ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಬಹುದೊಡ್ಡ ಸೇತುವೆಗಳಲ್ಲಿ ಒಂದಾದ ಅರಾಟೆ ಸೇತುವೆ ಬಿರುಕು ಬಿಟ್ಟಿದ್ದು, ವಾಹನದ ಸವಾರರ ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನ ಮುಳ್ಳಿಕಟ್ಟೆ ಸಮೀಪ ಚತುಷ್ಟಥ ಕಾಮಗಾರಿ ಸಂದರ್ಭ ಹಳೆ ಸೇತುವೆ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇಂದು ಹೊಸ ಸೇತುವೆಯ ಪಿಲ್ಲರ್ ಮೇಲಿನ ಜೋಡಣೆಯಲ್ಲಿ ಬಿರುಕು ಬಿಟ್ಟಿದ್ದು, ರಾಡ್ಗಳೂ ತುಂಡಾಗಿವೆ. ಸದ್ಯ ವಾಹನಗಳನ್ನು ಹಳೆ ಸೇತುವೆಯ ಮೂಲಕ ತೆರಳಲು ಅನುವು ಮಾಡಿಕೊಡಲಾಗಿದೆ.
ಅರಾಟೆ ಸೇತುವೆಯ ಆರಂಭದಲ್ಲಿ ಈ ಹಿಂದೆಯೂ ಕುಸಿತ ಉಂಟಾಗಿತ್ತು. ಇದೀಗ ಇನ್ನೊಂದು ಕಡೆಯಲ್ಲಿ ಸೇತುವೆ ಬಿರುಕು ಉಂಟಾಗಿದ್ದು, ಹೊಸತರಲ್ಲೇ ಸೇತುವೆ ಕುಸಿದಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಕಳಪೆ ಕಾಮಗಾರಿ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸಿ ಗುತ್ತಿಗೆ ಕಂಪೆನಿಯ ವಿರುದ್ದ ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಗಂಗೊಳ್ಳಿ ಪೊಲೀಸ್ ಹಾಗೂ ಹೈವೇ ಪ್ಯಾಟ್ರೋಲ್ ಭೇಟಿ ನೀಡಿದ್ದಾರೆ.