ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವತಿಯಿಂದ ‘ವರದಿಗಾರಿಕೆಯ ಸವಾಲುಗಳು ಮತ್ತು ಸುದ್ದಿ ಮನೆಯ ವೈವಿಧ್ಯತೆ’ ವಿಷಯದ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿದ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಡೆಪ್ಯುಟಿ ಚೀಫ್ ರಿಪೋರ್ಟರ್ ಹಾಗೂ ಅಂಕಣಕಾರ ರಂಜಿತ್ ಎಚ್ ಅಶ್ವತ್ ಮಾತನಾಡಿ, ವರದಿಗಾರಿಕೆ ಮಾಡುವಾಗ ಮುಂದಾಗುವ ಸವಾಲುಗಳನ್ನು ಎದುರಿಸಲು ವರದಿಗೆ ಹೋಗುವ ಮೊದಲೇ ವರದಿಗಾರರು ಮಾನಸಿಕವಾಗಿ ದೈಹಿಕವಾಗಿ ಸಿದ್ಧರಿರಬೇಕು. ವರದಿಗೆ ಬಳಸುವ ಮೂಲಗಳ ಬಗ್ಗೆ ಸ್ಪಷ್ಟ ಜ್ಞಾನ ಮತ್ತು ನಿಖರತೆಯನ್ನು ಹೊಂದಿರಬೇಕು. ಯಾವುದು ಸುದ್ದಿ ಯಾವುದು ಸುದ್ದಿಯಲ್ಲ ಎಂಬುದನ್ನು ಗ್ರಹಿಸುವ ದೃಷ್ಟಿಕೋನ ವರದಿಗಾರರಿಗೆ ಮುಖ್ಯವಾಗಿರಬೇಕು.
ಪತ್ರಕರ್ತನಾದವನಿಗೆ ಸಾಹಿತ್ಯ ಜ್ಞಾನ, ಓದುಗಾರಿಕೆ, ಬರಹ, ವಿಷಯ ಜ್ಞಾನ, ಪದಗಳ ಮಿತಿ, ಅಕ್ಷರ ಜ್ಞಾನ ಅಗತ್ಯವಾಗಿರಬೇಕು. ಇವೆಲ್ಲ ಇಲ್ಲದಿದ್ದಲ್ಲಿ ಅಂತಹ ವರದಿ ತನ್ನ ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ. ಅಲ್ಲದೆ ಉತ್ತಮ ವರದಿಗಾರನಾಗಲು ವರದಿ ಕೌಶಲ್ಯ ಮಾತ್ರವಲ್ಲದೆ ಇದರ ಜೊತೆಗೆ ವಿನಯತೆ, ನೈತಿಕತೆ, ಉತ್ತಮ ಮಾತುಗಾರಿಕೆ ಹಾಗು ಉಡುಗೆ ತೊಡುಗೆಯ ಜ್ಞಾನವು ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ಸಂಯೋಜಕರಾದ ಪ್ರಸಾದ್ ಶೆಟ್ಟಿ, ಉಪನ್ಯಾಸಕರು ಹಾಗೂ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೂಜಶ್ರೀ ಕಾರ್ಯಕ್ರಮ ನಿರೂಪಿಸಿದರು.
