Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು : ರೈಲ್ವೆ ಮೇಲ್ಸೆತುವೆಗಾಗಿ ಸಾರ್ವಜನಿಕರ ಪ್ರತಿಭಟನೆ

ಬೈಂದೂರು: ಬೈಂದೂರು-ಗಂಗನಾಡು ರಸ್ತೆ ಎಲ್.ಸಿ. ೭೩ ರೈಲ್ವೆಗೇಟ್ ಬಳಿ ಮೇಲ್ಸೆತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಬೈಂದೂರು ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ನೇತೃತ್ವದಲ್ಲಿ ಸಾರ್ವಜನಿಕರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ತಾಲೂಕು ಕೇಂದ್ರದ ಹೊಸ್ತಿಲಲ್ಲಿರುವ ಬೈಂದೂರು ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿದ್ದು, ಇಲ್ಲಿಗೆ ಸೂರ‍್ಕುಂದ, ಕಲ್ಮಕ್ಕಿ, ಗಂಗನಾಡು, ಮೊದಲಾದ ಭಾಗದ ಜನರು ತೆರಳಬೇಕಾದರೆ ರೈಲು ಮಾರ್ಗವನ್ನು ಹಾದುಹೋಗಬೇಕಾಗಿದೆ. ಆದರೆ ಇಲ್ಲಿ ರೈಲುಗೇಟ್ ಅಳವಡಿಸಿದ್ದು, ಪ್ರತಿದಿನ ಹತ್ತಾರು ರೈಲುಗಳು ಈ ಮಾರ್ಗವಾಗಿ ಸಂಚರಿಸತ್ತಿರುತ್ತವೆ. ಆದರೆ ಇಲ್ಲಿ ಓಡಾಡುವ ಜನರಿಗೆ ಹಾಗೂ ವಾಹನಗಳ ಸಂಚಾರಕ್ಕೆ ರೈಲ್ವೆಗೇಟ್ ಅಡ್ಡಿಯಾಗಿದೆ. ಶೀಘ್ರವಾಗಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅಲ್ಲದೇ ಈಗ ಕೊಂಕಣ ರೈಲ್ವೆ ನಿಗಮವು ಈ ರೈಲ್ವೆ ಮಾರ್ಗದಲ್ಲಿ ದ್ವಿಪಥ(ಎರಡು ಹಳಿಗಳನ್ನು) ನಿರ್ಮಿಸುವ ಯೋಜನೆಗೆ ಚಾಲನೆ ನೀಡಿದ್ದು, ಮುಂದಿನ ದಿನದಲ್ಲಿ ಈ ಮಾರ್ಗವಾಗಿ ರೈಲುಗಳ ಓಡಾಟ ಹೆಚ್ಚಾಗಲಿದೆ. ಇದರಿಂದಾಗಿ ವಿದ್ಯಾರ್ಥಿಗಳು, ನೌಕರಸ್ಥರು, ರೋಗಿಗಳು, ಕೂಲಿ ಕಾರ್ಮಿಕರ ಓಡಾಟ ದುಸ್ತರವಾಗುತ್ತದೆ. ಹೀಗಾಗಿ ಕೊಂಕಣ ರೈಲ್ವೆ ನಿಗಮವು ಈಗಾಗಲೇ ವಶಪಡಿಸಿಕೊಂಡಿರುವ ಭೂಮಿಯನ್ನೇ ಬಳಸಿಕೊಂಡು ಆದಷ್ಟು ಶೀಘ್ರದಲ್ಲಿ ಈ ರೈಲ್ವೆಗೇಟಿಗೆ ಪರ್ಯಾಯವಾಗಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕೊಂಕಣ ರೈಲ್ವೆನಿಗಮದ ಎಇಎನ್ ಗೋಪಾಲಕೃಷ್ಣ, ಈ ಕೆಲಸ ತನ್ನ ಕಾರ್ಯವ್ಯಾಪ್ತಿಯ ಹೊರಗಿದ್ದು ನಾನು ಭರವಸೆ ಕೊಡಲು ಸಾಧ್ಯವಿಲ್ಲ. ನಿಮ್ಮ ಮನವಿಯನ್ನು ಮೇಲಾಧಿಕಾರಿಗೆ ತಲುಪಿಸಿ ವಸ್ತುಸ್ಥಿತಿಯನ್ನು ಮನದಟ್ಟು ಮಾಡುವ ಕೆಲಸ ಮಾಡುತ್ತೇನೆ ಎಂದರು. ಅವರಿಗೆ ಮಾತನಾಡಲೂ ಬಿಡದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು. ನಂತರ ಶಾಸಕ ಕೆ. ಗೋಪಾಲ ಪೂಜಾರಿ ಪ್ರತತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ಎಲ್‌ಕೆಜಿ, ಯುಕೆಜಿ, ಒಂದು-ಎರಡು ಕ್ಲಾಸಿನ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಮೂರು ವಿವಿಧ ಖಾಸಗಿ ಶಾಲಾವಾಹನಗಳನ್ನು ಪ್ರಭಟನಾಕಾರರು ಗೇಟ್ ಬಳಿ ತಡೆಹಿಡಿದ ಪರಿಣಾಮ ಚಿಕ್ಕ ಮಕ್ಕಳು ತಮಗೇನೂ ತಿಳಿಯಲಿಲ್ಲವೆಂಬ ಹಾಗೆ ಬಸ್ಸಿನಲ್ಲಿಯೆ ಆಟವಾಡಿದರು. ಈ ವಿಷಯ ತಿಳಿಯುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ಪರ್ಯಾಯ ವಾಹನದ ವ್ಯವಸ್ಥೆಯೊಂದಿಗೆ ಶಾಲೆಗೆ ಕಳುಹಿಸಿದರು.

ಹಿರಿಯ ನಾಗರಿಕಾ ವೇದಿಕೆ ಅಧ್ಯಕ್ಷ ವಸಂತ ಹೆಗ್ಡೆ, ಕನ್ನಡ ಸಂಘದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಬಾಡ ಭಾಸ್ಕರ ಶೆಟ್ಟಿ ಸೇರಿದಂತೆ ಈ ಭಾಗದ ನೂರಾರು ಜನ ಪ್ರತಿಭಟನೆಯಲ್ಲಿ ಹಾಜರಿದ್ದರು. ಅಹಿತಕರ ಘಟನೆ ನಡೆಯದಂತೆ ಬೈಂದೂರು ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ತಂಡ ಹಾಗೂ ರೈಲ್ವೆ ಪೋಲಿಸ್ ಬಿಗು ಬಂದೋಬಸ್ತ್ ಏರ್ಪಡಿಸಿತ್ತು.

Exit mobile version