ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆಯು ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಇಂದು ನಡೆಯಿತು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಮಾತನಾಡಿ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘವು ಹಿಂದಿನ ಸಾಲಿನಲ್ಲಿ ರೂ 200 ಕೋಟಿಗೂ ಮಿಕ್ಕಿದ ವ್ಯವಹಾರ ನಡೆಸಿ, ರೂ 70. 09 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ 10 ಡಿವಿಡೆಂಡ್ ನೀಡಲು ಉದ್ದೇಶಿಸಲಾಗಿದೆ. ಸಂಘವು ಹಿಂದಿನ ಸಾಲಿನಲ್ಲಿ ರೂ 32.73 ಕೋಟಿ ಠೇವಣಿ ಹೊಂದಿತ್ತು. ಸದಸ್ಯರಿಗೆ ರೂ 30.51 ಕೋಟಿ ಸಾಲ ನೀಡಿದೆ. ಅದರಲ್ಲಿ ಕೃಷಿ ಸಾಲದ ಮೊತ್ತ ರೂ 6.1 ಕೋಟಿ. ಸಂಘ ನಡೆಸಿದ ವ್ಯಾಪಾರದಿಂದ ರೂ 10.3 ಲಕ್ಷ ಲಾಭ ದೊರಕಿದೆ. ಸಂಘವು 205 ಸ್ವಸಹಾಯ ಸಂಘಗಳನ್ನು ರಚಿಸಿದ್ದು, ಅವು ರೂ 50.11 ಲಕ್ಷ ಠೇವಣಿ ಸಂಗ್ರಹಿಸಿವೆ ಎಂದರು.
ನಾವುಂದದಲ್ಲಿರುವ ಸಂಘದ ಪ್ರಧಾನ ಕಚೇರಿ, ಹೇರೂರು, ಬಡಾಕೆರೆ ಶಾಖೆಗಳು ಸ್ವಂತ ನಿವೇಶನ, ಕಟ್ಟಡ ಹೊಂದಿವೆ. ಮರವಂತೆಯಲ್ಲಿ ಸುಮಾರು ರೂ 50 ಲಕ್ಷ ವೆಚ್ಚದಲ್ಲಿ ಕಚೇರಿ ನಿರ್ಮಾಣ ನಡೆದಿದ್ದು, ಮಾರ್ಚ್ ಮುನ್ನ ಅದನ್ನು ಉದ್ಘಾಟಿಸಲಾಗುವುದು ಎಂದರು. ಸಂಘ ಆರ್ಥಿಕವಾಗಿ ದೃಢವಾಗಿಲ್ಲದ ಕಾಲದಲ್ಲಿ ಅಧ್ಯಕ್ಷರಾದ ತಾವು ಆ ಹುದ್ದೆಯಲ್ಲಿ ನಿರಂತರ 25 ವರ್ಷ ದುಡಿದಿದ್ದು, ಅದಕ್ಕೆ ಮತ್ತು ಸಂಘವನ್ನು ಸದೃಢ ಸ್ಥಿತಿಗೆ ತರಲು ಕಾರಣರಾದ ನಿರ್ದೇಶಕರು, ಸಿಬ್ಬಂದಿ ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಸದಸ್ಯರಾದ ಸಂಜೀವ ಗಾಣಿಗ ಮತ್ತು ಬಿ. ಎ. ಸಯ್ಯದ್ ಡಿವಿಡೆಂಡ್ ಹೆಚ್ಚಿಸಬೇಕು ಮತ್ತು ಸಾಲದ ಮೇಲಿನ ಬಡ್ಡಿ ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು. ಕೋವಿಡ್ನಿಂದಾಗಿ ಕುಸಿದ ಲಾಭ ಮತ್ತು ಕಟ್ಟಡದ ಮೇಲಿನ ವೆಚ್ಚದ ಕಾರಣ ಅದು ಸಾಧ್ಯವಾಗದು ಎಂದ ಪೂಜಾರಿ ಮಾರ್ಚ್ ಅಂತ್ಯದೊಳಗೆ ಪಾವತಿಸುವ ಸುಸ್ತಿ ಸಾಲದ ಮೇಲಿನ ದಂಡನೆ ಬಡ್ಡಿಯಲ್ಲಿ ಶೇ 3 ಕಡಿತ ಮಾಡುವುದನ್ನು ಪರಿಶೀಲಿಸಲಾಗುವುದು ಎಂದರು.
ಸುಷ್ಮಿತಾ ಮೊಗವೀರ ಪ್ರಾರ್ಥಿಸಿದರು. ನಿರ್ದೇಶಕ ಎಂ. ವಿನಾಯಕ ರಾವ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ವರದಿ, ಆಯವ್ಯಯ ವಿವರ ನೀಡಿದರು.
ಹಿರಿಯ ಸಿಬ್ಬಂದಿ ಸಂಜೀವ ಮಡಿವಾಳ ವಂದಿಸಿದರು. ಮರವಂತೆ ಶಾಖಾಧಿಕಾರಿ ಸೋಮಯ್ಯ ಬಿಲ್ಲವ ನಿರೂಪಿಸಿದರು.
ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ವಾಸು ಪೂಜಾರಿ, ಭೋಜ ನಾಯ್ಕ್, ಜಗದೀಶ ಪೂಜಾರಿ, ನರಸಿಂಹ ದೇವಾಡಿಗ, ರಾಮೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ರಾಮ, ನಾಗಮ್ಮ, ಸರೋಜಾ ಗಾಣಿಗ, ಅಶೋಕಕುಮಾರ ಶೆಟ್ಟಿ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಇದ್ದರು.