Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಮತದಾರರ ದಿನ ಆಚರಣೆ

ಬೈಂದೂರು: ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನಮ್ಮ ದೇಶದಲ್ಲಿ ಈ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಾದರೆ ಧರ್ಮ, ಜಾತಿ, ಭಾಷೆಗಳೆಂಬ ಭೇಧಭಾವ ತೊರೆದು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ನಿರ್ಭಿತಿಯಿಂದ ಪ್ರತಿಯೊಬ್ಬರೂ ಮತಚಲಾಯಿಸಬೇಕು ಎಂದು ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಹೇಳಿದರು.

ಉಪ್ಪುಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಜೇಸಿಐ ಘಟಕದ ಸಹಯೋಗದಲ್ಲಿ ನಡೆದ ಮತದಾರರ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜೇಸಿಐ ಅಧ್ಯಕ್ಷ ನರಸಿಂಹ ಹಳಗೇರಿ ಮಾತನಾಡಿ, ಹಣದ ಪ್ರಭಾವದಿಂದ ಈಗಿನ ಚುನಾವಣೆಗಳು ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈ ನೆಲೆಯಲ್ಲಿ ಹಣದ ಆಮಿಷಗಳಿಗೆ ಒಳಗಾಗದೇ ದೇಶದ ಅಭಿವೃದ್ಧಿಯ ದೃಷ್ಠಿಯಿಂದ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜತೆಗೆ ಆತ್ಮಸಾಕ್ಷಿಯಾಗಿ ಮತಚಲಾಯಿಸಿ ಸಧೃಡ ದೇಶ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಕರೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಯು. ರಾಜಾರಾಮ ಪಡಿಯಾರ್ ಮತ್ತು ಮುಖ್ಯಶಿಕ್ಷಕ ಮಹಾಬಲ ಗೌಡ ನೂತನ ಮತದಾರರಿಗೆ ಶುಭಹಾರೈಸಿದರು. ಗ್ರಾಮ ಲೆಕ್ಕಿಗ ಮಂಜು ಬಿಲ್ಲವ, ರೂಪೇಶ್ ಮತಗಟ್ಟೆ ಅಧಿಕಾರಿ ನರಸಿಂಹ ಉಪಸ್ಥಿತರಿದ್ದರು. ಎನ್.ಕೆ.ಬಿಲ್ಲವ ಸ್ವಾಗತಿಸಿ, ಸುಬ್ರಹ್ಮಣ್ಯ ಗಾಣಿಗ ನಿರೂಪಿಸಿದರು. ಜೇಸಿಐ ಕಾರ್ಯದರ್ಶಿ ಮಂಜುನಾಥ ದೇವಾಡಿಗ ವಂದಿಸಿದರು. ಈ ಭಾಗಕ್ಕೆ ಪ್ರಥಮ ಭೇಟಿನೀಡಿದ ವಿಶೇಷ ತಹಶೀಲ್ದಾರರನ್ನು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ನಿತ್ಯಾನಂದ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗೌರವ ವಂದನೆ ಸಲ್ಲಿಸಿದರು.

Exit mobile version