಂದಾಗಿದ್ದರು. ಈ ಸಂದರ್ಭ ಇಬ್ಬರು ಆರೋಪಿಗಳು ಬೈಕ್ನಲ್ಲಿ ಪರಾರಿಯಾಗಿದ್ದು, ಮತ್ತೋರ್ವ ಬೈಕ್ ಬಿಟ್ಟು ಪಕ್ಕದ ಬೀದಿಯಲ್ಲಿ ಓಡಿ ಹೋಗಿದ್ದ. ಅನಂತರ ಗಂಭೀರವಾಗಿ ಗಾಯಗೊಂಡ ಜ್ಯುವೆಲರ್ನ ಮಾಲೀಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿ: ಆರೋಪಿಗಳು ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಗೋವ ಸೇರಿದಂತೆ ಹಲವು ಕಡೆ ಇವರ ಮೇಲೆ ಪ್ರಕರಣಗಳಿದೆ ಎನ್ನಲಾಗಿದೆ. ಇವರು ದುಷ್ಕೃತ್ಯದ ಅನಂತರ ಸಾಕಷ್ಟು ಬುದ್ಧಿವಂತಿಕೆ ಪ್ರದರ್ಶಿಸುತ್ತಿದ್ದರು ಹಾಗೂ ಮೊಬೈಲ್ ಬಳಕೆ ಮಾಡದೆ ಒಂದು ಕಡೆ ನಿಲ್ಲದೆ ಪ್ರಯಾಣ ಬೆಳೆಸುತ್ತಿದ್ದರು ಎನ್ನಲಾಗಿದೆ.
ಕೋಟ ಪೊಲೀಸರ ಯಶಸ್ವಿ ಕಾರ್ಯಾಚರಣೆ: ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಸಾಕಷ್ಟು ಶ್ರಮ ವಹಿಸಿದ್ದಾರೆ. ಆರೋಪಿಗಳು ಕೋಟದಲ್ಲಿ ದುಷ್ಕೃತ್ಯ ನಡೆಸಿದ ಮೇಲೆ ಕೇರಳಕ್ಕೆ ತೆರಳಿ ಮತ್ತೆ ಅಲ್ಲಿಂದ ಗೋವಾಕ್ಕೆ ಹೋಗಿದ್ದರು. ಈ ಸಂದರ್ಭ ಹಳೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗೋವಾದ ಪೊಲೀಸರು ಇವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಬೈಕ್ನ ಸಹಾಯಧನ ಆರೋಪಿಗಳ ಪತ್ತೆ : ಪೊಲೀಸರಿಗೆ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಕೋಟದಲ್ಲಿ ಅವರು ಬಿಟ್ಟು ಹೋದ ಒಂದು ಬೈಕ್ ಮತ್ತು ಸಿಸಿ ಕ್ಯಾಮರ ದಾಖಲೆಗಳು ಸಹಾಯವಾಯಿತು ಎನ್ನಲಾಗಿದೆ. ಇದೀಗ ಗೋವಾ ನ್ಯಾಯಾಲಯದ ಒಪ್ಪಿಗೆ ಮೇರೆಗೆ ವಿಚಾರಣೆಗಾಗಿ ಓರ್ವನನ್ನು ವಶಕ್ಕೆ ಪಡೆದಿದ್ದು. ಇನ್ನೋರ್ವ ಆರೋಪಿಯನ್ನು ವಶಕ್ಕೆ ನೀಡಲಾಗುತ್ತದೆ ಎನ್ನಲಾಗಿದೆ ಮತ್ತು ತಲೆಮರೆಸಿಕೊಂಡ ಆರೋಪಿಗೆ ಶೀಘ್ರ ಶೋಧ ನಡೆದಿದೆ.
ಪ್ರಕರಣ ಭೇದಿಸಿದ ತಂಡ : ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ.ನಾಯಕ್ ರವರ ಮಾರ್ಗದರ್ಶನದಂತೆ, ಕೋಟ ಠಾಣಾಧಿಕಾರಿ ಕಬ್ಟಾಳ್ರಾಜ್ ಅವರು ತನ್ನ ತಂಡದೊಂದಿಗೆ ಪ್ರಕರಣ ಭೇದಿಸಿದ್ದಾರೆ. ಕೋಟ ಠಾಣೆಯ ಸಿಬಂದಿಗಳಾದ ಸಂತೋಷ, ಸುರೇಶ, ಜಯಂತ್, ಸತೀಶ್, ವಿಶ್ವನಾಥ ಮುಂತಾದವರು ತಂಡದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಘಟನೆ ನಡೆದು ಒಂದು ತಿಂಗಳೊಳಗೆ ಪ್ರಕರಣವನ್ನು ಭೇದಿಸಿದ ಕುರಿತು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.