Kundapra.com ಕುಂದಾಪ್ರ ಡಾಟ್ ಕಾಂ

ಜ.9: ಕುಂದಾಪುರದಲ್ಲಿ ‘ಇಂದ್ರನಾಗ’ ವಿನೂತನ ಯಕ್ಷಗಾನ ಪ್ರಸಂಗ ಪ್ರದರ್ಶನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಬೆಂಗಳೂರಿನ ಮಣೂರು ಮಯ್ಯ ಯಕ್ಷ ಕಲಾ ಪ್ರತಿಷ್ಠಾನದ ಸಂಯೋಜನೆಯಲ್ಲಿ ‘ಇಂದ್ರನಾಗ’ ಎನ್ನುವ ವಿನೂತನ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.

ಯಕ್ಷಗಾನದೊಳಗೆ ಸಾಮಾಜಿಕ ಪ್ರಸಂಗಗಳು ಬಂದು ಮೂಲ ಸೊಗಡಿಗೆ ಧಕ್ಕೆ ತರುತ್ತಿದೆ ಎನ್ನುವ ವಾದ ಬಲವಾಗುತ್ತಿರುವ ಈ ಹೊತ್ತಿನಲ್ಲಿ ಹೊಸ ಪ್ರಸಂಗದ ಮೂಲಕವೇ ಪಾರಂಪರಿಕ ಸೊಗಸುಗಾರಿಕೆಯನ್ನು ಅದರೆಲ್ಲಾ ವೈಭವದೊಂದಿಗೆ ಕಟ್ಟಿಕೊಡುವ ವಿನೂತನ ಪ್ರಯತ್ನದ ಇಂದ್ರನಾಗ ಪ್ರಸಂಗದ ಮೂಲಕ ಡಿಸೆಂಬರ್ 9ರ ಶನಿವಾರ ರಾತ್ರಿ 9:30ಕ್ಕೆ ಆರಂಭಗೊಳ್ಳಲಿದೆ.

ವೈ. ಕರುಣಾಕರ ಶೆಟ್ಟಿ ಸಾರಥ್ಯದ ವೃತ್ತಿಪರ ಯಕ್ಷಗಾನ ತಂಡ ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶನ ಜರುಗಲಿದ್ದು ಬೆಂಗಳೂರಿನ ಮಣೂರು ಮಯ್ಯ ಯಕ್ಷ ಕಲಾ ಪ್ರತಿಷ್ಠಾನದ ಯಕ್ಷಗಾನ ಸಂಘಟಕ ಮಣೂರು ವಾಸುದೇವ ಮಯ್ಯ ಸಾರಥ್ಯದಲ್ಲಿ ಪ್ರತಿಷ್ಠಾನದ ಸದಸ್ಯರುಗಳೇ ಇಂದ್ರನಾಗ ಪ್ರಸಂಗದ ಕಥೆ ರಚಿಸಿದ್ದಾರೆ. ಹಿಮಾಚಲ ಪ್ರದೇಶದ ಧರ್ಮಶಾಲೆಯಲ್ಲಿರುವ ದೇವಾಲಯವೊಂದರ ಸ್ಥಳೀಯ ಪುರಾಣವನ್ನು ಈ ಕಥೆಗೆ ಪ್ರೇರಣೆಯಾಗಿ ಪಡೆದು ಅದನ್ನು ಯಕ್ಷಗಾನೀಯ ಚೌಕಟ್ಟಿಗೆ ಅಳವಡಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಬಡಗುತಿಟ್ಟಿನ ಯುವದಶಾವತಾರಿ ಎಂದೇ ಪ್ರಸಿದ್ಧಗೊಂಡಿರುವ ಪ್ರಸಾದಕುಮಾರ ಮೊಗೆಬೆಟ್ಟು ಈ ಪ್ರಸಂಗದ ಪದ್ಯಗಳನ್ನು ಬರೆದಿದ್ದಾರೆ. ಶೃಂಗೇರಿಯ ರಮೇಶ್ ಬೇಗಾರ್ ರಂಗಸಂಯೋಜನೆಯಲ್ಲಿ ಇಂದ್ರನಾಗ ಪ್ರಸಂಗ ಮೂಡಿಬರಲಿದೆ. ಯಕ್ಷರಂಗದ ಪ್ರಸಿದ್ಧ ಯುವ ಭಾಗವತರಾದ ಜನ್ಸಾಲೆ ರಾಘು ಆಚಾರ್ ಹಾಗೂ ಬ್ರಹ್ಮೂರು ಶಂಕರಭಟ್ ಗಾನಸುಧೆಗೆ ಸುನೀಲ್‌ಭಂಡಾರಿ ಮತ್ತು ರಾಕೇಶ್ ಮಲ್ಯ ಚಂಡೆ ಮದ್ದಲೆ ಸಾಥ್ ನೀಡಲಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ತೀರ್ಥಹಳ್ಳಿ ಗೋಪಾಲ ಆಚಾರ್, ನೀಲ್ಕೋಡು ಶಂಕರ ಹೆಗಡೆ, ಥಂಡೀಮನೆ ಶ್ರೀಪಾದಭಟ್, ರವೀಂದ್ರ ದೇವಾಡಿಗ, ಕ್ಯಾದಗಿ ಮಹಾಬಲೇಶ್ವರ ಭಟ್, ಸೀತಾರಾಮಕುಮಾರ ಕಟೀಲು, ಉದಯಕಡಬಾಳ, ಕಿರಾಡಿ ಪ್ರಕಾಶ ಮೊಗವೀರ, ತೊಂಬಟ್ಟು ವಿಶ್ವನಾಥ ಆಚಾರ್ ಮುಂತಾದ ಪ್ರಸಿದ್ಧ ಕಲಾವಿದರು ಇಂದ್ರನಾಗ ಪ್ರಸಂಗದ ಹಲವು ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಲಿದ್ದಾರೆ.

ಅಪರೂಪದ ಯಕ್ಷಗಾನ ಎಲಿಮೆಂಟ್ಸ್‌ಗಳು.
ಪ್ರದರ್ಶನದ ಮುಖ್ಯ ಆಕರ್ಷಣೆ ಇಂದಿನ ಕಾಲಘಟ್ಟದಲ್ಲಿ ತೆರೆಮರೆಗೆ ಸರಿದಿರುವ ಹಲವು ಸಾಂಪ್ರದಾಯಿಕ ತೆರೆಕುಣಿತ ಹಾಗೂ ಒಡ್ಡೋಲಗ ಪ್ರಾಕಾರಗಳನ್ನು ಅಳವಡಿಸಲಾಗಿದೆ. ಹವ್ಯಾಸಿ ವಲಯದ ಪ್ರಸಿದ್ಧ ಯಕ್ಷಗಾನ ಗುರು ಕೃಷ್ಣಮೂರ್ತಿ ತುಂಗ ಮತ್ತು ತಂಡದವರು ಕಾಡುಜನಾಂಗದವರ ಕೋರೆಮುಂಡಾಸಿನ ಕಿರಾತಪಡೆಯ ತೆರೆಒಡ್ಡೋಲಗವನ್ನು ಐದು ಜನ ಕಲಾವಿದರೊಂದಿಗೆ ನಿರ್ವಹಿಸಲಿದ್ದಾರೆ. ಇದೇ ತಂಡದವರು ಸಂಶಪ್ತಕರ ಮಾದರಿಯಲ್ಲಿ ಏಳು ಜನ ಬಣ್ಣದ ವೇಷದಾರಿಗಳ ರಕ್ಕಸ ಪಾತ್ರದ ತೆರೆಕುಣಿತವನ್ನು ರಂಗಕ್ಕೆ ತರಲಿದ್ದಾರೆ. ಏಕಕಾಲಕ್ಕೆ ಏಳು ಪಾತ್ರಗಳು ಏಕರೂಪತೆಯ ತೆರೆ ಕುಣಿತವನ್ನು ನಿರ್ವಹಿಸುವುದು ಒಂದು ಅಪರೂಪದ ಐತಿಹಾಸಿಕ ಸಂಗತಿಯಾಗಿದೆ. ಈ ತೆರೆ ಕುಣಿತವು ರಕ್ಕಸರ ಮುಂಜಾನೆಯ ದಿನಚರಿಯ ಹಲವು ವಿನ್ಯಾಸಗಳನ್ನು ಒಳಗೊಂಡಿರುತ್ತದೆ. ಈಶ್ವರನ ತಾಂಡವನೃತ್ಯ ಪ್ರಸ್ತುತಿ, ರಾಮಾಯಣದಲ್ಲಿ ಬರುವ ಗುಹನ ತೆರೆಒಡ್ಡೋಲಗ ಮುಂತಾದ ಹಲವು ಅಪರೂಪದ ಪಾರಂಪರಿಕ ಸೊಗಡಿನ ಮರುಸೃಷ್ಟಿಗೆ ಅಂದಿನ ಇಂದ್ರನಾಗದ ಪ್ರದರ್ಶನ ಸಾಕ್ಷಿಯಾಗಲಿದೆ. ರಂಗದ ಪಕ್ಕದಲ್ಲಿಯೇ ಅಟ್ಟಳಿಕೆ ರಂಗಸ್ಥಳ(ಉಪ್ಪರಿಗೆ) ಒಂದನ್ನು ನಿರ್ಮಿಸಿ ಇಲ್ಲಿ ಆಧುನಿಕ ತಂತ್ರಜ್ಞಾನದ ವಿಶೇಷ ಸೆಟ್ಟಿಂಗ್‌ಗಳನ್ನು ಖ್ಯಾತ ಕಲಾನಿರ್ದೇಶಕ ಗಂಗಾಧರ ಕಿರೋಡಿಯನ್ (ಪೊರ್ಲು ಆರ್ಟ್ಸ್) ಇವರ ಪರಿಕಲ್ಪನೆಯಲ್ಲಿ ಪಡಿಮೂಡಿಸಲಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

Exit mobile version