ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಗಂಗೊಳ್ಳಿಯ ನಿನಾದ ಸಂಸ್ಥೆಯ ವತಿಯಿಂದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮದ ಭಾಗವಾಗಿ ನಡೆಯುತ್ತಿರುವ ಜ್ಞಾನಗಂಗಾ-೨ ಕಾರ್ಯಕ್ರಮ ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಪ್ರತಿ ತಿಂಗಳು ನಡೆಯುತ್ತಿರುವ ಶ್ರೀಮದ್ ಭಗವದ್ಗೀತಾ ಬೋಧನೆಯು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಂಗೇಶ ಶೆಣೈ ಯಳಜಿತ್ ಅವರು ಗೀತೆಯ ೬ನೇ ಅಧ್ಯಾಯ ’ಆತ್ಮ ಸಂನ್ಯಾಸ ಯೋಗ’ದ ಬಗ್ಗೆ ಮಾತನಾಡಿದರು. ಸನ್ಯಾಸ ಆಶ್ರಮದಲ್ಲದೆ ಎಲ್ಲಾ ಆಶ್ರಮಗಳಲ್ಲಿ ತಮ್ಮ ಕರ್ತವ್ಯ ಸಾಧನೆಯಿಂದ ಮುಕ್ತಿಯನ್ನು ಹೊಂದಲು ಸಾಧ್ಯ ಇದೆ ಎಂದು ಹೇಳಿದರು. ತ್ಯಾಗದ ಮೂಲಕ ಆಧ್ಯಾತ್ಮದ ತುತ್ತತುದಿಯನ್ನು ತಲುಪಬಹುದೆಂದು ಕೆಲವು ನಿದರ್ಶನಗಳೊಂದಿಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಜ್ಞಾನಗಂಗಾ ಕಾರ್ಯಕ್ರಮದ ವಿದ್ಯಾರ್ಥಿಗಳಾದ ಜಿ.ವಜ್ರೇಶ ಶೆಣೈ, ಎನ್.ಪದ್ಮಶ್ರೀ ಕಿಣಿ, ಪೂರ್ವಿ ಚಿತ್ತಾಲ್ ಮತ್ತಿತರರು ಭಗವದ್ಗೀತಾ ಕಂಠಪಾಠವನ್ನು ನಡೆಸಿ ಶ್ಲೋಕಗಳ ಅರ್ಥವನ್ನು ತಿಳಿಸುವ ಪ್ರಯತ್ನ ನಡೆಸಿ ಪ್ರಶಂಸೆಗೆ ಪಾತ್ರರಾದರು. ಇದೇ ಸಂದರ್ಭ ಸಭಿಕರಿಂದ ಗೀತೆಯ ಏಳನೇ ಅಧ್ಯಾಯದ ಪಠಣ ನಡೆಯಿತು. ನಿನಾದ ಸಂಸ್ಥೆಯ ಸದಸ್ಯರು ಮತ್ತು ಜ್ಞಾನಗಂಗಾ ಕಾರ್ಯಕ್ರಮದ ಸದಸ್ಯರು ಉಪಸ್ಥಿತರಿದ್ದರು.