Kundapra.com ಕುಂದಾಪ್ರ ಡಾಟ್ ಕಾಂ

ಲಾರಿ ಡಿಕ್ಕಿ ಗ್ರಾ.ಪಂ. ಸದಸ್ಯನ ದುರ್ಮರಣ

ಕುಂದಾಪುರ: ಸತತ ಮೂವತ್ತು ವರ್ಷಗಳಿಂದ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯನಾಗಿ ಜನಪ್ರಿಯರಾಗಿದ್ದ ಗಂಗೊಳ್ಳಿಯ ಬೀಚ್ ರಸ್ತೆ ನಿವಾಸಿ ಎಡ್ವರ್ಡ್ ಕಾರ್ಡಿನ್(63) ಎಂಬವರು ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಚರ್ಚ್ ರಸ್ತೆಯ ಮಲ್ಯರಬೆಟ್ಟು ಸ್ಮಶಾನ ಬಳಿ ಮೀನು ಸಾಗಾಟದ ಇನ್ಸುಲೇಟರ್ ಲಾರಿಯೊಂದು ಗುದ್ದಿ ಸಾವಪ್ಪಿದ್ದಾರೆ. ಸಂಜೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳ ಸಹಿತ ಓರ್ವ ಹೆಣ್ಣು ಮಗಳನ್ನು ಕಾರ್ಡಿನ್ ಅಗಲಿದ್ದಾರೆ. ಬಂದರು ರಸ್ತೆಯಲ್ಲಿ ಇಸ್ತ್ರಿ ಅಂಗಡಿ ಹೊಂದಿದ್ದ ಕಾರ್ಡಿನ್ ಗಂಗೊಳ್ಳಿ ಇಗರ್ಜಿಯ ಚಟುವಟಿಕೆಗಳಲ್ಲಿ ತನ್ನ ಇಳಿ ವಯಸ್ಸಲ್ಲೂ ಸಕ್ರಿಯರಾಗಿದ್ದರು. ಎರಡು ಬಾರಿ ಗಂಗೊಳ್ಳಿ ಚರ್ಚ್ ಪ್ಯಾರಿಶ್ ಕೌನ್ಸಿಲ್ ಸದಸ್ಯರಾಗಿ ಸೇವೆಸಲ್ಲಿಸಿದ್ದು, ಜನಪ್ರಿಯರಾಗಿದ್ದರು. ದಾಖಲೆ ಎಂಬಂತೆ ಸತತವಾಗಿ ಆರು ಬಾರಿ ಗ್ರಾ.ಪಂ. ಸದಸ್ಯನಾಗಿ ಆಯ್ಕೆ ಯಾಗುತ್ತಿದ್ದ ಇವರು ಪರಿಸರದಲ್ಲಿ ಎಲ್ಲರಿಗೂ ಬೇಕಾದವರಾಗಿದ್ದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದ್ದು, ವಿದೇಶದಲ್ಲಿರುವ ಮಕ್ಕಳು ಆಗಮಿಸಿದ ನಂತರ ಅಂತ್ಯ ಕ್ರಿಯೆ ಜರಗಲಿದೆ.. ಲಾರಿ ಚಾಲಕ ಸತೀಶ್ ವಿರುದ್ಧ ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Exit mobile version