ಬೈಂದೂರು: ಅಕ್ಷತಾ ದೇವಾಡಿಗಳನ್ನು ಧಾರುಣವಾಗಿ ಹತ್ಯೆ ಮಾಡಿದ ಪಾಪಿಗಳಿಗೆ ಕಠಿಣ ಶಿಕ್ಷೆಯಾದಲ್ಲಿ ಮಾತ್ರ ತಮ್ಮ ಮಗಳ ಆತ್ಮಕ್ಕೆ ಶಾಂತಿ ದೊರಕಲಿದೆ ಎನ್ನುವ ವೇದನೆ ಆಕೆಯ ಹೆತ್ತವರಿಗೆ ಇದೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಸೊಲೋಚನಾ ಭಟ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸವಿತಾ ಕೋಟ್ಯಾನ್, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎಂ ಸುಕುಮಾರ ಶೆಟ್ಟಿ ಹಾಗೂ ಪಕ್ಷದ ಪ್ರಮುಖರಾದ ಶ್ಯಾಮಲಾ ಕುಂದರ್ ಅವರ ಜೊತೆಯಲ್ಲಿ ಶನಿವಾರ ಮಧ್ಯಾಹ್ನ ಮೃತ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗರ ಮನೆಗೆ ತೆರಳಿ ಆಕೆಯ ಪೋಷಕರೊಂದಿಗೆ ಮಾತುಕತೆ ನಡೆಸಿ ಅವರಿಗೆ ಸಾಂತ್ವಾನ ನೀಡಿದ ಬಂದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಳೆದ ವರ್ಷ ರತ್ನಾ ಕೊಠಾರಿ, ಈ ವರ್ಷ ಅಕ್ಷತಾ ದೇವಾಡಿಗ ಹೀಗೆ ಅಮಾಯಕ ವಿದ್ಯಾರ್ಥಿನಿಯರು ಬಲಿಯಾಗುತ್ತಾ ಹೋದರೆ ಹೆಣ್ಣು ಮಕ್ಕಳು ಹಗಲಿನಲ್ಲಿಯೇ ಒಂಟಿಯಾಗಿ ತಿರುಗಾಡಲು ಭಯ ಪಡುವ ಸನ್ನಿವೇಶಗಳು ನಿರ್ಮಾಣವಾಗಿದೆ. ನಿಗೂಢವಾಗಿ ಸಾಪನ್ನಪ್ಪಿದ ರತ್ನಾ ಕೊಠಾರಿ ಪ್ರಕರಣ ನಡೆದು ಒಂದು ವರ್ಷ ಕಳೆದರೂ, ಇನ್ನೂ ಸಾವಿನ ನಿಖರವಾದ ಕಾರಣಗಳೇ ಬಹಿರಂಗವಾಗಿಲ್ಲ. ಆಕೆಯ ಸಾವಿನ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದು ಆರೋಪಿಗಳ ಬಂಧನವಾಗಿದ್ದರೆ, ಅಕ್ಷತಾಳ ಹತ್ಯೆ ನಡೆಯುತ್ತಿರಲಿಲ್ಲ ಎನ್ನುವ ಭಾವನೆ ಆಕೆಯ ಪೋಷಕರಲ್ಲಿ ಹಾಗೂ ಸ್ಥಳೀಯರಲ್ಲಿ ಇದೆ.
ಅಕ್ಷತಾ ಪ್ರಕರಣ ನಡೆದು ಮೂರು ದಿನಗಳ ಒಳಗೆ ಎಸ್ಪಿ ಅಣ್ಣಾಮಲೈ ಅವರ ನೇತ್ರತ್ವದಲ್ಲಿ ಪೊಲೀಸರು ಪ್ರಕರಣದ ಆರೋಪಿಗಳನ್ನು ಬಂಧಿಸಿರುವುದು ಸ್ವಾಗತಾರ್ಹ. ಆದರೆ ಈ ಕೊಲೆಯ ಹಿಂದೆ ಎಷ್ಟು ಜನರಿದ್ದಾರೆ, ಆಕೆಯ ಕೊಲೆ ಯಾವ ಕಾರಣಕ್ಕೆ ನಡೆದಿದೆ ಎನ್ನುವ ಎಲ್ಲ ಸಮಗ್ರ ಮಾಹಿತಿಯನ್ನು ಪೊಲೀಸರು ತನಿಖೆಯಿಂದ ಬಹಿರಂಗ ಪಡಿಸಬೇಕು. ಯಾವುದೆ ಕಾರಣಕ್ಕೂ ಆರೋಪಿಗಳನ್ನು ರಕ್ಷಿಸುವ ಹಾಗೂ ಪ್ರಭಾವಕ್ಕೆ ಒಳಗಾಗುವ ಸನ್ನಿವೇಶಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡ ಬಾರದು. ಪ್ರಕರಣದ ನಿಷ್ಪಕ್ಷವಾದ ತನಿಖೆಯನ್ನು ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಮುಕ್ತ ಅವಕಾಶವನ್ನು ಮಾಡಿಕೊಡಬೇಕು. ಹೇನ್ಬೇರು ಗ್ರಾಮದ ಜನರ ಆಗ್ರಹದಂತೆ ಅಲ್ಲಿನ ವಿದ್ಯಾರ್ಥಿಗಳು ಬೈಂದೂರಿನ ಶಾಲೆಗೆ ಬರಲು ಅನೂಕೂಲವಾಗುವಂತೆ ಸರ್ಕಾರಿ ಬಸ್ಸನ್ನು ಓಡಿಸಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.