ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಮರಂತೆ ಪಂಚಾಯಿತಿಯ ಸುವರ್ಣ ಸೌಧದಲ್ಲಿ ವರ್ಷದ ಮೊದಲ ಸುತ್ತಿನ ಗ್ರಾಮಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತಾಧಿಕಾರಿ ಜ್ಯೋತಿ ಬಿ., ಮರವಂತೆ ಗ್ರಾಮ ಪಂಚಾಯಿತಿಯಲ್ಲಿ ಪ್ರಸ್ತುತ ಆಡಳಿತಾಧಿಕಾರಿ ಪಂಚಾಯಿತಿಯ ಹೊಣೆ ನಿರ್ವಹಿಸುತ್ತಿದ್ದು, ಸಿಬ್ಬಂದಿ ನೆರವಿನಿಂದ ಪಂಚಾಯಿತಿಯ ದೈನಂದಿನ ಚಟುವಟಿಕೆಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಶಿವರಾಮ ಕಾರಂತ ಮಾರ್ಗದಲ್ಲಿ ರಸ್ತೆಗೆ ಹೊಂದಿಕೊಂಡು ನಿವಾಸಿಯೊಬ್ಬರು ನಿರ್ಮಿಸಿರುವ ಗೊಬ್ಬರಗುಂಡಿ ತೆರವುಗೊಳಿಸುವಂತೆ ಅಲ್ಲಿನ ಸಾರ್ವಜನಿಕರು ಸಲ್ಲಿಸಿರುವ ಆಕ್ಷೇಪಣೆಯ ಮೇಲೆ ಕೈಗೊಂಡ ಕ್ರಮದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು ಸ್ಥಳ ಪರಿಶೀಲನೆ ಮತ್ತು ಮಹಜರಿನಲ್ಲಿ ಗುಂಡಿ ಅಪಾಯಕಾರಿ ಮತ್ತು ಅಸಹ್ಯಕರ ವಾತಾವರಣ ನಿರ್ಮಿಸಿರುವದನ್ನು ಮನಗಾಣಲಾಗಿದೆ. ನಿಯಮದಂತೆ ಅದರ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ ಪೂಜಾರಿ ಪಂಚಾಯಿತಿಗೆ ಒದಗಿಸಲಾದ ಅನುದಾನದ ಮಾಹಿತಿ ನೀಡಿದರು.
ಕಾರ್ಯದರ್ಶಿ ದಿನೇಶ ಶೇರುಗಾರ್ ವಾರ್ಷಿಕ ವರದಿ ಓದಿದರು. ಕರಸಂಗ್ರಾಹಕ ಶೇಖರ ಮರವಂತೆ ಆಯವ್ಯಯದ ವಿವರ ಮಂಡಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಕೋವಿಡ್-19 ಅಪಾಯದ ಬಗೆಗೆ ನರು ಹಿಂದಿಗಿಂತ ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಪಶು ವೈದ್ಯ ಡಾ. ಅರುಣ್ ಕೋಳಿಗಳಿಗೆ ಬಂದಿರುವ ಕಾಯಿಲೆಗೆ ಬಳಸಬೇಕಾದ ಮನೆಮದ್ದಿನ ಮಾಹಿತಿ ನೀಡಿದರು.
ಪ್ರಭಾಕರ ಖಾರ್ವಿ ಪ್ರಶ್ನೆಗೆ ಉತ್ತರಿಸಿದ ಮೀನುಗಾರಿಕಾ ಇಲಾಖೆಯ ಜೆ. ಎಂ. ವಿಶ್ವನಾಥಯ್ಯ ಮರವಂತೆಗೆ ಈ ಸಾಲಿನಲ್ಲಿ 11 ಮತ್ಸ್ಯಾಶ್ರಯ ಮನೆಗಳು ಮಂಜೂರಾಗಿವೆ ಎಂದರು. ಶಾಲಾ ಕ್ರೀಡಾಂಗಣದಲ್ಲಿರುವ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸಬೇಕು ಎಂಬ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಅವರ ಸಲಹೆಯನ್ನು ಮತ್ತು ಸೋಲಾರ್ ವಾಟರ್ ಹೀಟರ್ ಬಳಕೆಗೆ ಮಾಸಿಕ ಬಿಲ್ನಲ್ಲಿ ರಿಯಾಯಿತಿ ಸಿಗುತ್ತಿಲ್ಲ ಎಂಬ ಲೀನಾ ಕ್ರಾಸ್ತಾ ಅವರ ಆಕ್ಷೇಪವನ್ನು ಮೆಸ್ಕಾಂ ಶಾಖಾಧಿಕಾರಿ ಸುಜಯೀಂದ್ರ ಆಚಾರ್ ಪರಿಶೀಲಿಸುವ ಭರವಸೆ ನೀಡಿದರು. ವಸತಿ ಯೋಜನೆಯಡಿ ಎರಡು ವರ್ಷಗಳ ಹಿಂದೆ ಅರ್ಜಿ ನೀಡಿದ್ದ ಅಡಿಗಳಹಿತ್ಲು ಗಿರಿಜಾ ಪೂಜಾರಿ ಅವರಿಗೆ ಅಭಿವೃದ್ಧಿ ಅಧಿಕಾರಿ ಈಚೆಗೆ ಯಾವುದೇ ವಸತಿ ಯೋಜನೆ ಮಂಜೂರಾಗಿಲ್ಲ ಎಂದು ಸಮಜಾಯಿಷಿ ನೀಡಿದರು. ಅರಣ್ಯ ಇಲಾಖೆಯ ಸದಾಶಿವ ಮರ ಬೆಳೆಸುವವರಿಗೆ ಸಿಗುವ ಅನುದಾನದ ಕುರಿತು, ಕೃಷಿ ಅಧಿಕಾರಿ ಪರಶುರಾಮ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಮಾಜಿ ಅಧ್ಯಕ್ಷ ಎಂ. ವಿನಾಯಕ ರಾವ್ ಶುದ್ಧ ಕುಡಿಯುವ ನೀರಿನ ಘಟಕಗಳ ಬಳಕೆ ಮತ್ತು ಅದರಿಂದ ಬರುವ ಆದಾಯದ ಬಗ್ಗೆ ಪ್ರಶ್ನಿಸಿ, ಉತ್ತರ ಪಡೆದರು. ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್ ಸ್ವಾಗತಿಸಿ, ವಂದಿಸಿದರು.