ಬೈಂದೂರು: ಕುಗ್ರಾಮಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸುತ್ತಿದ್ದು, ಬೈಂದೂರು ಕ್ಷೇತ್ರದ ಪ್ರತಿ ಊರಿನ ಸರ್ವತೋಮುಖ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಹೇನುಬೇರು ರಸ್ತೆಯ ಪ್ರಮುಖ ಭಾಗಗಳಲ್ಲಿ 2ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾದ 8 ಸೋಲಾರ್ ಬೀದಿದೀಪವನ್ನು ಹೊತ್ತಿಸಿ ಮಾತನಾಡಿದರು.
ಕೇಂದ್ರ ಸಚಿವರಾದ ವೀರಪ್ಪಮೊಯ್ಲಿಯವರ ನಿರ್ದೇಶನದಂತೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಸೋಲಾರದ ದೀಪಗಳನ್ನು ಅಳವಡಿಸಲಾಗಿದೆ. ಈ ಭಾಗದ ವಿದ್ಯಾರ್ಥಿಗಳು ದಿನವೂ ಶಾಲೆಗೆ ತೆರಳಲು ವಾಹನ ಸೌಕರ್ಯವನ್ನು ಮಾಡಲಾಗಿದೆ. ಮುಂದೆ ೧ಕೋಟಿ ವೆಚ್ಚದ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿಯವರ ಸಹಕಾರವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಹಾಗೂ ತಾ.ಪಂ ಸದಸ್ಯ ರಾಜು ಪೂಜಾರಿ, ತಾ.ಪಂ ಸದಸ್ಯ ರಾಮ ಕೆ, ಜಿ.ಪಂ. ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಗಾಣಿಗ, ಕಾಂಗ್ರೆಸ್ ಮುಖಂಡ ಮಂಜಯ್ಯ ಶೆಟ್ಟಿ, ಪಡುವರಿ ಗ್ರಾ.ಪಂ ಸದಸ್ಯ ವೆಂಕಟರಮಣ ಎಚ್, ಯಡ್ತರೆ ಗ್ರಾ.ಪಂ. ಉಪಾಧ್ಯಕ್ಷೆ ಕಲಾವತಿ ನಾಗರಾಜ್, ರಿಯಾಜ್ ಅಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು. ಮಣಿಕಂಠ ಕಾರ್ಯಕ್ರಮ ನಿರೂಪಿಸಿದರು.