ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗ್ರಾಮ ಅಭಿವೃದ್ಧಿಗೊಂಡರೆ ದೇಶವು ಅಭಿವೃದ್ಧಿಗೊಂಡಂತೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕರೋನಾ ವೈರಸ್ ಜನರ ಬದುಕನ್ನು ನಾಶ ಮಾಡಿದೆ ಅಲ್ಲದೆ ಹಳ್ಳಿ ಹಳ್ಳಿಗೂ ಕಾಲಿಟ್ಟು ಗ್ರಾಮೀಣ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಕರೋನಾ ನಿರ್ವಹಣೆಯಲ್ಲಿ ಗ್ರಾಮ ಪಂಚಾಯತಿಗಳ ಪಾತ್ರ ಮಹತ್ವದಾಗಿದೆ. ಕೋವಿಡ್ ನಿರ್ವಹಣೆಯಲ್ಲಿ ಗ್ರಾಮ ಪಂಚಾಯತಿಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವೈರಸ್ ಹರಡದಂತೆ ತಡೆಯುವಲ್ಲಿ ಹಾಗೂ ಜನರಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಯಶಸ್ಸು ಸಾಧಿಸುತ್ತಿದೆ.
ಗ್ರಾಮ ಮಟ್ಟದ ಟಾಸ್ಕ್ಪೋರ್ಸ್ ಸಮಿತಿ ಮನೆ ಮನೆ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಕರೋನಾ ವೈರಸ್ ಬಗ್ಗೆ ಗ್ರಾಮದ ಜನರಲ್ಲಿ ಅರಿವು ಮೂಡಿಸುತ್ತಿದೆ. ಕೋವಿಡ್-೧೯ ವೈರಸ್ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ಕೋವಿಡ್ ಲಸಿಕೆ ಮಹತ್ವದ ಬಗ್ಗೆ ತಿಳಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಅನಗತ್ಯವಾಗಿ ಯಾರೂ ಹೊರಗಡೆ ತಿರುಗಾಡದಂತೆ ಮನವಿ ಮಾಡಿಕೊಳ್ಳಲಾಗುತ್ತಿದ್ದುಜನರ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವ ಟಾಸ್ಕ್ಪೋರ್ಸ್ ಸಮಿತಿ ಕೋವಿಡ್ ಕಟ್ಟಿ ಹಾಕುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ.
ಇನ್ನೊಂದೆಡೆ ಕೋವಿಡ್-19 ಸಂದರ್ಭದಲ್ಲಿಯೂ ಕೂಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನರಿಗೆ ನರೇಗಾ ಯೋಜನೆಯಡಿ ಕೆರೆ ಹೂಳೆತ್ತಿ ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳನ್ನು ಸರಕಾರದ ಮಾರ್ಗಸೂಚಿಯಂತೆ ಹಮ್ಮಿಕೊಂಡು ಜನರಿಗೆ ಉತ್ತೇಜನ ಹಾಗೂ ಆತ್ಮಸ್ಥೈರ್ಯ ನೀಡುವುದರ ಮೂಲಕ ಗ್ರಾಮ ಪಂಚಾಯತ್ಗಳು ಯಶಸ್ಸು ಸಾಧಿಸುತ್ತಿದೆ.
ಲಾಕ್ಡೌನ್ ನಿಯಮಗಳನ್ನು ಯಾರೂ ಉಲ್ಲಂಘನೆ ಮಾಡಬಾರದು. ಮಾಸ್ಕ್ ಕಡ್ಡಾಯವಾಗಿ ಬಳಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಭಯಕ್ಕಿಂತ ಜಾಗೃತಿ ಮುಖ್ಯ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಕೋವಿಡ್ ನಿಯಂತ್ರಣ ಸಂಬಂಧ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ – ಶೋಭಾ ಎಸ್., ಪಿಡಿಒ, ಗ್ರಾಮ ಪಂಚಾಯತ್ ತ್ರಾಸಿ.
ಕರೋನಾ ಎರಡನೇ ಅಲೆ ಅಪಾಯಕಾರಿಯಾಗಿದ್ದು ಜನರು ಜಾಗೃತೆ ವಹಿಸಬೇಕು. ಗ್ರಾಪಂ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕೋವಿಡ್ ನಿಯಮ ಪಾಲಿಸುವುದು ಜನರ ಕರ್ತವ್ಯವಾಗಿದ್ದು, ಕರೋನಾ ವೈರಸ್ ಹರಡದಂತೆ ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಸಹಕಾರ ನೀಡಬೇಕು. ಅನಗತ್ಯವಾಗಿ ಜನರು ಹೊರಗಡೆ ತಿರುಗಾಡಬಾರದು – ಶ್ರೀನಿವಾಸ ಖಾರ್ವಿ, ಅಧ್ಯಕ್ಷರು, ಗ್ರಾಮ ಪಂಚಾಯತ್, ಗಂಗೊಳ್ಳಿ.