Kundapra.com ಕುಂದಾಪ್ರ ಡಾಟ್ ಕಾಂ

ದೃಢ ಭಕ್ತಿಯಿಂದ ಗುರಿ ಸಾಧನೆ: ಚನ್ನಕೇಶವ ಭಟ್ಟ

ಬೈಂದೂರು: ಪರಿಶುದ್ಧವಾದ ನಮ್ಮ ಭರತಭೂಮಿಯಲ್ಲಿ ದೇವರು-ದೈವ ಹಾಗೂ ಸನ್ನಿಧಿಯನ್ನು ಗುರುತಿಸುತ್ತೇವೆ. ಧೃಡವಾದ ಭಕ್ತಿ ಮತ್ತು ಶ್ರದ್ದೆಯಿಂದ ಜಾತಿ, ಮತ ಭೇಧವಿಲ್ಲದೇ ಸರ್ವರ ಸಹಕಾರ, ಒಗ್ಗಟ್ಟಿನಿಂದ ನಾವು ಏನನ್ನಾದರೂ ಸಾಧಿಸಬಹುದು. ಧರ್ಮದಿಂದ ಮಾನವನಿಗೆ ಸಹಬಾಳ್ವೆ, ನೆಮ್ಮದಿ ಹಾಗೂ ಸಂತೋಷ ದೊರೆಯುತ್ತದೆ ಎಂದು ಧಾರ್ಮಿಕ ಉಪನ್ಯಾಸಕ ಆನಗಳ್ಳಿ ಗಜಪುರದ ಚೆನ್ನಕೇಶವ ಗಾಯತ್ರಿ ಭಟ್ಟ ಹೇಳಿದರು.

ಬೈಂದೂರು ಶ್ರೀ ಮಹಾಸತಿ ಅಮ್ಮನವರ ಸನ್ನಿಧಾನದಲ್ಲಿ ಐದು ದಿನಗಳ ಪರ್ಯಂತ ನಡೆಯುತ್ತಿರುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗ ಹಾಗೂ ನಾಗಮಂಡಲೋತ್ಸವದ ನಾಲ್ಕನೇ ದಿನ ಧಾರ್ಮಿಕ ಉಪನ್ಯಾಸ ನೀಡಿದರು.

ದೇವಾಲಯಗಳು ಸಗುಣೋಪಾಸನೆ ಮಾಡುವ ಪವಿತ್ರಸ್ಥಳ. ಇಲ್ಲಿನ ಅರ್ಚಕರು ವೇದ ಮಂತ್ರಗಳಿಂದ ನಿಯಮಾನುಸಾರ ಸಾತ್ವಿಕ ಕಾರ್ಯಗಳನ್ನು ನಡೆಸಬೇಕು. ಉತ್ಸವಾದಿ ಅನ್ನದಾನದಿಂದ ಕ್ಷೇತ್ರದ ಅಭಿವೃದ್ಧಿ ಕಾಣಬಹುದು. ಅಲ್ಲದೇ ಭಕ್ತರ ಪಾಲುದಾರಿಕೆಯೂ ಮುಖ್ಯವಾಗಿರುತ್ತದೆ. ದೇವಾಲಯಗಳಲ್ಲಿ ನಡೆಯುವ ಕರ್ಮಕ್ಕೆ ವಿಶೇಷ ಫಲ ದೊರಕುವುದಲ್ಲದೇ ಅಚಲವಾದ ನಂಬಿಕೆಯಿಂದ ಪ್ರಾರ್ಥಿಸಿದಲ್ಲಿ ದೇವರ ಪರಿಪೂರ್ಣ ಅನುಗ್ರಹವಾಗುತ್ತದೆ ಎಂದರು.

ಧಾರ್ಮಿಕ ಕ್ಷೇತ್ರಗಳಲ್ಲಿರುವುದು ಕೇವಲ ಎರಡು ಪಕ್ಷಗಳು. ಒಂದು ಕೃಷ್ಣಪಕ್ಷ ಅಂದರೆ ಕರ್ಮ, ಇನ್ನೊಂದು ಶುಕ್ಲಪಕ್ಷ ಅಂದರೆ ಜ್ಞಾನ. ನಮ್ಮಲ್ಲಿರುವ ರಾಗದ್ವೇಷ, ಮನೆಯ ಸಮಸ್ಯೆಗಳ ಚರ್ಚೆ ಈ ಚೌಕಟ್ಟಿನಲ್ಲಿ ಸಲ್ಲುವುದಿಲ್ಲ. ಹೀಗಾಗಿ ಅಚ್ಚ ಭಾರತೀಯರಾಗಿ ಆತ್ಮ, ದೇಹಶುದ್ದರಾಗಿ ಯೋಗ-ಭಾಗ್ಯಕ್ಕಾಗಿ ಧಾರ್ಮಿಕ ಪರಂಪರೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ಪರಮೋನ್ನತಿಗಾಗಿ ಪ್ರಾರ್ಥಿಸಬೇಕು ಎಂದರು.

ಶ್ರೀಸೇನೇಶ್ವರ ದೇವ:ಳದ ಮಾಜಿ ಧರ್ಮದರ್ಶಿ ಅಣ್ಣಪ್ಪ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಕೊಲ್ಲೂರು ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಉದ್ಯಮಿಗಳಾದ ದಿವಾಕರ ಖಾರ್ವಿ ಗಂಗೊಳ್ಳಿ, ಡಿ.ಕೆ.ಮೊಗೇರ ಹೆಬ್ಳೆ ಭಟ್ಕಳ ಉಪಸ್ಥಿತರಿದ್ದರು. ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ ಪ್ರಾಸ್ತಾವಿಸಿದರು. ಸೇವಾಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಶಿವರಾಮ ಪೂಜಾರಿ ಯಡ್ತರೆ ವಂದಿಸಿದರು. ದಯಾನಂದ ಪಿ., ಗಣಪತಿ ಹೋಬಳೀದಾರ್ ನಿರೂಪಿಸಿದರು.

Exit mobile version