ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ತನ್ನ ಮನೆಯಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ ಘಟನೆ ರಾತ್ರಿ ವೇಳೆ ನಡೆದಿದೆ. ಗಂಗೊಳ್ಳಿಗೆ ಸಮೀಪದ ಕಂಚುಗೋಡು ನಿವಾಸಿ ರಿಕ್ಸನ್ ಡಯಾಸ್(17) ಮೃತ ಯುವಕ.
ಘಟನೆಯ ವಿವರ:
ಕಂಚಿಗೋಡು ನಿವಾಸಿ ವಾಲ್ಟರ್ ಡಯಾಸ್ ಹಾಗೂ ಜನಿಟಾ ಡಯಾಸ್ ದಂಪತಿಗಳ ಮಗನಾದ ರಿಕ್ಸನ್ ಡಯಾಸ್ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ದ್ವಿತೀಯ ಪಿಯುಸಿ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಯಾಗಿದ್ದ. ಪರೀಕ್ಷೆ ತಯಾರಿಗಾಗಿ ರಜೆಯಿದ್ದುದರಿಂದ ಮನೆಯಲ್ಲಿಯೇ ಅಭ್ಯಸಿಸುತ್ತಿದ್ದ. ಆರೋಗ್ಯವಂತನಾಗಿದ್ದ ಯುವಕ ರಾತ್ರಿ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಏಕಾಏಕಿ ನರಳಿ ಮೃತಪಡಲು ಕಾರಣ ಮಾತ್ರ ತಿಳಿದುಬಂದಿಲ್ಲ. ತಂದೆ ತಾಯಿ ಅಂಗಡಿಯ ಕೆಲಸಕ್ಕೆ ತೆರಳಿದ್ದರಿಂದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಅಣ್ಣ ಕೆಲಸ ಮುಗಿಸಿ ಮನೆಗೆ ಬಂದಾಗ ರಿಕ್ಸನ್ ಸೋಫಾದ ಮೇಲೆ ನರಳಾಡುತ್ತಿರುವುದನ್ನು ಗಮನಿಸಿ ಕೂಡಲೇ ಹೆಲ್ಪ್ ಲೈನ್ ಮೂಲಕ ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗಮಧ್ಯದಲ್ಲೇ ರಿಕ್ಸನ್ ಪ್ರಾಣಕಳೆದುಕೊಂಡಿದ್ದಾರೆ. ಆತ ನರಳಾಡುತ್ತಿರುವಾಗ ಬಾಯಿಂದ ನೊರೆ ಬರುತ್ತಿತ್ತು ಎನ್ನಲಾಗಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಮರಣೋತ್ತರ ಪರಿಕ್ಷೆಗಾಗಿ ಮೃತದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.