Kundapra.com ಕುಂದಾಪ್ರ ಡಾಟ್ ಕಾಂ

ಪುರಸಭೆ ಸಾಮಾನ್ಯ ಸಭೆ ಗೊಂದಲದ ಗೂಡು: ಅಭಿವೃದ್ಧಿಗೆ ಅನುದಾನವಿಲ್ಲ. ಸರಕಾರಕ್ಕೆ ಬೇಡಿಕೆ ಇಟ್ಟಿಲ್ಲ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುರಸಭೆಯ ಎಸ್ಸಿಎಸ್ಟಿಗಳಿಗಾಗಿ ಮಾಡಲಾಗಿದ್ದ ಜೀವವಿಮಾ ನಿಧಿಯ ಪ್ರೀಮಿಯಂ ಕಟ್ಟಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕೌನ್ಸಿಲರ್ ಗೆ ಅನುದಾನ ಸಾಲುತ್ತಿಲ್ಲ. ಸಂಗಮ ಸೇತುವೆಯ ಬಳಿಯ ಮರಳುಗಾರಿಕೆ, ಸಾರ್ವಜನಿಕರ ವಿರೋಧದ ನಡುವೆ ಸರಕಾರಿ ಆಸ್ಪತ್ರೆ ಎದುರಿನ ಸರಕಾರಿ ಕಟ್ಟದ ನಿಲ್ಲಲಿಲ್ಲ. ಒಳಚರಂಡಿ ವ್ಯವಸ್ಥೆಗೆ ಕೋಟಿ ಅನುದಾನ ಪಡೆಯಲು ಸಚಿವರನ್ನು ಕಾಣದೇ ವಿಧಿಯಿಲ್ಲ. ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಕೊನೆಗೂ ನಡೆಯಲಿಲ್ಲ. ಬಿಜೆಪಿ ಸದಸ್ಯರ ಸಭಾತ್ಯಾಗವೂ ಸಾಧ್ಯವಾಗಲಿಲ್ಲ!

[quote font_size=”15″ bgcolor=”#ffffff” bcolor=”#dd9933″ arrow=”yes” align=”right”] ಬಿಜೆಪಿ ಸಭಾ ತ್ಯಾಗ:
ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಪ್ರಸ್ತಾಪವಿಟ್ಟಾಗ ಸಾಮನ್ಯ ಸಭೆಯಲ್ಲಿ ಬಿಜೆಪಿ 6 ಜನ ಸದಸ್ಯರು ಹಾಜರಿದ್ದರೇ ಕಾಂಗ್ರೆಸ್ ನ 7 ಮಂದಿ ಹಾಜರಿದ್ದರು. ಕಾಂಗ್ರೆಸಿಗರು ಸ್ಥಾಯಿ ಸಮಿತಿ ಸದಸ್ಯರ ಬಹುಮತಕ್ಕಾಗಿ ಮಾಡಿದ ಪ್ರಯತ್ನ ಬಿಜೆಪಿ ಸಭಾ ತ್ಯಾಗದಿಂದ ಮಣ್ಣಾಯಿತು.ಈ ಹಿಂದೆ ಸ್ಥಾಯಿ ಸಮಿತಿಯಲ್ಲಿ ಬಿಜೆಪಿ 6 ಜನ ಮತ್ತು ಕಾಂಗ್ರೆಸಿನ 5 ಜನ ಸೇರಿ ಒಟ್ಟು 11 ಜನ ಸದಸ್ಯರಿದ್ದರು. ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ 6 ಜನ ಸದಸ್ಯರ ಹೆಸರು ಸೂಚಿಸಲಾಗಿತ್ತು. ಕಾಂಗ್ರೆಸಿಗರು 7 ಸ್ಥಾನ ಬೇಕೆಂದು ಪಟ್ಟು ಹಿಡಿದರು. ಹಿಂದಿನ ಬಾರಿಯಂತೆ ಈ ಬಾರಿಯೂ ಸ್ಥಾಯಿ ಸಮಿತಿ ಆಯ್ಕೆ ಆಗಬೇಕು. ಹೊಸದಾಗಿ ನಿರ್ಣಯ, ಮಂಡಿಸದೆ ಸ್ಥಾಯಿ ಸಮಿತಿ ಸದಸ್ಯರ ಸಂಖ್ಯೆ 13ಕ್ಕೇ ಏರಿಸಲು ಅವಕಾಶವಿಲ್ಲ. ಪುರಸಭೆಯಲ್ಲಿ ಬಹುಮತ ಬಿಜೆಪಿ ಪರವಾಗಿದ್ದು, ಕಾಂಗ್ರೆಸಿಗೆ ಸ್ಥಾಯಿ ಸಮಿತಿಯಲ್ಲಿ ಏಕೆ ಬಹುಮತ ನೀಡಬೇಕು ಎನ್ನೋದು ಬಿಜೆಪಿ ಪ್ರಶ್ನೆ. ಸ್ಥಾಯಿ ಸಮಿತಿ ಸ್ಥಾನಗಳ ವಾದ, ವಿವಾದದ ನಂತರ ಬಿಜೆಪಿ ಕಾಂಗ್ರೆಸ್ ವಾದ ಆಕ್ಷೇಪಿಸಿ ಸಭಾತ್ಯಾಗ ಮಾಡಿದರೆ, ಸ್ಥಾಯಿ ಸಮಿತಿಗೆ ಕಾಂಗ್ರೆಸ್ ಸೂಚಿಸಿದ ಓರ್ವ ಸದಸ್ಯೆ ಸ್ಥಾನ ನಿರಾಕರಿಸಿದರು.[/quote]

ಇದು ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಹೈಲೆಟ್ಸ್. ಕುಂದಾಪುರ ಪುರಸಭೆ ಒಳಚಂರಂಡಿ ವ್ಯವಸ್ಥೆಗೆ 17-19 ಕೋಟಿ ಭರಿಸಲು ಪುರಸಭೆಗೆ ಸಾಧ್ಯವಿಲ್ಲ. ಎಲ್ಲಾ ಸದಸ್ಯರು ಈ ಸಂಗತಿಯನ್ನು ಗಂಭೀರವಾಗ ಪರಿಗಣಿಸಬೇಕು. ರಾಜ್ಯದಲ್ಲಿ ಯುಜಿಡಿ ಯೋಜನೆಗೆ ಮೂರು ಪುರಸಭೆಗೆ ದೊರೆತಿದ್ದು, ಅದರಲ್ಲಿ ಕುಂದಾಪುರ ಕೂಡಾ ಒಂದು. ಹಣ ಕಟ್ಟಲಾಗದೆ ಈ ಯೋಜನೆ ಹಿಂದಕ್ಕೆ ಹೋದರೆ ನಷ್ಟವಾಗುತ್ತದೆ. ಪುರಸಭೆ ಎಲ್ಲಾ ಸದಸ್ಯರ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಸರಕಾರ ಯುಜಿಡಿ ಯೋಜನೆ ಹಣ ನೀಡುವಂತೆ ಮಾಡಬೇಕು ಎಂದು ಮೋಹನ್‌ದಾಸ್ ಶೆಣೈ ಒತ್ತಾಯಿಸಿದರು. ಈ ಬಗ್ಗೆ ಈಗಲೇ ಯೋಚಿಸದಿದ್ದರೇ ಮುಂದೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಗುಣರತ್ನ ಮತ್ತು ರವಿರಾಜ್ ಖಾರ್ವಿ ಶಾಸಕರ ಜೊತೆ ಪುರಸಭೆ ಸದಸ್ಯರು ನಗರಾಭಿವೃದ್ಧಿ ಸಚಿವ ಸಹಿತ ಮುಖ್ಯಮಂತ್ರಿ ಭೇಟಿ ಮಾಡಿ ಹಣ ಸರಕಾರ ಬಿಡುಗಡೆ ಮಾಡುವಂತೆ ಒತ್ತಡ ಹಾಕಬೇಕು ಎಂದು ಸಲಹೆ ಮಾಡಿದರು.

ಎಸ್ಸಿಎಸ್ಟಿ ಅನಾರೋಗ್ಯ ಪರಿಹಾರ ಜೀವವಿಮಾ ನಿಧಿಗಾಗಿ ಬಜೆಟಿನಲ್ಲಿ ಹಣ ಕಾದಿರಿಸಿದ್ದರೂ ಅದನ್ನು ಲ್ಯಾಪ್ಸ್ ಮಾಡುವ ಮೂಲಕ ಬಡಜನರ ಆರೋಗ್ಯ ಕಸಿದುಕೊಳ್ಳಲಾಗಿದೆ. ಕಳೆದ 2015ರ ಡಿ.5 ರಂದು ವಿಮಾ ಅವಧಿ ಮುಗಿದ್ದರೂ, ವಿಮಾ ಹಣ ಏಕೆ ಪಾವತಿಸದೇ ಎಸ್ಸಿಎಸ್ಟಿ ಜನರಿಗೆ ಅನ್ಯಾಯ ಮಾಡಲಾಗಿದೆ ಎಂದು ಎಂದು ಬಿಜೆಪಿ ಸದಸ್ಯ ಮೋಹನ್‌ದಾಸ್ ಶೆಣೈ ಆರೋಪಿಸಿದರು. ಇದಕ್ಕೆ ಪುರಸಭಾಧ್ಯಕ್ಷೆ ಕಲಾವತಿ ಪ್ರತಿಕ್ರಿಯಿಸಿ ತೊಂದರೆಗೊಳಗಾದವರಿಗೆ ಪರಿಹಾರ ನೀಡದೇ ಇದ್ದುದರಿಂದ ಅವರಿಗೆ ಆ ಬಗ್ಗೆ ಸ್ಪಷ್ಟನೆ ಕೇಳಿದ್ದೇವೆ. ಒಂದು ವರ್ಷದಲ್ಲಿ ಎಷ್ಟು ಜನರಿಗೆ ಸೌಲಭ್ಯ ನೀಡಲಾಗಿದೆ ಎಂಬ ಮಾಹಿತಿಯನ್ನೂ ಕೇಳಲಾಗಿದೆ. ಇದು ಸ್ಪಷ್ಟವಾಗಿ ದೊರೆತ ಬಳಿಕ ಅವರಿಗೆ ಪ್ರೀಮಿಯಂ ಕಟ್ಟಬೇಕೋ ಅಥವಾ ಹೊರತಾಗಿ ಬೇರೊಬ್ಬರ ಬಳಿ ಪಾಲಿಸಿ ಮಾಡಬೇಕೊ ಎಂಬುದರ ಬಗ್ಗೆ ಚಿಂತಿಸಲಾಗಿದೆ ಎಂದರು.

ಪುರಸಭೆ ಸದಸ್ಯರ ಕ್ಷೇತ್ರದ ಅಭಿವೃದ್ಧಿ ಕಾರ‍್ಯಗಳಿಗೆ ಅನುದಾನದ ಕೊರತೆ ಕಾಡುತ್ತಿದೆ. ಪುರಸಭೆ ಆಡಳಿತ ಪಕ್ಷದವರು ಅವರದೇ ಸರಕಾರ ಇರುವಾಗ ಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿಲ್ಲ. ಪುರಸಭೆಯಲ್ಲಿ ಹಿಂದಿನ ಆಡಳಿತದಲ್ಲಿ ಉಸ್ತುವಾರಿ ಮಂತ್ರಿಗಳ ಮೂಲಕ ನಗರಾಭಿವೃದ್ಧಿ ಸಚಿವರಿಗೆ ಬೇಡಿಕೆ ಇಟ್ಟಿದ್ದೇವು. ಈಗ ಉಡುಪಿ ಉಸ್ತವಾರಿ ಸಚಿವರು ನಗರಾಭಿವೃದ್ಧಿ ಸಚಿವರೂ ಆಗಿರುವಾಗ ಅನುದಾನಕ್ಕೆ ಬೇಡಿಕೆ ಏಕೆ ಇಟ್ಟಿಲ್ಲ ಎಂಬ ವಿರೋಧ ಪಕ್ಷದ ಪ್ರಶ್ನೆ ಸಭೆಯಲ್ಲಿ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಯಿತು. ಮಧ್ಯಪ್ರವೇಶಿಸಿದ ಮುಖ್ಯಾಧಿಕಾರಿ 2010 ರಿಂದ ಇಲ್ಲಿಯವರೆಗೆ ಒಟ್ಟು ಎರಡು ಕಂತಿನಲ್ಲಿ 10 ಕೋಟಿ ರೂ ಬಿಡುಗಡೆ ಆಗಿದೆ ಎಂದು ಹೇಳಿದರು. ಮುಂದೆ ಹಣ ಬಿಡುಗಡೆ ಮಾಡುವ ಭರವಸೆ ಉಸ್ತುವಾರಿ ಸಚಿವರು ನೀಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಪ್ರತಾಪಚಂದ್ರ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಇತ್ತೀಚಿಗೆ ಅಗಲಿದ ಬಿಜೆಪಿ ಹಿರಿಯ ಮುಖಂಡ ಪುಂಡಲೀಕ ನಾಯಕ್ ಅವರಿಗೆ ಗೌರವ ಸಲ್ಲಿಸಲಾಯಿತು. ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಯು.ಎಸ್. ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

Exit mobile version