Kundapra.com ಕುಂದಾಪ್ರ ಡಾಟ್ ಕಾಂ

ಫೆ.9-13: ವತ್ತಿನಕಟ್ಟೆಯಲ್ಲಿ ಲಕ್ಷಮೋದಕ ಗಣಪತಿ ಮಹಾಯಾಗ, ಚತುಃಪವಿತ್ರ ನಾಗಮಂಡಲೋತ್ಸವ

ಬೈಂದೂರು: ಇಲ್ಲಿನ ಐತಿಹಾಸಿಕ ಪ್ರಸಿದ್ದ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಫೆ.09ರಿಂದ ಫೆ.13ರವರೆಗೆ ನಡೆಯಲಿರುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗ ಮತ್ತು ಫೆ.13ರಂದು ನಡೆಯುವ ವಿಶೇಷ ಚತುಃಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ದತೆ ಪೂರ್ಣಗೊಂಡಿದೆ.

ಧಾರ್ಮಿಕ ಪೂಜೆಗಳು ನಡೆಯುವ ಸ್ಥಳದಲ್ಲಿ ಬೃಹತ್ ಚಪ್ಪರ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಸುಮಾರು 20 ಸಾವಿರ ಜನರು ಕುಳಿತುಕೊಳ್ಳಬಹುದಾದ ಅನ್ನಸಂತರ್ಪಣೆ ಚಪ್ಪರಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿಯೊಂದು ಹಂತದಲ್ಲಿಯೂ ಕೂಡಾ ಸ್ವಯಂಸೇವಕರು ವಿಶೇಷ ಮುತುವರ್ಜಿವಹಿಸಿ ಕೆಲಸ ಮಾಡುತ್ತಿದ್ದಾರೆ.

ಫೆ.09 ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿ-ವಿಧಾನಗಳು ಪ್ರಾರಂಭಗೊಳ್ಳಲಿದೆ. ಸಂಜೆ ರಾಕ್ಷೋಘ್ನಹೋಮ, ವಾಸ್ತುಪೂಜೆ, ಬಲಿ ಕುಂಡಮಂಟಪ ಸಂಸ್ಕಾರ, ಅಗ್ನಿಜನನ ನಡೆಯಲಿದೆ. ಫೆ.10ರಂದು ಬೆಳಿಗ್ಗೆ ಲಕ್ಷಮೋದಕ ಗಣಪತಿ ಮಹಾಯಾಗಾರಂಭ ಹಾಗೂ ಸಂಜೆ ವಿಶೇಷ ಪೂಜೆ, ಅಷ್ಟಾವಧಾನ ಸೇವೆ, ಶ್ರೀಮಹಾಸತಿ ಅಮ್ಮನವರ ಸನ್ನಿಧಿಯಲ್ಲಿ ವರ್ಧಂತಿ ಅಂಗವಾಗಿ ಅಷ್ಟೋತ್ತರ ಶತಕಲಶ ಸ್ಥಾಪನೆ, ಕಲಾತತ್ವಹೋಮ ನಡೆಯಲಿದೆ.

ಫೆ.11ರಂದು ಬೆಳಿಗ್ಗೆ ಲಕ್ಷಮೋದಕ ಗಣಪತಿ ಮಹಾಯಾಗ, ಶ್ರೀಮಹಾಸತಿ ಅಮ್ಮನವರಿಗೆ ಬ್ರಹ್ಮಕಲಾಶಾಭಿಷೇಕ, ಮಹಾಪೂಜೆ ಹಾಗೂ ಸಂಜೆ 4ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ. ನಂತರ ಬೈಂದೂರು ಲಾವಣ್ಯ ಕಲಾವಿದರಿಂದ ನಾಟಕ, ರಿದಂ ಕಲಾತಂಡದವರಿಂದ ನೃತ್ಯ ವೈಭವ, ರಾಮಚಂದ್ರ ಹೇನ್‌ಬೇರು ಇವರಿಂದ ಗಾನವೈಭವ ಜರುಗಲಿದೆ. ಫೆ.12ರಂದು ಬೆಳಿಗ್ಗೆ ಲಕ್ಷಮೋದಕ ಗಣಪತಿ ಮಹಾಯಾಗ, ನಾಗಮಂಡಲೋತ್ಸವ ಆರಂಭ ಹಾಗೂ ಸಂಜೆ 4ಕ್ಕೆ ಧಾರ್ಮಿಕ ಸಭೆ. ಬಳಿಕ ಸುರಭಿ ತಂಡದ ಸದಸ್ಯರಿಂದ ನೃತ್ಯ-ನಾಟ್ಯ-ವೈಭವ ನಡೆಯಲಿದೆ. ಇದು ಕುಂದಾಪ್ರ ಡಾಟ್ ಕಾಂ ಸುದ್ದಿ.  ಫೆ.13ರಂದು ಲಕ್ಷಮೋದಕ ಗಣಪತಿ ಮಹಾಯಾಗ ಮಹಾಪೂರ್ಣಾಹುತಿ, ಮಧ್ಯಾಹ್ನ ಧಾರ್ಮಿಕಸಭೆಯಲ್ಲಿ ಸಿರ್ಸಿ ಸೋದಾ ಸ್ವರ್ಣವಲ್ಲಿ ಪೀಠಾಧಿಪತಿ ಶ್ರೀಮದ್ ಗಂಗಾಧರೇಂದ್ರ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸಂಜೆ 7ರ ಧಾರ್ಮಿಕಸಭೆಯಲ್ಲಿ ಕಟಪಾಡಿ ವೇಣುಗಿರಿಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿಲಿದ್ದಾರೆ. ನಂತರ ಆಯ್ದ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಅಕಾಶವಾಣಿ ಕಲಾವಿದ ಗಣೇಶ ಗಂಗೊಳ್ಳಿ ಇವರಿಂದ ಗಾನಸುಧೆ, ರಾತ್ರಿ 12ಕ್ಕೆ ವಿದ್ಯಾಧರ ಕಲಾಬಳಗ ಜಳವಳ್ಳಿ ಇವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Exit mobile version