Kundapra.com ಕುಂದಾಪ್ರ ಡಾಟ್ ಕಾಂ

ಚುಕ್ಕಿ ಚಂದ್ರಮ-ಶಿಕ್ಷಕರಿಗಾಗಿ ಆಕಾಶ ವೀಕ್ಷಣೆ ಕಾರ್ಯಕ್ರಮ

ಕುಂದಾಪುರ: ಶ್ರೀ ವೆಂಕಟರಮಣದೇವ ಶಿಕ್ಷಣ ಮತ್ತು ಸಂಸ್ಕೃತಿ ಪ್ರತಿಷ್ಠಾನ ಮತ್ತು ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆಶ್ರಯದಲ್ಲಿ ಕುಂದಾಪುರ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಜತೆಯಾಗಿ ಚುಕ್ಕಿ-ಚಂದ್ರಮ ಎಂಬ ಆಕಾಶ ವೀಕ್ಷಣೆ ಕಾರ‍್ಯಕ್ರಮ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಉಡುಪಿ ಪೂರ್ಣಪ್ರಜ್ಞ ಕಾಲೇಜ್ ಭೌತಶಾಸ್ತ್ರ ಪ್ರಾಧ್ಯಾಪP ಡಾ. ಎ. ಪಿ ಭಟ್, ಆಕಾಶ ಕಾಯಗಳ ಚಲನೆ, ನಕ್ಷತ್ರಗಳ ಹುಟ್ಟು ಸಾವು, ಗ್ರಹಣಗಳು, ನಕ್ಷತ್ರಪುಂಜಗಳು ಮುಂತಾದ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ, ಸಂವಾದ ಚರ್ಚೆ ನಡೆಸಿದರು.  ದೂರದರ್ಶಕದ ಮೂಲಕ ಚಂದ್ರನ ಮೇಲ್ಮೈ ರಚನೆಯನ್ನು ವೀಕ್ಷಿಸಲಾಯಿತು. ಉಡುಪಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ಧೇಶಕರಾದ ಶ್ರೀ ಎಚ್. ದಿವಾಕರ ಶೆಟ್ಟಿಯವರು ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು.

ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಶ್ರೀ ವೆಂಕಟರಮಣ ಶಾಲೆ ಸಂಚಾಲಕ ರಾಧಾಕೃಷ್ಣ ಶೆಣೈ, ವೆಂಕಟರಮಣ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಶ್ರೀಪತಿ ಹೇರ್ಳೆ, ಪದವಿಪೂರ್ವ ಕಾಲೇಜ್ ಪ್ರಾಂಶುಪಾಲ ಗಣೇಶ ನಾಯಕ, ಪ್ರೌಢಶಾಲಾ ವಿಭಾಗ ಮುಖ್ಯ ಶಿಕ್ಷಕಿ ರೂಪಾ ಶೆಣೈ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಜಯಶೀಲಾ ಉಪಸ್ಥಿತರಿದ್ದರು.  ಸಮುದಾಯದ ಬಾಲಕೃಷ್ಣ ಕೆ.ಎಂ., ಸ್ವಾಗತಿಸಿದರು.  ಉದಯ ಗಾಂವಕಾರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಣ ಸಂಯೋಜಕಿ ಶ್ರೀಮತಿ ಅನಿತಾ ಶೆಟ್ಟಿ ನಿರೂಪಿಸಿದರು. ಸಮುದಾಯದ ಸದಾನಂದ ಬೈಂದೂರು ವಂದಿಸಿದರು.

Exit mobile version