ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪಠ್ಯ ಚಟುವಟಿಕೆಗಳಲ್ಲದೆ ಸಹ ಪಠ್ಯ ಚಟುವಟಿಕೆಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಪಠ್ಯೇತರ ಚಟುವಟಿಕೆಗಳು ಕಲಿಕಾರ್ತಿಗಳಲ್ಲಿ ಅವಶ್ಯಕವಾದ ಜೀವನ ಮೌಲ್ಯಗಳನ್ನು ತಿಳಿಸುವುದರ ಜೊತೆ ಜೊತೆಯಲ್ಲಿ ನಮ್ಮ ನಾಡು, ದೇಶ, ನುಡಿ, ಆಚಾರ, ವಿಚಾರ, ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಪರಿಪೂರ್ಣ ಜ್ಞಾನವನ್ನು ನೀಡುತ್ತದೆ. ಈ ಮುನ್ನೋಟವನ್ನು ಹೊತ್ತು ಗುರುಕುಲ ಪಬ್ಲಿಕ್ ಶಾಲೆ ವಕ್ವಾಡಿ ತಮ್ಮ ವಿದ್ಯಾರ್ಥಿಗಳಿಗೆ ವಾರ್ಷಿಕ ’ಪ್ರತಿಭಾ ಸಿಂಚನ’ ಕಾರ್ಯಕ್ರಮದ ಅಂಗವಾಗಿ, ಛಧ್ಮವೇಷ ಮತ್ತು ನೃತ್ಯ ಸ್ಪರ್ಧೆಗಳನ್ನು ಶಾಲೆಯ ವಿಶಾಲವಾದ ಕಲಾಂಗಣ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಯಿತು.
1ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಹಲವಾರು ವಿದ್ಯಾರ್ಥಿಗಳು ರಾಮನ್ , ಕಲಾಮ್, ಕಲ್ಪನ ಮತ್ತು ಆರ್ಯಭಟ ಎನ್ನುವ ನಾಲ್ಕು ತಂಡಗಳಿಂದ ಆಯ್ಕೆಗೊಂಡು ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಎರಡು ಸ್ಪರ್ಧೆಗಳು ಕ್ರಮವಾಗಿ ಜೂನಿಯರ್ , ಸಬ್ ಜೂನಿಯರ್ ಮತ್ತು ಸೀನಿಯರ್ ಎಂಬ ಮೂರು ಹಂತಗಳಲ್ಲಿ ನಡೆಯಿತು. ಛಧ್ಮವೇಷದಲ್ಲಿ ವಿದ್ಯಾರ್ಥಿಗಳು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ಇತ್ತೀಚಿನ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ಪ್ರತಿಭಾ ಪ್ರದರ್ಶನಗಳನ್ನು ಮಾಡಿದರು. ನಿರ್ಣಾಯಕರುಗಳು ಸ್ಪರ್ಧೆಯ ನಿಯಮದಂತೆ ಅತ್ಯುತ್ತಮ ೩ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರಲ್ಲದೇ, ವಿದ್ಯಾರ್ಥಿಗಳಿಗೆ ಪ್ರಶಂಸನಾರ್ಹ ಮಾತುಗಳನ್ನಾಡಿ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಸಾಯಿಜು ಕೆ.ಆರ್ ನಾಯರ್, ಉಪಪ್ರಾಂಶುಪಾಲೆಯಾದ ಸುನಂದಾ ಪಾಟೀಲ್, ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.