ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಲಲಿತಕಲಾ ಅಕಾಡೆಮಿ 18 ರಿಂದ 24ರ ವರೆಗೆ ನಡೆಸುವ ಆನ್ಲೈನ್ ಕಲಾಶಿಬಿರದಲ್ಲಿ ಭಾಗವಹಿಸಲು ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ಕೆಯಾದ 60 ಚಿತ್ರ ಕಲಾವಿದರಲ್ಲಿ ಉಡುಪಿ ಜಿಲ್ಲೆಯ ಉಪ್ಪುಂದದ ಯು. ಮಂಜುನಾಥ ಮಯ್ಯ ಮತ್ತು ಪಲಿಮಾರಿನ ಶರತ್ಕುಮಾರ್ ಎಲ್ ಸೇರಿದ್ದಾರೆ. ಶಿಬಿರವನ್ನು ಅಕಾಡೆಮಿ ಅಧ್ಯಕ್ಷ ಮಹೇಂದ್ರ ಡಿ. ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಂಸ್ಕೃತಿ ಸಚಿವ ಸಿ. ಟಿ. ರವಿ ಶುಕ್ರವಾರ ಉದ್ಘಾಟಿಸಿದರು.
ಅಕಾಡೆಮಿಯು ಪ್ರತಿ ವರ್ಷ ಚಿತ್ರಕಲಾ ಶಿಬಿರ, ಕಲಾಪ್ರದರ್ಶನಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಈ ವರ್ಷ ಕೊರೊನಾ ಸಾಂಕ್ರಾಮಿಕದ ಕಾರಣ ಅದರ ಚಟುವಟಿಕೆ ಸ್ಥಗಿತವಾಗಿ ಕಲಾವಿದರಿಗೆ, ಕಲಾಭಿಮಾನಿಗಳಿಗೆ ನಿರಾಸೆಯಾಗಿತ್ತು. ಪ್ರಸಕ್ತ ಕಾರ್ಯಕ್ರಮ ಅವರಿಗೆ ಸಂತಸ ತಂದಿದೆ ಎಂದು ಕಲಾವಿದ ಮಯ್ಯ ಹೇಳಿದ್ದಾರೆ.
ಇದರಲ್ಲಿ ಆಯ್ಕೆಯಾದ ಕಲಾವಿದರು ತಮ್ಮ ಮನೆಗಳಲ್ಲೇ ಚಿತ್ರಗಳನ್ನು ರಚಿಸಿ, ಪ್ರದರ್ಶಿಸಲಿದ್ದಾರೆ. ಅಕಾಡೆಮಿಯ ಈ ಕಾರ್ಯಕ್ರಮದ ವಿಡಿಯೋ ಆವೃತ್ತಿ ಅದರ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗುತ್ತದೆ ಎಂದು ರಿಜಿಸ್ಟ್ರಾರ್ ಪ್ರಕಟಿಸಿದ್ದಾರೆ.