ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸೈಂಟ್ ಥೋಮಸ್ ಶಾಲೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಸಮಾರಂಭ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪುತ್ತೂರು ಧರ್ಮ ಪ್ರಾಂತ್ಯದ ಧರ್ಮ ಗುರುಗಳಾದ ವಂದನಿಯ ಬಿಷಪ್ ಗಿವರ್ಗಿಸ್ ಮಾರ್ ಮಕೋರಿಯಸ್ ಅವರು ಮಾತನಾಡಿ ನಮ್ಮ ಸಂಸ್ಥೆಗಳು ಕೇವಲ ವಿದ್ಯಾ ಸಂಸ್ಥೆಗಳಲ್ಲ ಬದಲಾಗಿ ವಿದ್ಯಾ ದೇಗುಲಗಳಾಗಿ ಬದಲಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಮಹತ್ವವನ್ನು ಅರಿತು ಜೊತೆ – ಜೊತೆಯಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಸ್ಕ್ರತಿಗಳ ಬಗ್ಗೆ ಅರಿತಿರಬೇಕು. ಸಂಕಷ್ಟದ ಸಮಯದಲ್ಲಿ ಸಂಸ್ಥೆ ಮಕ್ಕಳಿಗೆ ವಿವಿಧ ಸ್ಥರದಲ್ಲಿ ಉತ್ತಮ ಶಿಕ್ಷಣವನ್ನು ನೀಡಿದೆ ಮುಂದೆ ಬರುವ ದಿನಗಳಲ್ಲಿ ನಮ್ಮ ಎಲ್ಲಾ ಸಂಸ್ಥೆಗಳು ಇನ್ನಷ್ಟೂ ಎತ್ತರಕ್ಕೆ ಸಾಗಲಿದೆ ಎಂದು ಹಾರೈಸಿದರು.
ಪತ್ರಕರ್ತ ವಸಂತ ಗಿಳಿಯಾರ್ ಮಾತನಾಡಿ ಬದಲಾಗುತ್ತಿರುವ ಕಾಲದಲ್ಲಿ ಮಕ್ಕಳು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕಿದೆ. ಒಂದು ನಿರ್ದಿಷ್ಟ ಗುರಿಯೆಡೆಗೆ ಸಾಗುವಾಗ ತಮ್ಮ ಪ್ರಯತ್ನ ಕೂಡ ಉತ್ಕೃಷ್ಟವಾಗಿರಬೇಕು ಹಾಗೆ ಪಾಲಕರು ಕೂಡ ಮಕ್ಕಳ ಮೇಲೆ ಹೆಚ್ಚಿನ ಒತ್ತಡವನ್ನು ಹಾಕದೆ ಅವರ ಇಚ್ಚೆಗೆ ಅನುಗುಣವಾಗಿ ಬದುಕನ್ನು ರೂಪಿಸಲು ಸಹಕರಿಸಬೇಕು ಎಂದು ಹೇಳಿದರು.
ಪೋಷಕ ಪ್ರತಿನಿಧಿ ಬಬಿತಾ ರಾಣಿ, ಪ್ರಾಂಶುಪಾಲರಾದ ವಂದನಿಯ ಫಾದರ್ ಜೈಸನ್ ನೆಲಿವಿಲ್ಲಾ, ಪಿಯುಸಿ ಪ್ರಾಂಶುಪಾಲರಾದ ವಂದನಿಯ ಫಾದರ ರೂಬೆಲ್, ಸಿಸ್ಟರ್ ಟ್ರಿಸಾ , ಸಿಸ್ಟರ್ ಸ್ಯಾನೆಟ್, ಪೋಷಕ ಪ್ರತಿನಿಧಿಗಳು, ವಿದ್ಯಾರ್ಥಿ ನಾಯಕರು ಹಾಜರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಜೈಸನ್ ನೆಲಿವಿಲ್ಲಾ ರವರು ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿದರು .ವಿದ್ಯಾರ್ಥಿ ನಾಯಕಿ ಕುಮಾರಿ ಸಂಜನಾ ಅತಿಥಿಗಳನ್ನು ಸ್ವಾಗತಿಸಿದರು. ಸಹ ಶಿಕ್ಷಕಿ ಸ್ನೇಹಾ ಪ್ರದೀಪ್ ಎಲ್ಲರನ್ನೂ ವಂದಿಸಿದರು. ಸಹ ಶಿಕ್ಷಕಿ ಶೋಭಾ ಲೋಬೊ ಕಾರ್ಯಕ್ರಮವನ್ನು ನಿರ್ವಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನೆರವೇರಿತು.