ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಪ್ರಪಂಚದಲ್ಲಿ ಬಿಟ್ಟಿ ಸಲಹೆಗಳು ಬಹಳಷ್ಟು ಸಿಗುತ್ತದೆ. ಆದರೆ ನಮ್ಮ ಜೀವನಕ್ಕೆ ಅರ್ಥ ತುಂಬಬಲ್ಲ ಹಾಗೂ ಸ್ಪಷ್ಟವಾದ ಗುರಿ ತಲುಪಲು ಈ ಸಲಹೆಗಳು ಹೇಗೆ, ಎಷ್ಟು, ಮತ್ತು ಇದರಿಂದಾಗುವ ಒಳ್ಳೆಯ ಹಾಗೂ ಕೆಟ್ಟ ವಿಚಾರಗಳನ್ನು ನಿರ್ಧರಿಸಿ ಸಾಗುವುದು ಉತ್ತಮ ಎಂದು ಗಂಗೊಳ್ಳಿ ಎಸ್.ವಿ.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಹೇಳಿದರು.
ಅವರು ಬೈಂದೂರಿನ ಲಾವಣ್ಯ ಆಶ್ರಯದಲ್ಲಿ ಇಲ್ಲಿನ ಶಾರದಾ ವೇದಿಕೆಯಲ್ಲಿ ನಡೆಯುತ್ತಿರುವ ರಂಗಪಂಚಮಿ -2018 ನಾಟಕೋತ್ಸವದ ಎರಡನೆಯ ದಿನದ ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದು ಮಾತನಾಡಿ ಟಿ.ವಿ ಮಾಧ್ಯಮದಲ್ಲಿ ಪ್ರಸಾರವಾಗುವ ಅಶ್ಲೀಲತೆ, ಅನೈತಿಕತೆಯಿಂದ ತುಂಬಿರುವ ಹಲವು ಧಾರಾವಾಹಿಗಳು ನಮ್ಮ ಸಂಸ್ಕೃತಿಗೆ ಪೂರಕವಾಗಿರುವುದಿಲ್ಲ. ಅವುಗಳನ್ನು ಕುಟುಂಬದ ಹಿರಿಯರು ಮಕ್ಕಳೊಡನೆ ಕುಳಿತು ನೋಡಲು ಆಗದು. ಮಕ್ಕಳ ಸೂಕ್ಷ್ಮ ಮನಸುಗಳ ಮೇಲೆ ಸದಾ ಕೆಡುಕನ್ನೇ ಪ್ರಚೋದಿಸುತ್ತಿರುವ ಧಾರಾವಾಹಿಗಳಿಂದ ಉತ್ತಮ ನಾಟಕಗಳತ್ತ ಆಕರ್ಷಿಸುವ ಮೂಲಕ ಅವರನ್ನು ವಿಮುಖಗೊಳಿಸಬೇಕು ಎಂದು ಸಲಹೆ ನೀಡಿದ ಅವರು ಸೃಜನಶೀಲ ಮನಸುಗಳು ಒಂದಾಗಿರುವ ಲಾವಣ್ಯ ತನ್ನ ಪ್ರೇಕ್ಷಕರಿಗೆ ಕಳೆದ 40 ವರ್ಷಗಳಿಂದ ಸದಾ ಶ್ರೇಷ್ಠವಾದುದನ್ನು ಕೊಡುವ ಗುರಿ ಇರಿಸಿಕೊಂಡು ಉತ್ತಮ ನಾಟಕಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸುವ ಕೆಲಸಮಾಡುತ್ತಿದೆ. ಅದರ ಯಶಸ್ಸಿಗೆ ಈ ಅಂಶ ಪ್ರಮುಖ ಕಾರಣ ಎಂದರು.
ಸಂಸ್ಥೆಯ ಗೌರವಾಧ್ಯಕ್ಷ ವಿ. ಆರ್. ಬಾಲಚಂದ್ರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಪಿ. ಸುಖಾನಂದ ಶೆಟ್ಟಿ, ವಿಷ್ಣು ಪಡಿಯಾರ್, ಧಾರ್ಮಿಕ ಮುಖಂಡ ಡಾ. ಕಾಶಿನಾಥ ಪೈ ಗಂಗೊಳ್ಳಿ, ಹಿರಿಯ ಪತ್ರಕರ್ತ ಶ್ರೀಪತಿ ಹೆಗ್ಡೆ ಹಕ್ಲಾಡಿ, ದಿನೇಶ ಗಾಣಿಗ, ಸದಾಶಿವ ಪಡುವರಿ, ಯು. ಶ್ರೀನಿವಾಸ ಪ್ರಭು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯ ಕಲಾವಿದ ಎನ್. ನಾಗರಾಜ ಶೆಟ್ಟಿ, ಪಿ. ವಿಶ್ವನಾಥ ಶೆಟ್ಟಿ,ನಾರಾಯಣ ಕೆ, ಸುನಿಲ್ಕುಮಾರ್, ಬಾಲಕೃಷ್ಣ ಬೈಂದೂರು, ದಿನಕರ ಹೋಬಳಿದಾರ್ ರವರನ್ನು ಸಮ್ಮಾನಿಸಲಾಯಿತು.
ಸಂಸ್ಥೆಯ ಅಧಕ್ಷ ಗಿರೀಶ ಬೈಂದೂರು ಸ್ವಾಗತಿಸಿದರು.ಮಂಜುನಾಥ ಶಿರೂರು ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಮೋಹನ್ ಕಾರಂತ್ ವಂದಿಸಿದರು
ಸಭಾ ಕಾರ್ಯಕ್ರಮದ ಬಳಿಕ ಮಂಗಳೂರಿನ ನಂದಗೋಕುಲ ಕಲಾವಿದೆಯರು ಪು.ತಿ. ನರಸಿಂಹಾಚಾರ್ ವಿರಚಿತ ಹಾಗೂ ವಿದ್ದು ಉಚ್ಚಿಲ್ ನಿರ್ದೇಶಿಸಿದ ಗೋಕುಲ ನಿರ್ಗಮನ ನೃತ್ಯ ನಾಟಕ ಪ್ರಸ್ತುತಪಡಿಸಿದರು.