Kundapra.com ಕುಂದಾಪ್ರ ಡಾಟ್ ಕಾಂ

ತಗ್ಗರ್ಸೆ ಮೊಗವೀರ ಗರಡಿ ಶ್ರೀ ಜೈನ ಜಟ್ಟಿಗೇಶ್ವರ ದೈವಸ್ಥಾನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಹಾಲುಹಬ್ಬ

ಬೈಂದೂರು: ಇಲ್ಲಿನ ಬಹುಪ್ರಸಿದ್ಧ ಪುರಾತನ ಕಾರಣಿಕ ಕ್ಷೇತ್ರ ತಗ್ಗರ್ಸೆ ದೊಡ್ಡ ಮೊಗವೀರ ಗರಡಿ ಶ್ರೀ ಜೈನ ಜಟ್ಟಿಗೇಶ್ವರ ದೈವಸ್ಥಾನದಲ್ಲಿ ಜನವರಿ 16ರಿಂದ 20ರ ವರೆಗೆ ಶ್ರೀ ಜೈನ ಜಟ್ಟಿಗೇಶ್ವರ ಮತ್ತು ಸಪರಿವಾರ ದೈವ ಹಾಗೂ ನಾಗದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವಾರ್ಷಿಕ ಗೆಂಡಸೇವೆ, ಹಾಲುಹಬ್ಬ ವಿಜೃಂಭಣೆಯಿಂದ ಜರುಗಲಿದೆ.

ದೊಡ್ಡಮೊಗವೀರ ಗರಡಿಯಲ್ಲಿ ಶ್ರೀ ಜೈನಜಟ್ಟಿಗೇಶ್ವರ ಹಾಗೂ ನಲವತ್ತೆಂಟು ಸಪರಿವಾರ ದೈವಗಳಿವೆ. ಅನಾದಿ ಕಾಲದಿಂದಲೂ ಪೂಜಿಸುತ್ತಾ ಬಂದಿರುವ ಈ ದೈವಸ್ಥಾನದ ಬಗ್ಗೆ ಭಕ್ತರಲ್ಲಿಯೂ ಅಪಾರವಾದ ನಂಬಿಕೆ ಬೇರೂರಿದೆ. ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ತಾನು ನಂಬಿದ ದೈವವನ್ನು ಸ್ಮರಿಸಿದರೇ ಕಷ್ಟ ದೂರವಾಗುವುದು ಎಂಬುದು ಹಲವಾರು ನಿದರ್ಶನಗಳ ಮೂಲಕವೂ ಸಾಬೀತಾಗಿದೆ. ಹಾಗಾಗಿಯೇ ವರ್ಷಕ್ಕೊಮ್ಮೆಯಾದರೂ ಎಲ್ಲಿಯೇ ಇರಲಿ ಮೊಗವೀರ ಗರಡಿಗೆ ಬಂದು ದೇವರಿಗೆ ಹರಕೆ, ಪೂಜೆ ಸಲ್ಲಿಸಿ ತೆರಳುತ್ತಾರೆ. ತಗ್ಗರ್ಸೆ, ಬೈಂದೂರು ಭಾಗದ ಭಕ್ತರಷ್ಟೇ ಅಲ್ಲದೇ ಉಡುಪಿ, ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಯ ಜನರು, ಬೆಂಗಳೂರು, ಮುಂಬೈಗಳಲ್ಲಿ ನೆಲೆಸಿರುವವರು ತಾವು ನಂಬಿದ ದೇವರನ್ನು ಕಾಣಲು ಹಬ್ಬದ ದಿನ ಬಂದು, ಹರಕೆ, ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಇದು ಅಂದಿನಿಂದ ಇಂದಿನ ವರೆಗೂ ನಡೆದು ಬಂದಿದೆ.

ಬಹಳ ಪುರಾತನವಾದ ದೈವಸ್ಥಾನ ಮೊದಲು ಹುಲ್ಲಿನ ಹೊದಿಕೆಯಿಂದ ಕೂಡಿತ್ತು. ಮುಂದೆ ಹಂಚಿನ ಹೊದಿಕೆ ಮಾಡಲಾಯಿತು. ಕಾಲಕ್ರಮೇಣ ಭಕ್ತರ ಸಹಕಾರದಿಂದ ದೈವಸ್ಥಾನ ಸುಸಜ್ಜಿತ ಕಾಂಕ್ರಿಟ್ ಹೊದಿಕೆಯೊಂದಿಗೆ ನಿರ್ಮಾಣಗೊಂಡಿತು. ದೈವಸ್ಥಾನದಲ್ಲಿ ದಿನಪೂಜೆ, ಸಂಕ್ರಾಂತಿ ಪೂಜೆ ಹಾಗೂ ವಾರ್ಷಿಕ ಪೂಜೆಗಳು ಕ್ರಮವತ್ತಾಗಿ ನಡೆದು ಬಂದಿದೆ. ಜೀರ್ಣೋದ್ಧಾರವಾದ ಬಳಿಕ ನಂಬಿದ ಭಕ್ತರು ತನು ಮನ ಧನ ಸಹಾಯ ಮಾಡಿದ್ದರಿಂದಾಗಿ ಎರಡು ದಿನದ ಅನ್ನಸಂತರ್ಪಣೆ ನಡೆಸಿಕೊಂಡು ಬರಲಾಗುತ್ತಿದೆ. ದೇವರನ್ನು ನಂಬಿದ ಕುಟುಂಬದವರು ತಮ್ಮ ಸ್ವಇಚ್ಛೆಯಿಂದ ಅನ್ನಸಂತರ್ಪಣೆ ಸೇವೆಗೆ ಮುಂದಾಗುತ್ತಿದ್ದು 2027ರ ವರೆಗೆ ಈ ಸೇವೆಗಾಗಿ ಮುಂಗಡ ಹೆಸರು ನೊಂದಾಯಿಸುವುದು ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಗಿದೆ.

ಐದು ದಿನಗಳ ಕಾರ್ಯಕ್ರಮ:
ಜ.16 ಸಂಜೆ ಹಾಗೂ ಜ.17ರಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೇರವೇರಿದರೇ, ಎರಡನೇ ದಿನ ರಾತ್ರಿ ಮಯ್ಯಾಡಿ ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ ಜರುಗಲಿದೆ. ಜನವರಿ 18ರಂದು ಬ್ರಹ್ಮಕಲಶಾಭಿಶೇಷ, ಪೂರ್ಣಹುತಿ, ಮಹಾಮಂಗಳಾರತಿಯ ಬಳಿಕ ಮಹಾ ಅನ್ನಸಂತರ್ಪಣೆ ನಡೆದರೇ, ಅದೇ ದಿನ ಬೆಳಿಗ್ಗೆ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ, ರಾತ್ರಿ ಕಲಾತರಂಗ ಬಸ್ರೂರು ಕಲಾವಿದರಿಂದ ಸಾದ್ನಿ ಮಾಡದ್ ಯಾರ್? ನಾಟಕ ಪ್ರದರ್ಶನಗೊಳ್ಳಲಿದೆ. ಜನವರಿ 19ರ ಸಂಜೆ ಬಸ್ರೂರು ಜಗದೀಶ ಕುಮಾರ್ ಮತ್ತು ಬಳಗದಿಂದ ಭಕ್ತಿ ರಸಮಂಜರಿ ರಾತ್ರಿ ಗೆಂಡಸೇವೆ ಹಾಗೂ ಅನ್ನಸಂತರ್ಪಣೆ, ಬಳಿಕ ಶನೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ನೂತನ ಪ್ರಸಂಗ ಯಕ್ಷಗಾನ ಬಯಲಾಟ ನಡೆಯಲಿದೆ. ಜ.20ರಂದು ಮಹಾ ಅನ್ನಸಂತರ್ಪಣೆಯೊಂದಿಗೆ ವಾರ್ಷಿಕ ಧಾರ್ಮಿಕ ಉತ್ಸವ ಸಮಾಪನಗೊಳ್ಳಲಿದೆ.

Exit mobile version