ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾತನಾಡುವ ಮಹಾಲಿಂಗ ಎಂದೇ ಪ್ರಖ್ಯಾತಿ ಪಡೆದಿರುವ ಕುಂದಾಪುರ ತಾಲೂಕಿನ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಜ ನೂತನವಾಗಿ ಶಿಲಾಮಯಗೊಂಡ ಗರ್ಭಗುಡಿ, ತೀರ್ಥಮಂಟಪ ಸಮರ್ಪಣಾ ಕಾರ್ಯ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯವು ಫೆಬ್ರವರಿ 7ರಿಂದ ಮೊದಲ್ಗೊಂಡು ಫೆಬ್ರವರಿ 9ರ ತನಕ ನಡೆಯಲಿದೆ.
ಉಳ್ತೂರು ಜನರ ಆರಾಧ್ಯ ದೇವರಾಗಿರುವ ಶ್ರೀ ಮಹಾಲಿಂಗೇಶ್ವರನನ್ನು ವೋಳತ್ತೂರು ಕೇರಿಯ ಮಹಾದೇವ, ಮತಾನಾಡುವ ಮಹಾಲಿಂಗ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿರುವುದು ಕ್ಷೇತ್ರದ ಮ
ಹಿಮೆಯನ್ನು ಸಾರಿ ಹೇಳುತ್ತದೆ. ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ದೇವಾಲಯ ಕ್ರಮೇಣ ಪ್ರಾಕೃತಿಕ ಸನ್ನಿವೇಶಗಳಿಗೆ ಮಯ್ಯೊಡ್ಡಿ ಶಿಥಿಲಗೊಂಡಿತ್ತು. ಇತ್ತಿಚಿಗೆ ಮತ್ತೆ ಊರ ಪ್ರಮುಖರ ನೇತೃತ್ವದಲ್ಲಿ ದೇವಸ್ಥಾನದ ಜೀಣೋದ್ಧಾರ ಕಾರ್ಯ ನಡೆದಿದ್ದು ಪ್ರಥಮ ಹಂತವಾಗಿ ಹೊರ ಹೆಬ್ಬಾಗಿಲು ಮತ್ತು ವಸಂತ ಮಂಟಪ, ರಥದ ಮನೆ ಮತ್ತು ನೂತನ ನಂದಿ ವಿಗ್ರಹ ಬಳಿಕ ದೇವಸ್ಥಾನದ ಗರ್ಭಗುಡಿ, ತೀರ್ಥಮಂಟಪ, ಒಳಹೆಬ್ಬಾಗಿಲು ಮತ್ತು ಒಳಸುತ್ತಿನ ಕಲ್ಲು ಹಾಸು ಕಾರ್ಯ ಪೂರ್ಣಗೊಂಡಿದೆ.
ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷರಾದ ಮಂಬೈ ವಾಸಿ ಉಳ್ತೂರು ಶ್ರೀ ಮೋಹನದಾಸ ಶೆಟ್ಟಿ ಕಟ್ಟೆಮನೆ ಅವರ ನೇತೃತ್ವ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ ಹಲ್ತೂರು ಮೇಲ್ಮನೆ ಅವರ ಮಾರ್ಗದರ್ಶನದಲ್ಲಿ ಊರ ನಾಗರೀಕರ ಸಹಕಾರದೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ನೆರವೇರಿದೆ. ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಸುಬ್ರಹ್ಮಣ್ಯ ಅಡಿಗರ ನೇತೃತ್ವದಲ್ಲಿ ಹಾಗೂ ವೇದಮೂರ್ತಿ ಬಾರಕೂರು ಹೃಷಿಕೇಶ ಬಾಯರಿಯವರ ಮಾರ್ಗದರ್ಶನದಲ್ಲಿ ಮತ್ತು ದೇವಸ್ಥಾನದ ಪ್ರಧಾನ ಅರ್ಚಕರಾದ ಸೀತಾರಾಮ ಅಡಿಗ ಉಳ್ತೂರು ಇವರ ಮುಂದಾಳತ್ವದಲ್ಲಿ ಜರುಗಲಿದೆ. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.
ದೇವಸ್ಥಾನ ವಾರ್ಷಿಕ ಮನ್ಮಹಾರಥೋತ್ಸವವು ಫೆಬ್ರವರಿ 14ರಂದು ಜರುಗಲಿದ್ದು. ಫೆಬ್ರವರಿ 11ರಿಂದ ಮೊದಲ್ಗೊಂಡು ಫೆಬ್ರವರಿ 16ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಫೆಬ್ರವರಿ 18ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ. ಖ. ವೀರೇಂದ್ರ ಹೆಗ್ಡೆ ಅವರು ಆಶೀರ್ವಜನ ಹಾಗೂ ಶುಭಾಶಂಸನೆಗೈಯಲಿದ್ದಾರೆ.