ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೋಲೆ ಗೆಲುವಿನ ಸೋಪಾನ. ಸೋಲಿನಿಂದಾಚೆಗೆ ಬರುವುದು ಹೇಗೆ ಎಂದು ನಾವು ತಿಳಿದಿಲ್ಲದಿದ್ದರೆ ಗೆಲುವನ್ನು ನಿಭಾಯಿಸುವುದು ಕಷ್ಟಸಾಧ್ಯ. ವ್ಯಕ್ತಿ ತನ್ನ ಜೀವನದಲ್ಲಿ ಸೋತೆ ಇಲ್ಲ ಎಂದರೆ ಅವನು ಜೀವನದ ಹೊಸತನಕ್ಕೆ ಪ್ರಯತ್ನಿಸಿಲ್ಲ ಎಂದರ್ಥ ಎಂದು ಕೋಟ ಪೋಲಿಸ್ ಠಾಣೆಯ ಪಿಎಸೈ ಮಧು ಬಿ.ಇ. ಅವರು ಹೇಳಿದರು.
ಅವರು ಕುಂದಾಪುರದ ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಈ ನಿಟ್ಟಿನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜತೆಗೆ ನಾಯಕತ್ವಗುಣ ಬೆಳೆಸಿಕೊಳ್ಳುವಲ್ಲಿ ಕ್ರೀಡೆ ಸಹಕಾರಿಯಾಗಿದೆ. ಕ್ರೀಡೆ ವ್ಯಕ್ತಿಗಳನ್ನು ಅರ್ಥ ಮಾಡಿಕೊಳ್ಳುವ ಗುಣವನ್ನು ಕಲಿಸಬಲ್ಲದು ಎಂದರು.
ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಅವರು ಧ್ವಜಾರೋಹಣಗೈದು ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಅದರಂತೆ ಯಶಸ್ವಿ ಜೀವನಕ್ಕೆ ತಾಳ್ಮೆಯ ಜತೆಗೆ ಗುರಿ ಇರಿಸಿಕೊಂಡು ಸಾಗುವುದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಕ್ರೀಡಾ ಚಟುವಟಿಕೆಯಲ್ಲಿಯೂ ಕೂಡಾ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ದೇಹ ಮತ್ತು ಮನಸ್ಸು ಸದೃಢವಗಬಲ್ಲದು ಎಂದು ಹೇಳಿದರು.
ಎಂ.ಎಂ. ಹೆಗ್ಡೆ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಚಂದ್ರಶೇಖರ್ ಶೆಟ್ಟಿ ಕೆರಾಡಿ, ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಇದರ ಅಧ್ಯಕ್ಷ ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ? ರಮೇಶ್ ಶೆಟ್ಟಿ , ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಇದರ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಇದರ ಖಜಾಂಚಿ ಭರತ್ ಶೆಟ್ಟಿ, ಎಕ್ಸಲೆಂಟ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ಆಚಾರ್ಯ ಮತ್ತಿತ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚನ ಪ್ರದರ್ಶನಗೊಂಡಿತು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಇದರ ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಜಯಲತಾ ಸಂಘಟಿಸಿ, ವಿದ್ಯಾರ್ಥಿ ನಾಯಕ ರಿತೇಶ್ ಶೆಟ್ಟಿಗಾರ್ ಪ್ರತಿಜ್ಞಾವಿಧಿ ಭೋಧಿಸಿ, ದೈಹಿಕ ಶಿಕ್ಷಣ ಶಿಕ್ಷಕ ವಿಜಯ ಕುಮಾರ್ ಶೆಟ್ಟಿ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಕುಮಾರ್ ವಂದಿಸಿದರು.