ಪಡುಬಿದ್ರಿ: ರಾ.ಹೆ.66ರ ಚತುಷ್ಪಥ ಕಾಮಗಾರಿಗಾಗಿ ರಸ್ತೆ ಡಿವೆಡರ್ ಅಳವಡಿಸಿದ ಹೆಜಮಾಡಿ ಶಿವನಗರ ಬಳಿ ಸೋಮವಾರ ಬೆಳಗ್ಗೆ ಮೀನಿನ ಕ್ಯಾಂಟರ್ ಮತ್ತು ಲಾರಿ ಮುಖಾಮುಖಿ ಢಿಕ್ಕಿಯಾಗಿ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಗೋವಾದಿಂದ ಕೇರಳಕ್ಕೆ ಬೂತಾಯಿ ಮೀನು ಸಾಗಿಸುತ್ತಿದ್ದ ಕ್ಯಾಂಟರ್, ಬಲಭಾಗದ ರಸ್ತೆಯಿಂದ ಎಡಭಾಗದ ರಸ್ತೆಗೆ ತಿರುಗುವ ತಿರುವಿನಲ್ಲಿ ತಮಿಳುನಾಡಿನಿಂದ ಉಡುಪಿಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿಗೆ ಮುಖಾಮುಖಿ ಢಿಕ್ಕಿಯಾಗಿ ಈ ದುರಂತ ಸಂಭವಿಸಿತು. ಎರಡೂ ವಾಹನಗಳ ಮುಂಭಾಗ ಅಪ್ಪಚಿಯಾಗಿ ಒಂದಕ್ಕೊಂದು ಸಿಲುಕಿಕೊಂಡಿದ್ದು, ಲಾರಿ ಚಾಲಕ ತಮಿಳುನಾಡಿನ ಮುತ್ತು(55) ಎಂಬಾತನನ್ನು ಹೊರಕ್ಕೆಳೆಯಲು ಜೆಸಿಬಿ ಬಳಸಬೇಕಾಯಿತು. ತಲೆ, ಕಾಲಿಗೆ ಗಂಭೀರ ಗಾಯಗೊಂಡು ಅರೆಪ್ರಜ್ಞವಸ್ಥೆಯಲ್ಲಿದ್ದ ಅವರನ್ನು ಮಂಗಳೂರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ರಭಸಕ್ಕೆ ಮೀನುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಘಟನೆಯಲ್ಲಿ ಕ್ಯಾಂಟರ್ ಚಾಲಕ, ಕಂಡಕ್ಟರ್, ಲಾರಿ ಕಂಡಕ್ಟರ್ ಪಾರಾಗಿದ್ದಾರೆ. ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು.
ಮಳೆಯ ಪ್ರಭಾವ: ಸೋಮವಾರ ಬೆಳಗ್ಗಿನಿಂದಲೇ ಮಳೆ ಪ್ರಾರಂಭವಾಗಿದ್ದು, ಅಪಘಾತ ಸಂದರ್ಭ ಎರಡೂ ವಾಹನಗಳ ಚಾಲಕರು ಬ್ರೇಕ್ ಹಾಕಲು ಯತ್ನಿಸಿದರೂ ಫಲಕಾರಿಯಾಗಿಲ್ಲ. ಚತುಷ್ಪಥ ಕಾಮಗಾರಿ ವೇಳೆ ಪದೇ ಪದೇ ರಸ್ತೆ ಸಂಚಾರ ಬದಲಿಸುತ್ತಿರುವುದು ವಾಹನ ಚಾಲಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.