ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಕಳೆದ ಸಾಲಿನಲ್ಲಿ ರೂ.243 ಕೋಟಿ ವ್ಯವಹಾರ ನಡೆಸಿ ರೂ 44.09 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು.
ಸೋಮವಾರ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಂಘವು 21 ವರ್ಷ ಪೂರೈಸಿದೆ. ಏಳು ಶಾಖೆಗಳನ್ನು ಹೊಂದಿದ್ದು, ಬೈಂದೂರಿನ ಪ್ರಧಾನ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಖರೀದಿಸಲಾಗಿದ್ದು ಸಂಸ್ಥೆ ಬೆಳ್ಳಿ ಹಬ್ಬ ಆಚರಿಸುವ ವೇಳೆಗೆ ಸಾಗರ ಸೌಧ ಲೋಕಾರ್ಪಣೆಗೊಳ್ಳಲಿದೆ. ಕುಂದಾಪುರ ಶಾಖೆ ಸ್ವಂತ ನಿವೇಶನ ಕಟ್ಟಡ ಹೊಂದಿದ್ದು, ಸಿದ್ಧಾಪುರ ಶಾಖೆಗೂ ಸ್ವಂತ ನಿವೇಶನ ಖರೀದಿಸಲು ನಿರ್ಣಯಿಸಲಾಗಿದೆ. ಆಡಳಿತ ಮಂಡಳಿ, ಸಿಬ್ಬಂದಿ ಸಹಕಾರದಿಂದ ಸೊಸೈಟಿ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಹೇಳಿದರು.
ಉತ್ತಮ ಠೇವಣಿ ಹಾಗೂ ಸಾಲ ವಸೂಲಾತಿ ಮಾಡಿದ ಸಿದ್ಧಾಪುರ ಶಾಖೆಯ ಪ್ರಬಂಧಕಿ ಕವಿತಾ ಪೂಜಾರಿ ಹಾಗೂ ಸಿಬ್ಬಂದಿ ರವೀಂದ್ರ ಪೂಜಾರಿ, ಶಿರೂರು ಶಾಖೆಯ ಪ್ರಬಂಧಕ ನಾಗರಾಜ ಪೂಜಾರಿ ಹಾಗೂ ಸಿಬ್ಬಂದಿಯನ್ನು ಗುರುತಿಸಲಾಯಿತು. ಸಂಘದ ಕಾರ್ಯವ್ಯಾಪ್ತಿಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ನಿರ್ದೇಶಕರಾದ ಎಸ್. ರಾಜು ಪೂಜಾರಿ, ಕೆ. ಶಂಕರ ಪೂಜಾರಿ, ಚಿಕ್ಕು ಪೂಜಾರಿ, ಕಲ್ಪನಾ ಭಾಸ್ಕರ್, ಯು. ಕೇಶವ ಪೂಜಾರಿ, ಕೆ. ಶ್ರೀನಿವಾಸ ಪೂಜಾರಿ, ಜಯಸೂರ್ಯ ಪೂಜಾರಿ, ಶೇಖರ ಪೂಜಾರಿ, ಉದಯ ಜಿ. ಪೂಜಾರಿ, ವೆಂಕಟೇಶ ಮಾಚ ಪೂಜಾರಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಎಸ್. ರಾಜು ಪೂಜಾರಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಬಿ. ಪೂಜಾರಿ ವಾರ್ಷಿಕ ವರದಿ, ಲೆಕ್ಕಪತ್ರ, ಮುಂದಿನ ವರ್ಷದ ಅಂದಾಜು ಆಯವ್ಯಯ ಪತ್ರ ಮಂಡಿಸಿದರು.