ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡ ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ಮರವಂತೆಯ ಸೇವಾ ಸಾಂಸ್ಕೃತಿಕ ವೇದಿಕೆ ಸಾಧನಾ ವತಿಯಿಂದ ರವಿವಾರ ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಗುರುದಾಸ್ ವಿ. ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು.
ಸ್ವಾಗತಿಸಿ, ಅಭಿನಂದನೆಯ ನುಡಿಗಳನ್ನಾಡಿದ ಸಾಧನಾ ಸ್ಥಾಪಕಾಧ್ಯಕ್ಷ ಎಸ್. ಜನಾರ್ದನ ತೀರ ಸಾಮಾನ್ಯ ಹಿನ್ನೆಲೆಯಿಂದ ಬಂದ ಪೂಜಾರಿ ಅವರು ರಾಜಕೀಯ ಕ್ಷೇತ್ರದಲ್ಲಿ ಮೂಡಿಸಿದ ಛಾಪು ಅಸದೃಶವಾದುದು. ನಾಲ್ಕು ಅವಧಿಗೆ ಬೈಂದೂರು ಶಾಸಕರಾಗಿ ನಡೆಸಿದ ಅಭಿವೃದ್ಧಿ ಕಾರ್ಯಗಳಿಗೆ ಸಾಟಿ ಇಲ್ಲ. ಶಿಕ್ಷಣ, ಸಂಪರ್ಕ, ವಿದ್ಯುದೀಕರಣ, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಅವರಿಂದ ಅನನ್ಯ ಕೊಡುಗೆ ಸಂದಿದೆ. ಬೈಂದೂರು ತಾಲೂಕು ರಚನೆ ಅವರ ಸಾಧನೆಯ ಕಿರೀಟಕ್ಕೆ ಸೇರಿದ ಅನರ್ಘ್ಯ ಗರಿ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಅವರಿಂದ ಬೈಂದೂರು ಕ್ಷೇತ್ರ ಇನ್ನಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದೆ ಎಂದರು.
ಮಾತನಾಡಿದ ಗೋಪಾಲ ಪೂಜಾರಿ ತಮ್ಮ ಬಾಲ್ಯದ ಬದುಕು ಮತ್ತು ಸಾಧನೆಯ ಮೆಟ್ಟಿಲುಗಳನ್ನು ಏರಿದ ಬಗೆಯ ಮೆಲುಕು ಹಾಕಿದರು. ಮರವಂತೆಯ ಮೀನುಗಾರಿಕಾ ಹೊರಬಂದರನ್ನು ಇನ್ನಷ್ಟು ಉಪಯುಕ್ತಗೊಳಿಸಲು, ಮರವಂತೆಯನ್ನು ಪ್ರವಾಸಿ ಕೇಂದ್ರವಾಗಿ ರೂಪಿಸಲು ಮತ್ತು ಮರವಂತೆಯ ಅಗತ್ಯಗಳನ್ನು ಈಡೇರಿಸಲು ಶ್ರಮಿಸುವ ಭರವಸೆ ನೀಡಿದರು. ಅತಿಥಿಗಳಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಪೂಜಾರಿ ಅವರಿಗೆ ಶುಭ ಕೋರಿದರು. ಸಾಧನಾ ಸದಸ್ಯ ದೇವಿದಾಸ್ ಶ್ಯಾನುಭಾಗ್ ನಿರೂಪಿಸಿದರು.
ಇದೇ ಸಂದರ್ಭ ಅಲ್ಲಿನ ದುರ್ಗಾ ಯಕ್ಷೇಶ್ವರಿ ದೇವಸ್ಥಾನಕ್ಕೆ ಭೇಟಿಕೊಟ್ಟ ಗೋಪಾಲ ಪೂಜಾರಿ ಅವರಿಗೆ ಧರ್ಮದರ್ಶಿ ಎಂ. ಜಗದೀಶ ಅವಭೃತ್ ಪ್ರಸಾದ ನೀಡಿ, ಶಾಲು ಹೊದೆಸಿ ಗೌರವಿಸಿದರು.