ಬೈಂದೂರು: ಜಾತಿ, ಮತ, ಭೇಧ ಮರೆತು ಎಲ್ಲರೂ ಒಂದಾಗಿ ನಡೆಸಿದ ಲಕ್ಷಮೋದಕ ಗಣಪತಿ ಮಹಾಯಾಗದಿಂದ ದೇವರ ಲಕ್ಷ ಭಕ್ತರ ಕಡೆಗೆ ಬೀರಿದ್ದು, ನಮ್ಮೆಲ್ಲರ ಲಕ್ಷ ಲಕ್ಷ ದೋಷಗಳು, ಪಾಪಕರ್ಮಗಳು ನಿವಾರಣೆಯಾಗಿದೆ. ತ್ಯಾಗದಿಂದ ಯಾಗ ಸಂಪನ್ನವಾಗುತ್ತದೆ ಎಂದು ಕಟಪಾಡಿ ವೇಣುಗಿರಿ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಬೈಂದೂರು ಶ್ರೀ ಮಹಾಸತಿ ಅಮ್ಮನವರ ಸನ್ನಿಧಾನದಲ್ಲಿ ಐದು ದಿನಗಳ ಪರ್ಯಂತ ನಡೆಯುತ್ತಿರುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗ ಹಾಗೂ ನಾಗಮಂಡಲೋತ್ಸವದ ಕೊನೆಯ ದಿನ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಜೀವನದಲ್ಲಿ ಯಾವುದೇ ಘಟನೆಗಳಾಗಲಿ ಭಗವಂತನ ಪ್ರೇರಣೆಯಿಂದ ಸುಂದರವಾದ ಮುಕ್ತಾಯವನ್ನು ಕಾಣುತ್ತದೆ. ಸಂತರ ಆದರ್ಶ ಹಾಗೂ ಅವರ ಬದುಕು ಎಲ್ಲರಿಗೂ ಮಾದರಿಯಾಗಬೇಕು. ಅವರ ಮಾರ್ಗದರ್ಶನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಬರುವ ಏರಿಳಿತದ ಘಟನೆಗಳನ್ನು ಎದುರಿಸಲು ನಮ್ಮ ಮನಸ್ಸು ತಯಾರಾಗಿರಬೇಕು. ಜೀವನದಲ್ಲಿ ತೃಪ್ತಿಯಿಂದ ಬದುಕುವುದನ್ನು ರೂಢಿಸಿಕೊಂಡರೆ ಅದು ಸಾರ್ಥಕತೆ ಕಾಣುತ್ತದೆ ಎಂದರು.
ಅಧ್ಯಕ್ಷತೆವಹಿಸಿದ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಮಾತನಾಡಿ, ಹಿಂದೆ ಅನೇಕ ವರ್ಷಗಳ ಕಾಲ ನಾವು ಮತ್ತು ನಮ್ಮ ದೇಶ ಪರಕೀಯರ ದಾಳಿಗೆ ತುತ್ತಾಗಿ ನಮಗೆ ಅನ್ಯಾಯವಾದರೂ ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸಿದರೂ ನಮ್ಮ ಸಂಸ್ಕೃತಿ ಹಾಗೂ ನಮ್ಮತನ ಉಳಿಸಿಕೊಳ್ಳುವಲ್ಲಿ ನಾವು ಇಂದಿಗೂ ಸುಭದ್ರ ಸ್ಥಿತಿಯಲ್ಲದ್ದೇವೆ. ಆದರೆ ಇಂದು ಸಮಾಜದಲ್ಲಿನ ಕೆಲವು ಬುದ್ದಿಜೀವಿಗಳು, ವಿಚಾರವಂತರಿಂದ ದೇಶಕ್ಕೆ ಅನ್ಯಾಯವಾಗುತ್ತಿರುವುದು ಮಹಾದುರಂತ. ಈ ನಿಟ್ಟಿನಲ್ಲಿ ಧಾರ್ಮಿಕ ಹಿನ್ನೆಲೆಯಿಂದ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದರ ಮೂಲಕ ಎಳೆವೆಯಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿ ಸುಭದ್ರ ದೇಶ ನಿರ್ಮಾಣಕ್ಕೆ ಸಜ್ಜುಗೊಳಿಸಬೇಕು ಎಂದರು.
ಉಪ್ರಳ್ಳಿ ಶ್ರೀಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಜುನಾಥ ಆಚಾರ್ಯ ಬಡಾಕೆರೆ, ಉದ್ಯಮಿಗಳಾದ ಸಾಯಿದತ್ ಬೆಂಗಳೂರು, ದುಗ್ಗಪ್ಪ ಶೆಟ್ಟಿ ಹುಬ್ಬಳ್ಳಿ, ಭುಜಂಗ ಶೆಟ್ಟಿ ಮುಂಬೈ, ಮಂಜುನಾಥ ಬಿಲ್ಲವ ಮುಂಬೈ, ಜಯಾನಂದ ಹೋಬಳಿದಾರ್, ಕರುಣಾಕರ ಶೆಟ್ಟಿ ಬೆಂಗಳೂರು, ಡಾ.ಉದಯ್ ಬೈಂದೂರು ಉಪಸ್ಥಿತರಿದ್ದರು. ಶ್ರೀ ಮಹಾಸತಿ ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ ಪ್ರಾಸ್ತಾವಿಸಿದರು. ಸೇವಾಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಶಿವರಾಮ ಪೂಜಾರಿ ಯಡ್ತರೆ ವಂದಿಸಿದರು. ನಂತರ ತಡರಾತ್ರಿಯ ತನಕ ಢಕ್ಕೆ ಮಂಡಲ ನಾಗಮಂಡಲೋತ್ಸವ ನಡೆಯಿತು. ಬೈಂದೂರು ಇತಿಹಾಸದಲ್ಲಿಯೇ ಪ್ರಥಮವೆಂಬಂತೆ ನಡೆದ ಈ ಧಾರ್ಮಿಕ ಆಚರಣೆಯಲ್ಲಿ ಸುಮಾರು ಮೂವತ್ತು ಸಹಸ್ರ ಭಕ್ತಾದಿಗಳು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.