Kundapra.com ಕುಂದಾಪ್ರ ಡಾಟ್ ಕಾಂ

ಕೋಡಿ: ಪರಿಸರ ಸ್ನೇಹಿ ಬದ್ರಿಯಾ ಜುಮಾ ಮಸೀದಿ ಉದ್ಘಾಟನೆ

ಕುಂದಾಪುರ: ಕೊಡಿಯ ಕಡಲ ಕಿನಾರೆಯಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಪ್ರಥಮ ಪರಿಸರ ಸ್ನೇಹಿ, ಶೂನ್ಯ ವಿದ್ಯುತ್ ಹಸಿರು ಮಸೀದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬದ್ರಿಯಾ ಜುಮಾ ಮಸೀದಿಯನ್ನು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಅಧ್ಯಕ್ಷರಾದ ಹಝರತ್ ಮೌಲಾನಾ ಸೈಯ್ಯದ್ ಮುಹಮ್ಮದ್ ರಬೇ ಹಸನಿ ನದ್ವಿ ಶುಕ್ರವಾರ ಉದ್ಘಾಟಿಸಿ, ದುವಾ ನೆರವೇರಿಸಿದರು.

ಬೆಂಗಳೂರು ಸಬೀಲುರ್ ರಶಾದ್‌ನ ಪ್ರಾಂಶುಪಾಲರಾದ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬೊಕಾವಿ ಮಾತನಾಡಿ ಮಸೀದಿ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸುವ ಕೇಂದ್ರ ಆಗಬೇಕು. ಮಸೀದಿ ನಿರ್ಜನವಾಗಿರದೆ ಸದಾ ಸಕ್ರೀಯವಾಗಿರುವಂತೆ ಮಾಡಬೇಕು ಎಂದರು. ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್, ಮಸೀದಿ ಖತೀಬ್ ಇಸ್ಮಾಯಿಲ್ ಝುಹರಿ ಶುಭಾ ಹಾರೈಸಿದರು.

ಈ ಸಂದರ್ಭದಲ್ಲಿ ಮಸೀದಿ ಕಟ್ಟಡದ ಆರ್ಕಿಟೆಕ್ಚರ್ ಸಂದೀಪ್ ಸಹಿತ ಮಸೀದಿ ನಿರ್ಮಾಣ ಕಾರ್ಯದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಸನ್ಮಾನಿಸಲಾಯಿತು.  ಉಡುಪಿ ಜಿಲ್ಲೆಯ ಕಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್, ಮಾಜಿ ಖತೀಬ್ ಇಸ್ಮಾಯಿಲ್ ಮುಸ್ಲಿಯಾರ್ ಬ್ಯಾರೀಸ್ ಗ್ರೂಪ್‌ನ ಅಧ್ಯಕ್ಷ ಹಾಜಿ ಮಾಸ್ಟರ್ ಮೊಹಮ್ಮದ್, ಬ್ಯಾರೀಸ್ ಗ್ರೂಫ್ ಚೇರ್‌ಮನ್ ಸೈಯದ್ ಮಹಮ್ಮದ್ ಬ್ಯಾರಿ ಉಪಸ್ಥಿತರಿದ್ದರು.

ಪವನ ಮತ್ತು ಸೌರ ಶಕ್ತಿಯನ್ನು ಉಪಯೋಗಿಸಿಕೊಂಡು ಕಟ್ಟಡಕ್ಕೆ ಅಗತ್ಯವಿರುವ ವಿದ್ಯುತ್‌ನ್ನು ಪೂರೈಸಿಕೊಳ್ಳುವುದು ಈ ಹಸಿರು ಸ್ನೇಹಿ ಮಸೀದಿಯ ಒಂದು ವಿಶೇಷತೆ. ಪವನ ಮತ್ತು ಸೌರ ಶಕ್ತಿಯನ್ನು ಉಪಯೋಗಿಸಿಕೊಂಡು ಕಟ್ಟಡಕ್ಕೆ ಅಗತ್ಯವಿರುವ ವಿದ್ಯುತ್‌ನ್ನು ಪೂರೈಸಿಕೊಳ್ಳುವುದು ಈ ಹಸಿರು ಸ್ನೇಹಿ ಮಸೀದಿಯ ಒಂದು ವಿಶೇಷತೆ. ಇದರೊಂದಿಗೆ ಪ್ರಕೃತಿಯ ಅಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಟ್ಟಡ ಸದಾ ತಂಪಾಗಿರುವಂತೆ ಮಾಡಲಾಗಿದೆ. ಮಸೀದಿಯೊಳಗೆ ತಾಪಮಾನ ಏರಿಕೆ ಕನಿಷ್ಡ ಮಟ್ಟದಲ್ಲಿರುವಂತೆ ಸುತ್ತಮುತ್ತಲೂ ಹಸಿರು ಮರಗಿಡಗಳು, ನೀರಿನ ಟ್ಯಾಂಕ್‌ಗಳಿವೆ. ಎಲ್ ಆಕಾರದ ಕಟ್ಟಡದ ಯೋಜನೆ ಮತ್ತು ಎತ್ತರಿಸಿದ ಮಸೀದಿಯು ಸಭಾಂಗಣಗಳನ್ನು ನೈಸರ್ಗಿಕವಾಗಿ ತಂಪಾಗಿರುವಂತೆ ನಿರ್ಮಿಸಲಾಗಿದೆ. ಸೌರತಾಪ ತಾಕದಂತೆ ನೋಡಿಕೊಳ್ಳುವ ಬಿಳಿ ಚೀನಾ ಟೈಲ್ಸ್‌ಗಳನ್ನು ಹಾಕಿ ವಿಶೇಷ ಟರ್ಬೊ ದ್ವಾರಗಳನ್ನು ಅಳವಡಿರುವ ತಾರಸಿ ಇಡೀ ಮಸೀದಿಯನ್ನು ತಂಪಾಗಿಡುವುದು ಮಾತ್ರವಲ್ಲದೇ ಅಕ್ಕಪಕ್ಕದಲ್ಲೂ ಬಿಸಿಲಿನ ತಾಪವನ್ನು ಕಡಿಮೆಗೊಳಿಸುತ್ತದೆ. ಮಸೀದಿಯು ಮುಕ್ತ ಹೊದಿಕೆಯಿಂದ ಕೂಡಿದ್ದು ಕಟ್ಟಡದ ನಿರ್ಮಾಣಕ್ಕೆ ಅವಾಹಕ ಗ್ಲಾಸ್ ರಿಇನ್‌ಫೋರ್ಸ್‌ಡ್ ಕಾಂಕ್ರೀಟ್ ಬಳಸಿ ಸ್ವಾಭಾವಿಕ ಗಾಳಿ-ಬೆಳಕು ಧಾರಾಳ ಸಿಗುವಂತೆ ರೂಪಿಸಲಾಗಿದೆ. ಇದರಿಂದ ಮಸೀದಿಯೊಳಗೆ ಬಿಸಿಲಿನ ಧಗೆ ಮತ್ತಷ್ಡು ಕಡಿಮೆಯಾಗುವಂತೆ ಮಾಡಲಾಗಿದೆ. ಮಸೀದಿಯ ಮಿನಾರ ಕೇವಲ ಪ್ರಾರ್ಥನೆಗೆ ಕರೆನೀಡಲು ಹಾಗೂ ಸೌಂದರ್ಯ ಹೆಚ್ಚಿಸಲು ಮಾತ್ರ ಸೀಮಿತವಾಗದೇ, ೭೦ ಅಡಿ ಎತ್ತರದ ಬಹೋಪಯೋಗಿ ಮಿನಾರದಿಂದ ಒಳ ಬರುವ ತಂಗಾಳಿ ಪ್ರಾರ್ಥನಾ ಸಭಾಂಗಣವನ್ನು ತಣ್ಣಗಾಗಿಸುತ್ತದೆ. ಈ ಮಿನಾರದ ಮೇಲೆಯೇ ಗಾಳಿಯನ್ನು ಬಳಸಿ ವಿದ್ಯುತ್ ಉತ್ಪಾದಿಸುವ ವಿಂಡ್ ಟರ್ಬೈನನ್ನು ಅಳವಡಿಸಲಾಗಿದೆ. ಇದರಿಂದಾಗಿ ಮಸಿದಿಗೆ ಅತೀ ಕಡಿಮೆ ವಿದ್ಯುತ್ ಬಳಕೆಯಾಗುತ್ತದೆ. ವಾಚನಾಲಯ, ಕೈಕಾಲು ತೊಳೆಯುವ ಸ್ಥಳ ಎಲ್ಲವೂ ವಿನೂತನ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಮಸೀದಿಯ ಆವರಣದಲ್ಲಿರುವ ತೆಂಗಿನ ಮರಗಳು ಮತ್ತು ಮಾವಿನ ಮರವನ್ನು ಹಾಗೆಯೆ ಇಟ್ಟು ಮಸೀದಿಯನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: ಕುಂದಾಪುರದ ಕೋಡಿಯಲ್ಲಿ ವಿಶ್ವದ ಪ್ರಥಮ ಪರಿಸರ ಸ್ನೇಹಿ ಹಸಿರು ಮಸೀದಿ – http://kundapraa.com/?p=10421

Exit mobile version