ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶ್ರೀಗುರು ನಿತ್ಯಾನಂದ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಇದರ ವಾರ್ಷಿಕ ಸಾಮಾನ್ಯ ಸಭೆಯು ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಆದಿತ್ಯ ಸಭಾಂಗಣದಲ್ಲಿ ಜರಗಿತು.
ಸಂಸ್ಥೆಯ ಉಪಾಧ್ಯಕ್ಷರಾದ ಶೇಖರ ಪೂಜಾರಿಂ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಹಕಾರಿಯ ಸಿಇಒ ಕುಮಾರಿ ಪೂಜಾ ಟಿ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರಗಳನ್ನು ಮಂಡಿಸಿದರು. ಕೋವಿಡ್ 16ರ ವೀಕೆಂಡ್ ಕರ್ಪ್ಯೂ ಇರುವ ಕಾರಣ ಸಭೆಯಲ್ಲಿ ವರ್ಚುವಲ್ ಮೀಟಿಂಗ್ ಅಳವಡಿಸಲಾಯಿತು.
ಸಹಕಾರಿಯ ಅಧ್ಯಕ್ಷರಾದ ಡಾ. ಎನ್ ಕೆ ಬಿಲ್ಲವ ಮಾತನಾಡಿ, ಕರೋನಾ ಸಂಕಷ್ಟದ ನಡುವೆಯೂ ಸಹಕಾರಿ ಸಂಸ್ಥೆ ಉತ್ತಮ ಪ್ರಗತಿ ಸಾಧಿಸಿ ಸದಸ್ಯರಿಗೆ ಶೇಕಡ 10 ಪಾಲು ಮುನಾಫೆ ಘೋಷಿಸಲಾಗಿದೆ ಎಂದರು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉಡುಪಿ ಜಿಲ್ಲೆಯ ಸಂಯೋಜಕರಾದ ವಿಜಯ ಬಿ.ಎಸ್ ಉಪಸ್ಥಿತರಿದ್ದು, ಸಹಕಾರಿಯ ದ್ಯೇಯೋದ್ದೇಶಗಳನ್ನು ಸಭೆಗೆ ತಿಳಿಸಿದರು. ಕಾನೂನು ರಿತ್ಯಾ ಲಾಭಾಂಶದಲ್ಲಿ ಸಲ್ಲಿಸಬೇಕಾಗಿರುವ ಶಿಕ್ಷಣ ನಿಧಿಯ ಚೆಕ್ ಅನ್ನು ಕುಮಾರಿ ಪೂಜಾ ಹಸ್ತಾಂತರಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾದ ಶುಭದಾ ಶಾಲೆಯ ವಿದ್ಯಾರ್ಥಿನಿಯರಾದ ಸ್ಪಂದನಾ ಮುತ್ತಯ್ಯ ಪೂಜಾರಿ, ಕುಮಾರಿ ಸ್ವೀಕೃತಿ ಕರುಣಾಕರ ಶೆಟ್ಟಿ ಇವರಿಗೆ ಮತ್ತು ಅಂತರಾಷ್ಟೀಯ ಮಟ್ಟದಲ್ಲಿ ಆನ್ಲೈನ್ ಮೂಲಕ ನಡೆದ ಯೋಗ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದ ಯೋಗ ಪಟು ಕುಮಾರಿ ನಿರೀಕ್ಷಾ ಬಾಬು ಪೂಜಾರಿ ಇವರಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶುಭದಾ ಶಾಲೆಯ ಮುಖ್ಯ ಶಿಕ್ಷಕರಾದ ರವಿದಾಸ ಶೆಟ್ಟಿಯವರು ಮತ್ತು ಮಕ್ಕಳ ಪೋಷಕರು ಮತ್ತು ಸಹಕಾರಿಯ ಸದಸ್ಯರು ಉಪಸ್ಥಿತರಿದ್ದರು.
ಸಹಕಾರಿಯ ಆರಂಭದಿಂದಲೂ ಸಹಕಾರಿಯ ಹಿತೈಷಿಗಳಾಗಿ ಉತ್ತಮ ವ್ಯವಹಾರ ಮಾಡುತ್ತಿರುವ ಅಭಿವೃದ್ದಿಯಲ್ಲಿ ಸಲಹೆ ಸೂಚನೆಗಳನ್ನು ನೀಡುತ್ತಿರುವ ಸಹಕಾರಿಯ ಸದಸ್ಯರಾದ ವಿ. ಹೆಚ್ ನಾಯಕ್ ಉಪ್ಪುಂದ, ಎನ್ ರಮೇಶ ಪೈ ನಾಗೂರು, ಶಂಕರ ಪೂಜಾರಿ ಮರವಂತೆ, ಮಂಜು ಪೂಜಾರಿ ಕೆ. ಮರವಂತೆ, ಸರ್ವೋತ್ತಮ ಭಟ್ ಉಪ್ಪುಂದ ಅವರನ್ನು ಸಭೆಯಲ್ಲಿ ಗೌರವಿಸಲಾಯಿತು.
ಸಹಕಾರಿಯ ಮೇಲ್ವಿಚಾರಕರಾದ ರಾಮಕೃಷ್ಣ ಬಿಲ್ಲವ, ವ್ಯವಸ್ಥಾಪಕ ತಿಮ್ಮಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಮಂಜು ಪೂಜಾರಿ, ಈಶ್ವರ ಖಾರ್ವಿ, ಯೋಗೀಶ್ ಕಾರಂತ, ರಾಜೀವ ಎಮ್ ಶೆಟ್ಟಿ, ಸುರೇಶ ಕೆ ಪೂಜಾರಿ, ಸಾವಿತ್ರಿ ಪೂಜಾರಿ ಮತ್ತು ಸಲಹೆಗಾರರಾದ ಕೆ ಪುಂಡಲೀಕ ನಾಯಕ್ ಉಪಸ್ಥಿತರಿದ್ದರು.
