Kundapra.com ಕುಂದಾಪ್ರ ಡಾಟ್ ಕಾಂ

ಯುವಶಕ್ತಿಯ ಕೈಯಲ್ಲಿ ದೇಶದ ಭವಿಷ್ಯ: ಯಡಿಯೂರಪ್ಪ

ಕುಂದಾಪುರ: ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಬಳಿಕ ಭಾರತದ ಸಂಸ್ಕೃತಿ, ಧರ್ಮ, ಆಚಾರ-ವಿಚಾರ ಹಾಗೂ ಅಭಿವೃದ್ದಿಗಳು ಹಿಂದೆಂದೂ ಕಾಣದ ಉಚ್ಚ್ರಾಯ ಮಟ್ಟಕ್ಕೆ ತಲುಪಿದ್ದು, ಪ್ರಚಂಚದಲ್ಲಿ ಭಾರತೀಯರು ತಲೆಯೆತ್ತಿ ತಿರುಗಾಡುವ ಸ್ಥಿತಿಗೆ ಬಂದಿದೆ. ಅಲ್ಲದೇ ಜಗತ್ತೇ ಭಾರತದತ್ತ ಮುಖಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಿ. ಎಸ್. ಯೆಡಿಯೂರಪ್ಪ ಹೇಳಿದರು.

ಕಿರಿಮಂಜೇಶ್ವರ ಗ್ರಾಪಂ ವ್ಯಾಪ್ತಿಯ ಕೊಡೇರಿಯಲ್ಲಿ ನಡೆದ ಜಿಪಂ, ತಾಪಂ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಸಿದ್ದರಾಮಯ್ಯನವರ ತುಘಲಕ್ ಸರಕಾರ ಆಡಳಿತದಲ್ಲಿ ರಾಜ್ಯದ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ಈ ಬಾರಿ ಎಲ್ಲಾ ಕಡೆಗಳಲ್ಲಿ ಜನಾಭಿಪ್ರಾಯ ಸರಕಾರದ ವಿರುದ್ದವಾಗಿದ್ದು, ಹೆಚ್ಚಿನ ಜಿಪಂ, ತಾಪಂಗಳು ಬಿಜೆಪಿಯ ವಶವಾಗಲಿದೆ ಎಂದರು.

ನಮ್ಮ ದೇಶದಲ್ಲಿರುವಷ್ಟು ಯುವಶಕ್ತಿ ವಿಶ್ವದಲ್ಲಿ ಎಲ್ಲೆಲ್ಲೂ ಇಲ್ಲ. ವಿದ್ಯಾವಂತ ಯುವಕ-ಯುವತಿಯರು ರಾಜಕೀಯಕ್ಕೆ ಬರುವುದರ ಮೂಲಕ ರಾಷ್ಟ್ರದ ಅಭಿವೃದ್ದಿಯ ಕುರಿತು ಚಿಂತನೆ ಮಾಡಬೇಕು. ದೇಶದ ಬಲ ಹೆಚ್ಚಿಸುವಲ್ಲಿ ಯುವಜನರ ಪಾತ್ರ ಹಿರಿದು ಎಂದ ಅವರು ಸ್ನಾತಕೋತ್ತರ (ಬಿಇ)ಪದವಿ ಪಡೆದು ಗ್ರಾಮಾಭಿವೃದ್ದಿಯ ಕುರಿತಾದ ವಿಶೇಷ ಅಸಕ್ತಿಯಿಂದ ಈ ಬಾರಿ ಜಿಲ್ಲಾ ಪಂಚಾಯತ್ ಚುನಾವಣೆಯ ಮೂಲಕ ರಾಜಕೀಯ ಪ್ರವೇಶ ಮಾಡಿದ ಬಿಜೆಪಿ ಅಭ್ಯರ್ಥಿ ಪ್ರಿಯದರ್ಶಿನಿಯ ಬಗ್ಗೆ ಬಿಎಸ್‌ವೈ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಕ್ಷೇತ್ರಾಧ್ಯಕ್ಷ ಬಿ. ಎಂ. ಸುಕುಮಾರ್ ಶೆಟ್ಟಿ, ಖಂಬದಕೋಣೆ ತಾಪಂ ಅಭ್ಯರ್ಥಿ ಮಹೇಂದ್ರ ಪೂಜಾರಿ, ಡಾ. ಕೊಡಂಚ ಉಪಸ್ಥಿತರಿದ್ದರು. ಬಿಎಸ್‌ವೈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರೂ. ೪೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕೊಡೇರಿ ಬಂದರು ಕಟ್ಟಡ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಇದರ ಮುಂದುವರಿದ ಕಾಮಗಾರಿಗೆ ಅನುದಾನ ನೀಡುವಂತೆ ಮೀನುಗಾರ ಮುಖಂಡರು ಸಂಸದರಿಗೆ ಪ್ರಸ್ತಾವನೆ ನೀಡಿದರು. ನಂತರ ಬಿಎಸ್‌ವೈ ಖಂಬದಕೋಣೆ ಶ್ರೀ ಗೋವಿಂದ ದೇವಸ್ಥಾನಕ್ಕೆ ಭೇಟಿ ನೀಡಿದರು.

Exit mobile version