ಬೈಂದೂರು: ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ಸಮಾಜಘಾತುಕರನ್ನು ಹಿಡಿದು ಶಿಕ್ಷಿಸಲು ಜನತೆಯ ರಕ್ಷಣೆಗೆ ಆರಕ್ಷಕರು ಸದಾ ಎಚ್ಚರವಾಗಿರುತ್ತಾರೆ. ಅಪರಾಧಗಳನ್ನು ಪತ್ತೆಮಾಡುವಲ್ಲಿ ನಮಗೆ ಸಾರ್ವಜನಿಕರ ಸಹಕಾರವೂ ಮುಖ್ಯವಾಗಿರುತ್ತದೆ ಎಂದು ಬೈಂದೂರು ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಹೇಳಿದರು.
ಉಪ್ಪುಂದ ಗ್ರಾಪಂನ 2015-16ನೇ ಸಾಲಿನ ಮಹಿಳಾ ಮತ್ತು ಕಿಶೋರಿಯರ ಪ್ರಥಮ ಗ್ರಾಮಸಭೆಯಲ್ಲಿ ಕಾನೂನು ಹಾಗೂ ಪೋಕ್ಸೋ ಕಾಯ್ದೆಯ ಕುರಿತು ಮಹಿಳೆ ಮತ್ತು ಮಕ್ಕಳಿಗೆ ವಿವರಿಸಿ ಮಾತನಾಡಿದರು. ನಿಮ್ಮ ಪರಿಸರದಲ್ಲಿ ಯಾವುದಾದರೂ ಅಹಿತಕರ ಘಟನೆ ನಡೆದರೆ ಪೋಲೀಸ್ ಸಹಾಯವಾಣಿ ಅಥವಾ ಸಮೀಪದ ಠಾಣೆಗೆ ತಿಳಿಸಿ. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು. ಅಪರಾಧವನ್ನು ಮುಚ್ಚಿಡುವುದು ಮತ್ತು ಅಪರಾಧಿಗಳನ್ನು ರಕ್ಷಿಸುವುದು ಕೂಡಾ ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ನೆಲೆಯಲ್ಲಿ ಯವುದೇ ಅಳುಕಿಲ್ಲದೇ ಧೈರ್ಯವಾಗಿ ಠಾಣೆಗೆ ಬಂದು ಮಾಹಿತಿ ಕೊಡಿ. ಅಧಿಕಾರಿಗಳೊಡನೆ ಸಮಸ್ಯೆಗಳನ್ನು ಹೇಳಿಕೊಂಡರೆ ಅದರ ಬಗ್ಗೆ ಕಾನೂನು ರೀತಿಯಲ್ಲಿ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಮಕ್ಕಳ ಹಾಗೂ ಮಹಿಳೆಯರ ರಕ್ಷಣೆ, ಮಹಿಳೆಯರ ಸ್ವಾಭಿಮಾನಿ ಬದುಕು, ಮಹಿಳಾ ಸಬಲೀಕರಣ, ಹಕ್ಕು-ಕರ್ತವ್ಯ, ಕಾನೂನು ವಿಷಯವಾಗಿ ಸಭೆಯಲ್ಲಿ ಅತಿಥಿಗಳು ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ದುಗ್ಗಮ್ಮ ಅಧ್ಯಕ್ಷತೆವಹಿಸಿದ್ದರು. ಸಹಾಯಕ ತೋಟಗಾರಿಕಾ ಅಧಿಕಾರಿ ಕೆ.ಪಿ.ಚಿದಂಬರ್ ಮಾರ್ಗದರ್ಶಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗ್ರಾಪಂ ಉಪಾಧ್ಯಕ್ಷೆ ಸಿಂಗಾರಿಶೆಟ್ಟಿ, ಗ್ರಾಪಂ ಎಲ್ಲಾ ಸದಸ್ಯರು, ತಾಪಂ ಸದಸ್ದ ಪ್ರಸನ್ನಕುಮಾರ್, ಬೈಂದೂರು ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ.ಹರಮ್ ಸುಲ್ತಾನಾ, ಮಹಿಳಾ ಮತ್ತು ಶಿಶಿಕಲ್ಯಾಣ ಇಲಾಖೆಯ ಲಕ್ಷ್ಮೀ ನಾಯ್ಕ್, ಮಹಿಳಾಮಿತ್ರ ರೇಖಾ, ಮಕ್ಕಳಮಿತ್ರ ರವಿಚಂದ್ರ ಉಪಸ್ಥಿರಿದ್ದರು. ಗ್ರಾಪಂ ಸದಸ್ಯ ಮೋಹನಚಂದ್ರ ಪ್ರಾಸ್ತಾವಿಸಿದರು. ಪಿಡಿಓ ಹರೀಶ್ ಜಿ. ಮೊಗವೀರ ಸ್ವಾಗತಿಸಿ, ಕಾರ್ಯದರ್ಶಿ ಬಿ. ಮಾಧವ ವಂದಿಸಿದರು.