Kundapra.com ಕುಂದಾಪ್ರ ಡಾಟ್ ಕಾಂ

ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಸಭಾಭವನ ನಿರ್ಮಾಣಕ್ಕೆ ಚೆಕ್ ಹಸ್ತಾಂತರ

ಬೈಂದೂರು: ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು, ಅವುಗಳಿಗೆ ಹಂತ ಹಂತವಾಗಿ ಜಾರಿಗೆ ತರಲಗುತ್ತಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.

ಖಂಬದಕೋಣೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಸಭಾಭವನಕ್ಕೆ ಸರಕಾರದಿಂದ ಘೋಷಣೆಯಾಗಿರುವ ರೂ. ಒಂದು ಕೋಟಿ ಮೊತ್ತದಲ್ಲಿ ಎರಡನೇ ಕಂತಿನ ರೂ. 50 ಲಕ್ಷದ ಚೆಕ್ ಹಸ್ತಾಂತರಿಸಿ ಮಾತನಾಡಿದರು. ಮೊದಲ ಕಂತು ರೂ. 25 ಲಕ್ಷ ಈಗಾಗಲೆ ನೀಡಿದ್ದು, ಕೊನೆಯ ಹಂತದ ರೂ. 25 ಲಕ್ಷಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು. ಸಂಘದ ಅಧ್ಯಕ್ಷರು ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಇನ್ನೂ ಹೆಚ್ಚಿನ ಅನುದಾನದ ಬೇಡಿಕೆಯಿಟ್ಟಿದ್ದು, ಮುಖ್ಯಮಂತ್ರಿಯೋದಿಗೆ ಸಮಾಲೋಚಿಸಿ ಈ ಕುರಿತು ನಿರ್ಧರಿಸಲಾಗುವುದು ಎಂದರು.

ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘದ ಅಧ್ಯಕ್ಷ ನವೀನಚಂದ್ರ ಉಪ್ಪುಂದ ಅಧ್ಯಕ್ಷತೆವಹಿಸಿದ್ದರು. ಈ ಭಾಗದಲ್ಲಿ ಉಪ್ಪುನೀರಿನ ಸಮಸ್ಯೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದ್ದು, ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ, ತಡೆಗೋಡೆ ನಿರ್ಮಿಸಬೇಕು ಮತ್ತು ಈ ಭವನಕ್ಕೆ ರೂ. ೬ ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಹಣದ ಕೊರತೆಯಿರುವುದರಿಂದ ಸರಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಹರೀಶ್ ಗಾಂವಕರ್, ತಾಪಂ ಸದಸ್ಯರಾದ ಪ್ರಸನ್ನ ಕುಮಾರ್, ಗೌರಿ ದೇವಾಡಿಗ ಬಿಜೂರು, ಖಂಬದಕೋಣೆ ಗ್ರಾಪಂ ಅಧ್ಯಕ್ಷ ರಾಜೇಶ್ ದೇವಾಡಿಗ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಆನಂದ ಖಾರ್ವಿ ಸ್ವಾಗತಿಸಿ, ಮುತ್ತಯ್ಯ ಖಾರ್ವಿ ವಂದಿಸಿದರು.

Exit mobile version