Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಟೌನ್ ಸೌಹಾರ್ದ: ಆರ್ಥಿಕ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕಿದೆ

ಆರ್ಥಿಕ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕಿದೆ: ಯು.ವರಮಹಾಲಕ್ಷ್ಮೀ ಹೊಳ್ಳ

ಗಂಗೊಳ್ಳಿ: ಆರ್ಥಿಕ ಸಂಸ್ಥೆಗಳು ಕೇವಲ ಆರ್ಥಿಕ ಚಟುವಟಕೆಗಳಿಗೆ ಸೀಮಿತವಾಗಿರದೆ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿರಬೇಕು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಕಳೆದ ಹಲವು ವರ್ಷಗಳಿಂದ ಆರ್ಥಿಕ ವ್ಯವಹಾರಗಳ ಜೊತೆಗೆ ವೈದ್ಯಕೀಯ ಶಿಬಿರ, ಸ್ಥಳೀಯಾಡಳಿತಕ್ಕೆ ಕೊಡುಗೆ, ಶಾಲಾ ಕಟ್ಟಡ ನಿರ್ಮಾಣಕ್ಕೆ ಸಹಾಯ ನೀಡುವಂತಹ ಅನೇಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬಂದಿರುವುದು ಶ್ಲಾಘನೀಯ. ಈ ಭಾಗದ ಜನರ ಅವಶ್ಯಕತೆಗೆ ಸ್ಪಂದಿಸುವ ಸಹಕಾರಿಯ ಉದ್ದೇಶ ಧೋರಣೆಯ ಪ್ರತೀಕವಾಗಿ ಸಹಕಾರಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಉಪ್ಪುಂದ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಯು.ವರಮಹಾಲಕ್ಷ್ಮೀ ಹೊಳ್ಳ ಹೇಳಿದರು.

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಜರಗಿದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಸಂಸ್ಥಾಪಕರ ಸ್ಮರಣೀಯ ದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆರ್ಥಿಕ ಸಂಸ್ಥೆಗಳು ಹುಟ್ಟು ಹಾಕಿ ಅದರ ಬೆಳವಣಿಗೆಗೆ ಕಾರಣೀಭೂತರಾದವರಿಗೆ ಕೃತಜ್ಞತೆ ಸಲ್ಲಿಸುವುದು ದೊಡ್ಡ ಮೌಲ್ಯವಾಗಿದೆ. ನಮ್ಮ ಹಿಂದಿನವರ ನಿಷ್ಠೆ, ಪ್ರಾಮಾಣಿಕತೆಗೆ ಫಲ ಇಂದು ದೊರೆಯುತ್ತಿದೆ. ಸಹಕಾರಿಯ ಈ ಸಾಧನೆ ನಿರಂತರವಾಗಿ ಮುನ್ನಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಹಕಾರಿಯ ಅಧ್ಯಕ್ಷ ಎಚ್.ಗಣೇಶ ಕಾಮತ್ ಮಾತನಾಡಿ, ಜನರ ಪ್ರೀತಿ ವಿಶ್ವಾಸದಿಂದ ಸಂಸ್ಥೆ ಅಭಿವೃದ್ಧಿ ಹೊಂದುತ್ತಿದೆ. ಸಹಕಾರಿಯ ಸಿಬ್ಬಂದಿಗಳ ನಿಷ್ಠೆ ಪ್ರಾಮಾಣಿಕತೆಯಿಂದ ಸಹಕಾರಿ ಹೆಚ್ಚು ಅಭಿವೃದ್ಧಿ ಸಾಧಿಸುತ್ತಿದೆ. ೨೮ ಕೋಟಿ ಠೇವಣಿಯನ್ನು ಹೊಂದಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಕೋಟೇಶ್ವರ ಮತ್ತು ಉಪ್ಪುಂದದಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಆ ಭಾಗದ ಜನರಿಗೆ ವಿಶಿಷ್ಟ ಸೇವೆಯನ್ನು ನೀಡುತ್ತಿದೆ ಎಂದರು. ಇದೇ ಸಂದರ್ಭ ಗಂಗೊಳ್ಳಿಯ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶಾರದಾ ರಾಮಕೃಷ್ಣ ಬಿ. ಮತ್ತು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕಿ ಮಮತಾ ವಿ. ಮಯ್ಯ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು. ಪಿಗ್ಮಿ ಸಂಗ್ರಾಹಕರನ್ನು ಮತ್ತು ಸಲಹೆಗಾರರನ್ನು ಗೌರವಿಸಲಾಯಿತು. ಸಹಕಾರಿಯ ಉಪಾಧ್ಯಕ್ಷ ಜಿ.ವೇದವ್ಯಾಸ ಕೆ. ಆಚಾರ್ಯ, ನಿರ್ದೇಶಕರಾದ ಉದಯಶಂಕರ ರಾವ್, ಜಿ.ವಿಶ್ವನಾಥ ಆಚಾರ್ಯ, ಬಿ.ಪ್ರಕಾಶ ಶೆಣೈ ಉಪಸ್ಥಿತರಿದ್ದರು.

ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಕಾರಿಯ ಸಿಬ್ಬಂದಿ ರಕ್ಷಾ ಶೆಣೈ ಅತಿಥಿಗಳನ್ನು ಹಾಗೂ ಸನ್ಮಾನಿತರನ್ನು ಪರಿಚಯಿಸಿದರು. ಅಶ್ವಿನಿ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು. ಸಹಕಾರಿಯ ಅಧಿಕಾರಿ ಸುಮನಾ ಶೆಣೈ ವಂದಿಸಿದರು.

Exit mobile version