ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯೋಗವು ಬ್ರಹ್ಮಾಂಡ ಮೂಲದಿಂದ ನಮಗೆ ಶಕ್ತಿಯನ್ನು ಒದಗಿಸುವುದರಿಂದ ಯೋಗಾಭ್ಯಾಸವು ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಸ್ತರಗಳಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿ ಯೋಗಾಭ್ಯಾಸಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ, ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು.
ಉಪ್ಪುಂದದ ಶ್ರೀಗುರು ವಿವೇಕ ಯೋಗ ಸಂಘ, ಸುವಿಚಾರ ಬಳಗ, ಜೇಸಿಐ ಘಟಕ, ಟೆಂಪೋ, ಟ್ಯಾಕ್ಸಿ, ರಿಕ್ಷಾ ಚಾಲಕ-ಮಾಲಕರ ಸಂಘ ಶಾಲೆಬಾಗಿಲು ಮತ್ತು ಸೇವಾಸಂಗಮ ಶಿಶುಮಂದಿರ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಶಂಕರ ಕಲಾಮಂದಿರದ ಸಮೃದ್ಧ ಸಭಾಭವನದಲ್ಲಿ ವಿಶ್ವಯೋಗ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ಸುಖ-ದುಖಃಗಳಗೆ ಮನಸ್ಸೇ ಮೂಲ ಕಾರಣ. ಅಂತಹ ಮನಸ್ಸನ್ನು ಸರಿಪಡಿಸುವ ಕಾರ್ಯ ಯೋಗದಿಂದ ಸಾಧ್ಯವಾಗುತ್ತದೆ. ಯೋಗದಿಂದ ಚಿತ್ತಶುದ್ಧಿಯಾಗಿ ಒಳ್ಳೆಯ ಭಾವನೆಗಳು ಮೂಡುತ್ತದೆ. ಯೋಗದಿಂದ ತಕ್ಷಣ ಸಿಗುವ ಲಾಭ-ನಷ್ಟಕ್ಕಿಂತ ದೀರ್ಘಕಾಲದ ಉಪಯೋಗಗಳ ಬಗ್ಗೆ ದೃಷ್ಠೀಕರಿಸಬೇಕು ಎಂದು ಸಲಹೆ ನೀಡಿದರು.
ಯೋಗಶಿಕ್ಷಣವು ವಿಶ್ವದಾದ್ಯಂತ ಯುವಜನರನ್ನು ಆಕರ್ಷಿಸುತ್ತಿರುವುದು ಒಳ್ಳೆಯ ವಿಚಾರ. ಹಾಗೆಯೇ ಪ್ರತಿಯೊಬ್ಬರೂ ಕೂಡಾ ತಮ್ಮ ದೈನಂದಿನ ಕಾರ್ಯಕ್ರಮದಲ್ಲಿ ಯೋಗವನ್ನು ಅಳವಡಿಸಿಕೊಂಡು ಅದಕ್ಕಾಗಿ ಒಂದು ನಿರ್ದಿಷ್ಟ ಸಮಯ ಹಾಗೂ ಸ್ಥಳವನ್ನು ನಿಗದಿಪಡಿಸಿಕೊಂಡು ಸ್ವ-ಪ್ರೇರಣೆ, ಧೃಡ ಸಂಕಲ್ಪ ಮತ್ತು ಆತ್ಮವಿಶ್ವಾಸದಿಂದ ಮುಂದುವರಿದಲ್ಲಿ ಕೊನೆಕ್ಷಣದ ವರೆಗೆ ಆರೋಗ್ಯಕರ ಜೀವನ ನಡೆಸಬಹುದು ಎಂದರು.
ಈ ಸಂದರ್ಭ ಯೋಗಶಿಕ್ಷಕ ಮಂಜುನಾಥ ಬಿಜೂರು ಇವರನ್ನು ಗೌರವಿಸಲಾಯಿತು. ಆರೋಗ್ಯ, ಶಾಂತಿ, ನೆಮ್ಮದಿಗಾಗಿ ಯೋಗ ಎಂಬ ತತ್ವದಡಿಯಲ್ಲಿ ಜೂನ್.೧೧ರಿಂದ ಪ್ರತಿದಿನ ಬೆಳಿಗ್ಗೆ ಇದೇ ಸ್ಥಳದಲ್ಲಿ ಸುಮಾರು ಐವತ್ತು ಜನ ಆಸಕ್ತರಿಗೆ ಪ್ರಾಣಯೋಗ ತರಬೇತಿ ನೀಡಲಾಗಿತ್ತು. ಬುಧವಾರ ಶಿಬಿರದ ಸಮಾರೋಪದೊಂದಿಗೆ ವಿಶ್ವಯೋಗ ದಿನವನ್ನೂ ಆಚರಿಸಲಾಯಿತು. ಸುವಿಚಾರ ಬಳಗದ ಸಂಚಾಲಕ ವಿ. ಎಚ್. ನಾಯ್ಕ್, ಸೇವಾಸಂಗಮ ಶಿಶುಮಂದಿರದ ವ್ಯವಸ್ಥಾಪಕ ಮಹಾಬಲೇಶ್ವರ ಐತಾಳ್, ಟೆಂಪೋ, ಟ್ಯಾಕ್ಸಿ, ರಿಕ್ಷಾ ಚಾಲಕ-ಮಾಲಕರ ಸಂಘದ ಮಧುಕರ್, ಜೇಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ ಇದ್ದರು.