ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ ಅವರು ಈ ವರ್ಷದ ತಿರುಗಾಟದಿಂದ ರಂಗಸ್ಥಳವೇರಲಿದ್ದಾರೆ. ಈವರೆಗೆ ಪ್ರಧಾನ ಭಾಗವತರಾಗಿದ್ದ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರು ಮೇಳದಿಂದ ದಿಢೀರ್ ನಿರ್ಗಮಿಸಿದ್ದಾರೆ.
ಕೆಲ ತಿಂಗಳ ಹಿಂದೆ ಜನ್ಸಾಲೆ ಪೇರ್ಡೂರು ಮೇಳದಲ್ಲಿ ಇರುವುದಿಲ್ಲ ಎಂಬ ಸುದ್ದಿ ಜಾಲತಾಣದಲ್ಲಿ ಪ್ರಸಾರವಾದ ಬಳಿಕ ಸ್ವತಃ ಜನ್ಸಾಲೆಯವರೇ ಸ್ಪಷ್ಟನೆ ನೀಡಿದ್ದರು. ಮೇಳದ ನೂತನ ಪ್ರಸಂಗದ ಕರಪತ್ರಗಳಲ್ಲಿ ಜನ್ಸಾಲೆಯವರ ಭಾವಚಿತ್ರ ಹಾಗೂ ಹೆಸರು ನಮೂದಿಸಲಾಗಿತ್ತು. ಆದರೆ ಬಳಿಕ ನಡೆದ ಬೆಳವಣಿಗೆಯಲ್ಲಿ ರಾಘವೇಂದ್ರ ಆಚಾರ್ಯ ಅವರು ಮೇಳದಲ್ಲಿ ಮುಂದುವರಿಯಲು ನಿರಾಕರಿಸಿದ್ದಾರೆನ್ನಲಾಗಿದೆ.
ನ. 30ರಿಂದ ಪೆರ್ಡೂರು ಮೇಳ ತಿರುಗಾಟ ಆರಂಭಿಸಲಿದ್ದು ಪ್ರೊ. ಪವನ್ ಕಿರಣಕೆರೆ ಅವರ ‘ಕೃಷ್ಣಕಾದಂಬಿನಿ’ ಪ್ರಸಂಗ ಈ ವರ್ಷದ ಕಥಾನಕವಾಗಿ ಪ್ರದರ್ಶನವಾಗಲಿದೆ.
ಪೆರ್ಡೂರು ಮೇಳ ಬಿಟ್ಟ ಬಳಿಕ ಯಾವುದೇ ಮೇಳ ತಿರುಗಾಟ ಮಾಡಿರಲಿಲ್ಲ ಈಗ ಕರುಣಾಕರ ಶೆಟ್ಟಿ ಅವರು ಮತ್ತೆ ಮೇಳಕ್ಕೆ ಸೇರುವಂತೆ ಆಹ್ವಾನಿಸಿದ್ದಾರೆ. – ಸುಬ್ರಹ್ಮಣ್ಯ ಧಾರೇಶ್ವರ, ಭಾಗವತರು
ಹಗಲು ಹೊತ್ತಿನಲ್ಲಿ ಕೂಡ ಗಾನವೈಭವ, ತಾಳಮದ್ದಲೆಯಂತಹ ಕಾರ್ಯಕ್ರಮಗಳಿಗೆ ತೆರಳಲು ನಿರ್ಬಂಧ ವಿಧಿಸಲಾಗಿದೆ. ನನ್ನನ್ನು ನಾನು ಮಾರಿಕೊಳ್ಳಲು ತಯಾರಿಲ್ಲ, ಆದ್ದರಿಂದ ಪೆರ್ಡೂರು ಮೇಳದ ತಿರುಗಾಟಕ್ಕೆ ವಿದಾಯ ಹೇಳಿದ್ದೇನೆ. – ಜನ್ಸಾಲೆ ರಾಘವೇಂದ್ರ ಆಚಾರ್ಯ, ಭಾಗವತರು
ಮೇಳದ ವ್ಯವಸ್ಥೆಗಳಿಗೆ ಜನ್ಸಾಲೆ ಅವರು ಒಪ್ಪದೇ ಇರುವುದರಿಂದ ಬದಲಾವಣೆ ಅನಿವಾರ್ಯ ಬಂತು. ಧಾರೇಶ್ವರ ಅವರು ಮೇಳದಲ್ಲಿ ಮುಂದುವರಿಯಲಿದ್ದಾರೆ. ಪ್ರದರ್ಶನ ಪೂರ್ವ ತಯಾರಿಗಳು ಅವರ ನಿರ್ದೇಶನದಲ್ಲಿ ಆರಂಭವಾಗಿವೆ. – ವೈ. ಕರುಣಾಕರ ಶೆಟ್ಟಿ, ಪೆರ್ಡೂರು ಮೇಳದ ಯಜಮಾನರು